
ನಾಗ್ಪುರದಲ್ಲಿ ನಡೆಯಲಿರುವ ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲನೇ ಟೆಸ್ಟ್ ಪಂದ್ಯಕ್ಕೆ ಭಾರತ ಮತ್ತು ಆಸ್ಟ್ರೇಲಿಯಾ ಸಜ್ಜಾಗಿವೆ. ಆದರೆ ಮೊದಲನೇ ಟೆಸ್ಟ್ ಪಂದ್ಯಕ್ಕಾಗಿ ಸಿದ್ಧಪಡಿಸಿರುವ ಪಿಚ್ ಬಗ್ಗೆ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ತೃಪ್ತರಾಗಿಲ್ಲ.
ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಕಳೆದ ಎರಡು ದಿನಗಳಿಂದ ಭಾರತ ತಂಡ ಅಭ್ಯಾಸ ಮಾಡುತ್ತಿದೆ. ಎರಡು ದಿನಗಳಿಂದ ಪಿಚ್ ಪರಿಶೀಲನೆ ನಡೆಸಿರುವ ರಾಹುಲ್ ದ್ರಾವಿಡ್ ಅಸಮಾಧಾನಗೊಂಡಿದ್ದಾರೆ. ಪಂದ್ಯ ಆರಂಭವಾಗಲು ಮೂರು ದಿನಗಳಿರುವಾಗ ಪಿಚ್ ಬದಲಿಸುವಂತೆ ಕ್ಯುರೇಟರ್ ಗೆ ಒತ್ತಾಯಿಸಿದ್ದಾರೆ.
ಜಾಗರಣ್ ಪತ್ರಿಕೆ ವರದಿ ಮಾಡಿರುವ ಪ್ರಕಾರ, ಕೋಚ್ ರಾಹುಲ್ ದ್ರಾವಿಡ್ ನಾಗ್ಪುರ ಪಿಚ್ ಮೇಲ್ಮೈ ಬಗ್ಗೆ ಅತೃಪ್ತರಾಗಿದ್ದಾರೆ. ಟೆಸ್ಟ್ಗೆ ಕೇವಲ ಮೂರು ದಿನಗಳು ಬಾಕಿ ಇರುವಾಗ ಪಿಚ್ ಬದಲಾವಣೆ ಮಾಡಲು ತಿಳಿಸಿದ್ದಾರೆ.
ಭಾರತ ತಂಡದ ಮನವಿಗೆ ತಕ್ಕಂತೆ ಪಿಚ್ ಸಿದ್ಧಗೊಳಿಸಲು ಅಧಿಕಾರಿಗಳು ಮತ್ತು ಕ್ಯುರೇಟರ್ಗಳು ಈಗ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಆಟಕ್ಕೆ ಸರಿಹೊಂದುವಂತೆ ಪಿಚ್ ಸಿದ್ಧಪಡಿಸುವುದು ಈಗ ಸವಾಲಾಗಿದೆ.

ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸಲು ಕೇಳಿದ್ದ ಟೀಂ ಇಂಡಿಯಾ
ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಈ ಮೊದಲು ಬಾರ್ಡರ್ ಗವಾಸ್ಕರ್ ಟ್ರೋಫಿಯ ನಾಲ್ಕು ಪಂದ್ಯಗಳು ನಡೆಯುವ ಕ್ರೀಡಾಂಗಣದಲ್ಲಿ ಸ್ಪರ್ಧಾತ್ಮಕ ಪಿಚ್ ಸಿದ್ಧಪಡಿಸುವಂತೆ ಕ್ಯುರೇಟರ್ ಗಳಿಗೆ ಮನವಿ ಮಾಡಿದ್ದರು.
ಆದರೆ, ಬದಲಾದ ಸನ್ನಿವೇಶದಲ್ಲಿ ಮೊದಲನೇ ಟೆಸ್ಟ್ನಲ್ಲಿ ಸ್ಪಿನ್ಗೆ ಅನುಕೂಲಕರವಾಗುವ ಪಿಚ್ ನಿರ್ಮಿಸಲು ಕೇಳಲಾಗಿದೆ. ಭಾರತದ ಪ್ರಮುಖ ಅಸ್ತ್ರ ಸ್ಪಿನ್ ಬೌಲಿಂಗ್ ಆಗಿರುವುದರಿಂದ ತವರಿನ ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದೆ.
ನಾಗ್ಪುರ ಪಿಚ್ ಸಾಮಾನ್ಯವಾಗಿ ಕೆಂಪು ಮಣ್ಣಿನ ಪಿಚ್ ಆಗಿದೆ. ಇಲ್ಲಿ ಮೊದಲ ಮೂರು ದಿನ ಬ್ಯಾಟಿಂಗ್ ಮಾಡಲು ಅನುಕೂಲಕರವಾಗಿದ್ದು, ನಂತರ ಸ್ಪಿನ್ನರ್ ಗಳಿಗೆ ಹೆಚ್ಚಿನ ನೆರವು ನೀಡುತ್ತದೆ.
2004ರಲ್ಲಿ ಭಾರತ vs ಆಸ್ಟ್ರೇಲಿಯಾ ಸರಣಿಯ ಸಂದರ್ಭದಲ್ಲಿ, ನಾಯಕ ಸೌರವ್ ಗಂಗೂಲಿ ಕೂಡ ನಾಗ್ಪುರದಲ್ಲಿ ಟರ್ನಿಂಗ್ ಪಿಚ್ಗಾಗಿ ಮನವಿ ಮಾಡಿದ್ದರು ಎಂದು ಜಾಗರಣ್ ವರದಿ ಮಾಡಿದೆ. ಆದರೂ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 342 ರನ್ಗಳಿಂದ ಗೆಲುವು ಸಾಧಿಸಿತ್ತು.
ನಾಯಕನಾಗಿ ರೋಹಿತ್ ಶರ್ಮಾಗೆ ಈ ಸರಣಿ ಬಹಳ ಮುಖ್ಯವಾಗಿದೆ. ಈ ಸರಣಿಯಲ್ಲಿ ಗೆಲುವು ಸಾಧಿಸಿದರೆ, ಭಾರತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಲಿದೆ.