
ಸುದೀರ್ಘ ವಿರಾಮದ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ರವೀಂದ್ರ ಜಡೇಜಾ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ನೀಡಿರುವ ರವೀಂದ್ರ ಜಡೇಜಾ ಮೊದಲಿಗೆ ಬೌಲಿಂಗ್ನಲ್ಲಿ ಐದು ವಿಕೆಟ್ ಗೊಂಚಲು ಪಡೆದು ಮಿಂಚಿದ್ದು ಬಳಿಕ ಬ್ಯಾಟಿಂಗ್ನಲ್ಲಿಯೂ ಅಜೇಯ ಅರ್ಧ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದಾರೆ.
ಈ ಅದ್ಭುತ ಆಲ್ರೌಂಡರ್ ಪ್ರದರ್ಶನದಿಂದಾಗಿ ರವೀಂದ್ರ ಜಡೇಜಾ ಭಾರತದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಕಪಿಲ್ದೇವ್ ಹೆಸರಿನಲ್ಲಿದ್ದ ಪ್ರಮುಖ ದಾಖಲೆಯೊಂದನ್ನು ಮುರಿದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಮಹತ್ವದ ಸಾಧನೆಯನ್ನು ಮಾಡಿದ್ದಾರೆ ರವೀಂದ್ರ ಜಡೇಜಾ.
ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಮೊದಲಿಗೆ ಐದು ವಿಕೆಟ್ಗಳ ಗೊಂಚಲು ಪಡೆದುಕೊಂಡಿದ್ದು ಬಳಿಕ ಎರಡನೇ ದಿನದಾಟದಲ್ಲಿ ಅರ್ಧ ಶತಜವನ್ನು ಕೂಡ ಗಳಿಸಿದ್ದಾರೆ. ಈ ಮೂಲಕ ರವೀಂದ್ರ ಜಡೇಜಾ ಒಂದೇ ಪಂದ್ಯದಲ್ಲಿ ಈ ರೀತಿಯ ಸಾಧನೆಯನ್ನು ಮಾಡಿದ ಏಕೈಕ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕಪಿಲ್ ದೇವ್ ನಾಲ್ಕು ಪಂದ್ಯಗಳಲ್ಲಿ ಈ ಸಾಧನೆಯನ್ನು ಮಾಡಿ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. 34ರ ಹರೆಯದ ಟೀಮ್ ಇಂಡಿಯಾದ ಆಟಗಾರ ಈ ದಾಖಲೆಯನ್ನು ಈಗ ಮುರಿದಿದ್ದಾರೆ.
ಇನ್ನು ಈ ಅದ್ಭುತ ಆಲ್ರೌಂಡ್ ಪ್ರದರ್ಶನದ ಹೊರತಾಗಿ ಜಡೇಜಾ ಮೊದಲ ದಿನದಾಟದಲ್ಲಿ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ಭಾರತದ ವೇಗಿ ಮೊಹಮ್ಮದ್ ಸಿರಾಜ್ ಜಡೇಜಾ ಅಂಗೈಗೆ ಏನನ್ನೋ ಹಚ್ಚಿದ್ದು ಅದನ್ನು ಜಡೇಜಾ ತಮ್ಮ ಎಡತೋರು ಬೆರಳಿಗೆ ಹಚ್ಚಿಕೊಂಡಿರುವ ವಿಡಿಯೋ ವೈರಲ್ ಆಗಿತ್ತು. ವರದಿಗಳ ಪ್ರಕಾರ ಈ ವಿಚಾರವಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ರವೀಂದ್ರ ಜಡೇಜಾ ಅವರಲ್ಲಿ ಸ್ಪಷ್ಟನೆಯನ್ನು ಕೇಳಿದ್ದು ಈ ಬಗ್ಗೆ ನಾಯಕ ರೋಹಿತ್ ಶರ್ಮಾ ಅದು ನೋವು ನಿವಾರಕವನ್ನು ಹಚ್ಚಿಕೊಂಡಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ಇನ್ನು ರವೀಂದ್ರ ಜಡೇಜಾ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾದ ಬ್ಯಾಟಿಂಗ್ ವಿಭಾಗವನ್ನು ಧ್ವಂಸಗೊಳಿಸಿದ್ದರು. ಮಾರ್ನಸ್ ಲ್ಯಾಬುಶೈನ್ (49), ಸ್ಟೀವ್ ಸ್ಮಿತ್ (37), ಮ್ಯಾಟ್ ರೆನ್ಶಾ (0), ಪೀಟರ್ ಹ್ಯಾಂಡ್ಸ್ಕಾಂಬ್ (31) ಮತ್ತು ಟಾಡ್ ಮರ್ಫಿ (0) ಅವರನ್ನು ಔಟ್ ಮಾಡುವ ಮೂಲಕ ಆಸ್ಟ್ರೇಲಿಯಾಗೆ ಆಘಾತ ನಿಡಿದರು. ಮತ್ತೊಂದೆಡೆ ಆರ್ ಅಶ್ವಿನ್ ಮೂರು ವಿಕೆಟ್ಗಳನ್ನು ಕಬಳಿಸಿದ್ದು ಹೀಗಾಗಿ ಆಸ್ಟ್ರೇಲಿಯಾ 63.5 ಓವರ್ಗಳಲ್ಲಿ 177 ರನ್ಗಳಿಗೆ ಆಲೌಟ್ ಆಯಿತು.
ಇದಕ್ಕೆ ಪ್ರತಿಯಾಗಿ ಭಾರತ ಮೊದಲ ದಿನ ಉತ್ತಮ ಬ್ಯಾಟಿಂಗ್ ಆರಂಭವನ್ನು ಪಡೆಯಿತು. ಮೊದಲ ದಿನ ಅರ್ಧ ಶತಕ ಸಿಡಿಸಿ ಅಜೇಯವಾಗುಳಿದಿದ್ದ ರೋಹಿತ್ ಶರ್ಮಾ 2ನೇ ದಿನದಂದು ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಎಲ್ಲಾ ಮಾದರಿಗಳಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎನಿಸಿಕೊಂಡಿದ್ದಾರೆ.
ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್ನಲ್ಲಿ 212 ಎಸೆತಗಳನ್ನು ಎದುರಿಸಿದ್ದಯ 15 ಬೌಂಡರಿ ಹಾಗೂ 2 ಸಿಕ್ಸರ್ಗಳ ನೆರವಿನೊಂದಿಗೆ 120 ರನ್ ಗಳಿಸಿದ್ದಾರೆ. ಇನ್ನು ರವೀಂದ್ರ ಜಡೇಜಾ 170 ಎಸೆತಗಳಲ್ಲಿ ಒಂಬತ್ತು ಬೌಂಡರಿ ಸೇರಿದಂತೆ ಅಜೇಯ 66 ರನ್ ಗಳಿಸಿದರೆ ಅಕ್ಷರ್ ಪಟೇಲ್ ಕೂಡ ಅರ್ಧ ಶತಕ ಸಿಡಿಸಿ ಮೂರನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟ ಮುಕ್ತಾಯದ ವೇಳೆಗೆ ಭಾರತ ಏಳು ವಿಕೆಟ್ಗೆ 321 ರನ್ ಗಳಿಸಿದ್ದು 144 ರನ್ಗಳ ಮುನ್ನಡೆ ಸಾಧಿಸಿದೆ.