
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಗೆದ್ದು ಬೀಗಿದೆ. ನಾಗ್ಪುರದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯ ಮೂರೇ ದಿನಕ್ಕೆ ಮುಕ್ತಾಯವಾಗಿದೆ. ಭಾರತದ ಮಾರಕ ಸ್ಪಿನ್ ದಾಳಿಗೆ ಸಿಕ್ಕ ಆಸ್ಟ್ರೇಲಿಯಾ ಇನ್ನಿಂಗ್ಸ್ ಮತ್ತು 132 ರನ್ಗಳ ಸೋಲನುಭವಿಸಿದೆ.
ಆಸ್ಟ್ರೇಲಿಯಾ ಭಾರತದ ವಿರುದ್ಧ ಸೋಲುವುದು ಖಚಿತವಾಗುತ್ತಿದ್ದಂತೆ ಆಸ್ಟ್ರೇಲಿಯಾದ ಕೆಲವು ಮಾಧ್ಯಮಗಳು ಮತ್ತು ಕೆಲ ಮಾಜಿ ಕ್ರಿಕೆಟಿಗರು ವಿವಾದವನ್ನು ಸೃಷ್ಟಿಸಲು ಯತ್ನಿಸಿದ್ದರು. ಮೊದಲನೇ ದಿನ ರವೀಂದ್ರ ಜಡೇಜಾ ಬೌಲಿಂಗ್ ವೇಳೆಯಲ್ಲಿ ಬೆರಳಿಗೆ ನೋವು ನಿವಾರಕ ಕ್ರೀಂ ಹಚ್ಚಿದ್ದರು.
ಈ ಘಟನೆಯನ್ನು ಕೆಲವು ಆಸ್ಟ್ರೇಲಿಯಾ ಮಾಧ್ಯಮಗಳು, ಮಾಜಿ ಕ್ರಿಕೆಟಿಗರು ವಿವಾದ ಮಾಡಲು ಬಳಸಿಕೊಂಡರು. ರವೀಂದ್ರ ಜಡೇಜಾ ಚೆಂಡು ವಿರೂಪಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದರು. ಆದರೆ, ಜಡೇಜಾ ಬೆರಳು ನೋವಿಗೆ ಕ್ರೀಮ್ ಹಚ್ಚಿಕೊಂಡಿದ್ದಾರೆ ಎಂದು ನಾಯಕ ರೋಹಿತ್ ಶರ್ಮಾ ಹೇಳಿದ್ದರು.
ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ರವೀಂದ್ರ ಜಡೇಜಾ ಬೆಂಬಲಕ್ಕೆ ನಿಂತಿದ್ದಾರೆ. ಘಟನೆಯ ಕುರಿತಂತೆ ಟ್ವೀಟ್ ಮಾಡಿದ್ದು ಜಡೇಜಾ ಯಾವ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ, ಆಸ್ಟ್ರೇಲಿಯಾ ಮಾಧ್ಯಮಗಳ ಬಾಯಿ ಮುಚ್ಚಿಸಿದ್ದಾರೆ.
ಘಟನೆಯನ್ನು ಸರಿಯಾಗಿ ನೋಡಿ
ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ಟ್ವೀಟ ಮಾಡಿ, " ನೀವು ಗಮನವಿಟ್ಟು ನೋಡಿದರೆ, ಮೊಹಮ್ಮದ್ ಸಿರಾಜ್ ಕೈಯಲ್ಲಿ ಕ್ರೀಮ್ ಇರುವುದನ್ನು ಗಮನಿಸಬಹುದು. ಜಡೇಜಾ ಅದನ್ನು ತಮ್ಮ ಬೆರಳಿಗೆ ಹಚ್ಚಿಕೊಂಡಿದ್ದಾರೆ ಹೊರತು ಚೆಂಡಿಗೆ ಕ್ರೀಮ್ ಲೇಪನ ಮಾಡಿಲ್ಲ. ಜಡೇಜಾ ಯಾವುದೇ ತಪ್ಪು ಮಾಡಿಲ್ಲ, ಇದರ ಬಗ್ಗೆ ಹೆಚ್ಚಿನ ಚರ್ಚೆ ಮಾಡುವ ಅಗತ್ಯವಿಲ್ಲ" ಎಂದು ಹೇಳುವ ಮೂಲಕ ವಿವಾದ ಮಾಡಲು ಯತ್ನಿಸಿದವರ ಬಾಯಿ ಮುಚ್ಚಿಸಿದ್ದಾರೆ.
ಜಡೇಜಾಗೆ ಬೆಂಬಲವಾಗಿ ನಿಂತು ಸತ್ಯ ಹೇಳಿದ್ದಕ್ಕೆ ಭಾರತದ ಕ್ರಿಕೆಟ್ ಅಭಿಮಾನಿಗಳು ಬ್ರಾಡ್ ಹಾಗ್ಗೆ ಧನ್ಯವಾದ ತಿಳಿಸಿದ್ದಾರೆ.

ಜಡೇಜಾಗೆ ಬಿತ್ತು ದಂಡ
ಜಡೇಜಾ ಯಾವುದೇ ತಪ್ಪು ಮಾಡಿಲ್ಲವಾದರು ಐಸಿಸಿ ಮಾತ್ರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಜಡೇಜಾಗೆ ಪಂದ್ಯದ ಶುಲ್ಕದ 25 ಪ್ರತಿಶತ ದಂಡ ವಿಧಿಸಿದ್ದು, 1 ಡಿಮೆರಿಟ್ ಅಂಕವನ್ನು ನೀಡಿದೆ.
ಅಂಪೈರ್ ಗಮನಕ್ಕೆ ತರದೆ ನೋವು ನಿವಾರಕ ಔಷಧಿಯನ್ನು ಹಚ್ಚಿಕೊಂಡಿದ್ದು ತಪ್ಪು ಎಂದು ಅದು ಅಭಿಪ್ರಾಯಪಟ್ಟಿದೆ. ರವೀಂದ್ರ ಜಡೇಜಾ ಚೆಂಡನ್ನು ವಿರೂಪಗೊಳಿಸಲು ಪ್ರಯತ್ನ ಮಾಡಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ.
ಪಂದ್ಯಕ್ಕೆ ಮೊದಲು ಪಿಚ್ ಬಗ್ಗೆ ಖ್ಯಾತೆ ತೆಗೆದಿದ್ದ ಆಸ್ಟ್ರೇಲಿಯಾ ಈಗ ಹೊಸ ವಿವಾದ ಮಾಡಲು ಯತ್ನಿಸಿದ್ದು ಭಾರತದ ಕ್ರೀಡಾಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ವಿರುದ್ಧ ಅಭಿಮಾನಿಗಳು ಕಿಡಿ ಕಾರಿದ್ದಾರೆ.