
ಭಾರತ ಆಸ್ಟ್ರೇಲಿಯಾ ನಡುವಿನ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಮೊದಲನೇ ದಿನವೇ ಭಾರತ ಮೇಲುಗೈ ಸಾಧಿಸಿದೆ. ನಾಗ್ಪುರದ ವಿಸಿಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆದರೆ ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಕ್ಕ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 177 ರನ್ಗಳಿಗೆ ಆಲೌಟ್ ಆದರು. ರವೀಂದ್ರ ಜಡೇಜಾ 5 ವಿಕೆಟ್ ಪಡೆದರೆ, ಅಶ್ವಿನ್ 3 ವಿಕೆಟ್ ಪಡೆದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಪಡೆದರು.
ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ ಮೊದಲನೇ ದಿನದ ಆಟ ಮುಕ್ತಾಯದ ವೇಳೆಗೆ 1 ವಿಕೆಟ್ ಕಳೆದುಕೊಂಡು 77 ರನ್ ಗಳಿಸಿದೆ. ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 69 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿದ ರೋಹಿತ್ ಆತ್ಮವಿಶ್ವಾಸದಿಂದಲೇ ಬ್ಯಾಟಿಂಗ್ ಮಾಡಿದರು.
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಉತ್ತಮ ಆರಂಭ ಪಡೆದರು, ದಿನದ ಆಟ ಮುಕ್ತಾಯವಾಗುವ ಕೊನೆ ಗಳಿಗೆಯಲ್ಲಿ 20 ರನ್ ಗಳಿಸಿದ್ದಾಗ ವಿಕೆಟ್ ಕೈಚೆಲ್ಲಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಟಾಡ್ ಮುರ್ಫಿ ಬೌಲಿಂಗ್ನಲ್ಲಿ ಸುಲಭ ಕ್ಯಾಚ್ ನೀಡಿ ಔಟಾದರು.

ಕೆಎಲ್ ರಾಹುಲ್ ಕಥೆ ಮುಗಿಯಿತು
71 ಎಸೆತಗಳನ್ನು ಎದುರಿಸಿ ಆತ್ಮವಿಶ್ವಾಸದಿಂದ ಆಡುತ್ತಿದ್ದ ರಾಹುಲ್ ಕೊನೆ ಗಳಿಗೆಯಲ್ಲಿ ಔಟಾಗಿದ್ದು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಈಗಾಗಲೇ ಕೆಎಲ್ ರಾಹುಲ್ ಭವಿಷ್ಯ ಅತಂತ್ರವಾಗಿದ್ದು, ಅವರಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಕೊಂಡರೆ ಮಾತ್ರ ತಂಡದಲ್ಲಿ ಉಳಿಗಾಲ ಎನ್ನುವಂತಾಗಿದೆ.
ರಾಹುಲ್ ಔಟ್ ಆಗಿದ್ದನ್ನು ನೋಡಿರುವ ಅಭಿಮಾನಿಗಳು ಕೆಎಲ್ ರಾಹುಲ್ಗೆ ಇದೇ ಕೊನೆಯ ಟೆಸ್ಟ್ ಸರಣಿ ಎಂದು ಹೇಳಿದ್ದಾರೆ. ಹೆಚ್ಚಿನ ಅವಕಾಶ ಪಡೆದರು ಪದೇ ಪದೇ ವಿಫಲವಾಗುತ್ತಿದ್ದಾರೆ, ಇದೇ ರೀತಿಯಾದರೆ ಅವರು ಮುಂದಿನ ದಿನಗಳಲ್ಲಿ ತಂಡದಲ್ಲಿ ಅವಕಾಶ ಪಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಶುಭಮನ್ ಗಿಲ್ ಬದಲಿಗೆ ಕೆಎಲ್ ರಾಹುಲ್ಗೆ ಅವಕಾಶ ನೀಡಿದ್ದಕ್ಕೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉತ್ತಮ ಫಾರ್ಮ್ನಲ್ಲಿದ್ದ ಶುಭಮನ್ ಗಿಲ್ಗೆ ಅವಕಾಶ ನೀಡುವುದನ್ನು ಬಿಟ್ಟು ಕೆಎಲ್ ರಾಹುಲ್ಗೆ ಅವಕಾಶ ಏಕೆ ಕೊದಬೇಕಿತ್ತು ಎಂದು ಹೇಳಿದ್ದಾರೆ.
ಮತ್ತೆ ಕೆಲವರು ಇದು ಕೆಎಲ್ ರಾಹುಲ್ಗೆ ಕೊನೆಯ ಟೆಸ್ಟ್ ಸರಣಿ, ಇನ್ನು ಆತನಿಗೆ ಭಾರತ ತಂಡದಲ್ಲಿ ಅವಕಾಶ ಸಿಗುವುದಿಲ್ಲ ಎಂದು ಹೇಳಿದ್ದಾರೆ.

ಕೆಎಲ್ ರಾಹುಲ್ಗೆ ಅವಕಾಶ ಬೇಡ ಎಂದಿದ್ದ ಕಪಿಲ್ ದೇವ್
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಕೂಡ ಕೆಎಲ್ ರಾಹುಲ್ ಬದಲಿಗೆ ಶುಭಮನ್ ಗಿಲ್ಗೆ ಅವಕಾಶ ನೀಡಬೇಕು ಎಂದು ಹೇಳಿದ್ದರು. ಕೆಎಲ್ ರಾಹುಲ್ ಉಪನಾಯಕನಾದರೂ ತಂಡದಲ್ಲಿ ಇರಲೇಬೇಕೆನ್ನುವ ನಿಯಮವಿಲ್ಲ, ಉತ್ತಮವಾಗಿ ಆಡುವವರಿಗೆ ಅವಕಾಶ ಕೊಡಿ ಎಂದು ಹೇಳಿದ್ದರು.
ಕೆಎಲ್ ರಾಹುಲ್ ಉತ್ತಮ ಆಟಗಾರ, ಆತನನ್ನು ನಾನು ಇಷ್ಟಪಡುತ್ತೇನೆ. ಆದರೆ ತಂಡಕ್ಕೆ ಆತನಿಂದ ಯಾವುದೇ ಕೊಡುಗೆ ಬರುತ್ತಿಲ್ಲ ಎನ್ನುವಾಗ ಅವಕಾಶ ಕೊಡುವುದರಲ್ಲಿ ಅರ್ಥ ಇಲ್ಲ ಎಂದಿದ್ದರು.
ಎರಡನೇ ಇನ್ನಿಂಗ್ಸ್ನಲ್ಲಿ ಕೆಎಲ್ ರಾಹುಲ್ ಉತ್ತಮವಾಗಿ ಆಡಿದರೆ ಮಾತ್ರ ಮುಂದಿನ ಪಂದ್ಯದಲ್ಲಿ ಅವರಿಗೆ ಅವಕಾಶ ಸಿಗಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.