
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 177 ರನ್ಗಳಿಗೆ ಆಲೌಟ್ ಆಗಿದೆ. ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆರಂಭದಲ್ಲೇ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿದರು. ಉಸ್ಮಾನ್ ಖವಾಜರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದ ಮೊಹಮ್ಮದ್ ಸಿರಾಜ್ ಕಾಂಗರೂಗಳ ಪತನಕ್ಕೆ ಮುನ್ನುಡಿ ಬರೆದರು.
ನಂತರ ಮೊಹಮ್ಮದ್ ಶಮಿ ಡೇವಿಡ್ ವಾರ್ನರ್ ಕ್ಲೀನ್ ಬೌಲ್ಡ್ ಮಾಡಿ ಮತ್ತೊಂದು ಆಘಾತ ನೀಡಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಸ್ಟೀವ್ ಸ್ಮಿತ್ ಉತ್ತಮ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಆಸರೆಯಾದರು.
ಈ ಜೋಡಿ ಮೂರನೇ ವಿಕೆಟ್ಗೆ 82 ರನ್ ಕಲೆಹಾಕಿತು. ನಂತರ ದಾಳಿಗಿಳಿದ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ತಂಡವನ್ನು ಕಾಡಿದರು. ಒಂದೇ ಓವರ್ ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ಮತ್ತು ಮ್ಯಾಟ್ ರೆನ್ಶಾ ವಿಕೆಟ್ ಪಡೆದು ಮಿಂಚಿದರು. 49 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಮಾರ್ನಸ್ ಲ್ಯಾಬುಸ್ಚಾಗ್ನೆ ವಿಕೆಟ್ ಪಡೆದುಕೊಂಡಿದ್ದ ಪಂದ್ಯದ ತಿರುವನ್ನು ಬದಲಿಸಿತು. ಈ ಆಘಾತದಿಂದ ಆಸ್ಟ್ರೇಲಿಯಾ ಸುಧಾರಿಸಿಕೊಳ್ಳಲೇ ಇಲ್ಲ.

5 ವಿಕೆಟ್ ಪಡೆದು ಮಿಂಚಿದ ಜಡೇಜಾ
ಸ್ಟೀವ್ ಸ್ಮಿತ್ 37 ರನ್ ಗಳಿಸಿದ್ದಾಗ ಜಡೇಜಾ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. 31 ರನ್ ಗಳಿಸಿದ್ದ ಪೀಟರ್ ಹ್ಯಾಂಡ್ಸ್ಕಾಂಬ್ ಜಡೇಜಾ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ಪದಾರ್ಪಣಾ ಪಂದ್ಯವನ್ನಾಡಿದ ಟ್ರಾಡ್ ಮರ್ಫಿಯನ್ನು ಕೂಡ ಎಲ್ಬಿಡಬ್ಲ್ಯೂ ಬಲೆಗೆ ಬೀಳಿಸುವ ಮೂಲಕ 5 ವಿಕೆಟ್ ಪಡೆದ ಸಾಧನೆ ಮಾಡಿದರು.
ರವೀಂದ್ರ ಜಡೇಜಾಗೆ ಉತ್ತಮವಾಗಿ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್ ಕೂಡ ಪ್ರಮುಖ 3 ವಿಕೆಟ್ ಪಡೆದು ಕಾಂಗರೂಗಳನ್ನು ಕಟ್ಟಿಹಾಕಿದರು. ಅಂತಿಮವಾಗಿ 63.5 ಓವರ್ ಗಳಲ್ಲಿ 177 ರನ್ ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ ಸರ್ವಪತನ ಕಂಡಿತು.
ಏಷ್ಯಾಕಪ್ ಸಂದರ್ಭದಲ್ಲಿ ಮೊಣಕಾಲು ಗಾಯಕ್ಕೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ರವೀಂದ್ರ ಜಡೇಜಾ ಮತ್ತೆ ಭರ್ಜರಿಯಾಗಿಯೇ ವಾಪಸಾಗಿದ್ದಾರೆ. ಕಳೆದ ಬಾರಿ ಭಾರತದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕೂಡ ರವೀಂದ್ರ ಜಡೇಜಾ ಪ್ರಮುಖ ಪಾತ್ರ ವಹಿಸಿದ್ದರು. ನಾಗ್ಪುರದಲ್ಲಿ ನಡೆಯುತ್ತಿರುವ ಮೊದಲನೇ ಪಂದ್ಯದ ಪ್ರಥಮ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಪಡೆದು ಆಸ್ಟ್ರೇಲಿಯಾ ತಂಡಕ್ಕೆ ಮಾರಕವಾಗುವ ಮುನ್ಸೂಚನೆ ನೀಡಿದ್ದಾರೆ.