ಟೀಮ್ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಬಳಿಕ ಕಳೆದ ಕಳೆದ ಎರಡು ಪಂದ್ಯಗಳಿಗೂ ಅಲಭ್ಯವಾಗಿದ್ದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿಯೂ ಹಾರ್ದಿಕ್ ಆಡುವುದು ಅಸಂಭವ ಎನ್ನಲಾಗಿದೆ. ಈ ಮಧ್ಯೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾರ್ದಿಕ್ ಪಾಂಡ್ಯ ಗಾಯದ ವಿಚಾರವಾಗಿ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರು ಯಾವಾಗ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳುವುದು ಅಸಾಧ್ಯ ಎಂದಿರುವ ರೋಹಿತ್ ಶರ್ಮಾ ಅವರ ಚೇತರಿಕೆ ಎನ್ಸಿಎನಲ್ಲಿ ಬಹಳ ಸಕಾರಾತ್ಮಕವಾಗಿ ನಡೆಯುತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಬಳಿಕ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೆ ಹಾರ್ದಿಕ್ ಅಲಭ್ಯವಾಗಿದ್ದರು.

ಇನ್ನು ಹಾರ್ದಿಕ್ ಪಾಂಡ್ಯ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಎನ್ಸಿಎನಲ್ಲಿ ಟೀಮ್ ಇಂಡಿಯಾದ ಆಲ್ರೌಂಡರ್ನ ರಿಹ್ಯಾಬ್ ಅವಧಿ ವಿಸ್ತರಿಸಲಾಗಿದೆ. ಈ ಬಗ್ಗೆ ನಾಕ ರೋಹಿತ್ ಶರ್ಮಾ ಮಾಧ್ಯಮಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
"ಹಾರ್ದಿಕ್ ಪಾಂಡ್ಯ ಅವರ ಚೇತರಿಕೆ ಇಲ್ಲಿಯವರೆಗೆ ಬಹಳ ಸಕಾರಾತ್ಮಕವಾಗಿದೆ. ನಾನು ಇದನ್ನು ರಿಹ್ಯಾ ಎನ್ನುವುದಿಲ್ಲ. ಆದರೆ ಎನ್ಸಿಎನಲ್ಲಿ ಅವರ ಚೇತರಿಕೆ ಬಹಳ ಸಕಾರಾತ್ಮಕವಾಗಿ ಸಾಗುತ್ತಿದೆ" ಎಂದಿದ್ದಾರೆ ರೋಹಿತ್ ಶರ್ಮಾ. ಇದೇ ಸಂದರ್ಭದಲ್ಲಿ ಅವರು ಶ್ರೀಲಂಕಾ ವಿರುದ್ಧ ಗುರುವಾರ ನಡೆಯಲಿರುವ ಪಂದ್ಯಕ್ಕ ಹಾರ್ದಿಕ್ ಅಲಭ್ಯವಾಗಲಿದ್ದಾರೆ ಎನ್ನುವುದನ್ನು ಖಚಿತಪಡಿಸಿದ್ದಾರೆ.
ಇನ್ನು ಪಿಟಿಐ ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೂ ಲಭ್ಯವಾಗುವುದು ಅಸಾಧ್ಯ ಎನ್ನಲಾಗಿದೆ. ಆದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಟೀಮ್ ಇಂಡಿಯಾದ ಅಂತಿಮ ಲೀಗ್ ಪಂದ್ಯಕ್ಕೆ ಹಾರ್ದಿಕ್ ಲಭ್ತವಾಗುವ ಸಾಧ್ಯತೆಯಿದೆ ಎಂದು ವರದಿ ಮಾಡಿದೆ.
ಇನ್ನು ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ಆಡುವ ಬಳಗದಿಂದ ಹೊರಬಿದ್ದ ಬಳಿಕ ಆಡುವ ಬಳಗದಲ್ಲಿ ಬ್ಯಾಟರ್ ಸ್ಥಾನದಲ್ಲಿ ಸೂರ್ಯಕುಮಾರ್ಗೆ ಅವಕಾಶ ನೀಡಲಾಗಿದೆ. ಇನ್ನು ಶಾರ್ದೂಲ್ ಠಾಕೂರ್ ಆಡುವ ಬಳಗದಿಂದ ಹೊರಬಿದ್ದಿದ್ದು ಮೊಹಮ್ಮದ್ ಶಮಿಗೆ ಸ್ಥಾನ ದೊರೆತಿದೆ. ಇಬ್ಬರು ಆಟಗಾರರು ಕೂಡ ಆಡುವ ಬಳಗದಲ್ಲಿ ಗಮನಾರ್ಹ ಕೊಡುಗೆ ನೀಡಿ ಗಮನಸೆಳೆದಿದ್ದಾರೆ.
ಇನ್ನು ಟೀಮ್ ಇಂಡಿಯಾ ಈ ವಿಶ್ವಕಪ್ ಟೂರ್ನಿಯಲ್ಲಿ ಈವರೆಗೆ ಆರು ಪಂದ್ಯಗಳನ್ನು ಆಡಿದ್ದು ಎಲ್ಲಾ ಆರು ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿನ ಏಕೈಕ ಅಜೇಯ ತಂಡವಾಗಿದೆ ಟೀಮ್ ಇಂಡಿಯಾ.