
ಭಾರತ ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಟೆಸ್ಟ್ನ ಮೊದಲನೇ ದಿನದ ಆಟ ಮುಕ್ತಾಯವಾಗಿದೆ. ಭಾರತ ಮೊದಲ ದಿನ ಸ್ಪಷ್ಟ ಮೇಲುಗೈ ಸಾಧಿಸಿದೆ. ಎಲ್ಲವೂ ತಂಡದ ಲೆಕ್ಕಾಚಾರದಂತೆ ನಡೆದಿದೆ.
ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತದ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಕಾಂಗರೂ ಪಡೆ ಮೊದಲ ಇನ್ನಿಂಗ್ಸ್ನಲ್ಲಿ 177 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಮೊಹಮ್ಮದ್ ಸಿರಾಜ್ ಉಸ್ಮಾನ್ ಖವಾಜ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾದ ಪತನಕ್ಕೆ ಅಡಿಪಾಯ ಹಾಕಿದರು. ಮೊಹಮ್ಮದ್ ಶಮಿ ಡೇವಿಡ್ ವಾರ್ನರ್ ವಿಕೆಟ್ ಪಡೆದು ಮಿಂಚಿದರು. ನಂತರ ಬಹಳ ದಿನಗಳ ನಂತರ ತಂಡಕ್ಕೆ ವಾಪಸಾಗಿರುವ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಆಸ್ಟ್ರೇಲಿಯಾಗೆ ಆಘಾತ ನೀಡಿದರು. ರವಿಚಂದ್ರನ್ ಅಶ್ವಿನ್ ಕೂಡ 3 ವಿಕೆಟ್ ಪಡೆದುಕೊಂಡರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ಮೊದಲನೇ ದಿನದಾಂತ್ಯಕ್ಕೆ 77 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದೆ. ಉತ್ತಮವಾಗಿ ಆಡುತ್ತಿದ್ದ ಕೆಎಲ್ ರಾಹುಲ್ 20 ರನ್ ಗಳಿಸಿದ್ದಾದ ದಿನದಾಟ ಅಂತ್ಯಕ್ಕೆ ಕೆಲವೇ ನಿಮಿಷಗಳ ಮೊದಲು ಮುರ್ಫಿಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು.
ನಾಯಕ ರೋಹಿತ್ ಶರ್ಮಾ ಅಜೇಯ 56 ರನ್ ಗಳಿಸಿದ್ದು ಎರಡನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ. ರಾಹುಲ್ ಔಟಾದ ಬಳಿಕ ಅಚ್ಚರಿ ಎಂಬಂತೆ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಮಾಡಲು ಬಂದಿದ್ದು ಎರಡನೇ ದಿನಕ್ಕೆ ವಿಕೆಟ್ ಉಳಿಸಿಕೊಂಡಿದ್ದಾರೆ.

ಮೊದಲನೇ ವಿಕೆಟ್ ಬಿದ್ದಾಗ ದ್ರಾವಿಡ್ ಸಂಭ್ರಮ
ಸಾಕಷ್ಟು ಉದ್ವೇಗದೊಂದಿಗೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ಗೆ ಭಾರತ ಸಿದ್ಧವಾಗಿತ್ತು. ಮೊದಲ ಇನ್ನಿಂಗ್ಸ್ನ ಎರಡನೇ ಓವರ್ ನ ಮೊದಲ ಎಸೆತದಲ್ಲಿ ಉಸ್ಮಾನ್ ಖವಾಜಾರಿಗೆ ಬೌಲ್ ಮಾಡಿದ ಮೊಹಮ್ಮದ್ ಸಿರಾಜ್ ಎಲ್ಬಿಡ್ಬ್ಲ್ಯೂ ಔಟ್ಗಾಗಿ ಜೋರಾಗಿ ಮನವಿ ಮಾಡಿದರು. ಆದರೆ, ಆನ್ಫೀಲ್ಡ್ ಅಂಪೈರ್ ಔಟ್ ಕೊಡದ ಮೂರನೇ ಅಂಪೈರ್ ಗೆ ಮನವಿ ಸಲ್ಲಿಸಿದರು.
ನಂತರ ಮರುಪರಿಶೀಲನೆ ನಡೆಸಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಈ ಸಂದರ್ಭದಲ್ಲಿ ರೋಮಾಂಚಿತರಾದ ರಾಹುಲ್ ದ್ರಾವಿಡ್ ಜೋರಾಗಿ ಕೂಗುವ ಮೂಲಕ ಸಂಭ್ರಮಾಚರಣೆ ಮಾಡಿದರು.

ಅಭಿಮಾನಿಗಳಿಗೆ ಅಚ್ಚರಿ
ರಾಹುಲ್ ದ್ರಾವಿಡ್ ಸಾಮಾನ್ಯವಾಗಿ ತಮ್ಮ ಭಾವನೆಗಳನ್ನು ಹೆಚ್ಚಾಗಿ ತೋರ್ಪಡಿಸುವುದಿಲ್ಲ ಆದರೆ, ಸಿರಾಜ್ ಖವಾಜಾರ ವಿಕೆಟ್ ಪಡೆಯುತ್ತಿದ್ದಂತೆ ಖುಷಿಯಿಂದ ಕಿರುಚಿದರು. ಖವಾಜ ವಿಕೆಟ್ ಭಾರತಕ್ಕೆ ಎಷ್ಟು ಮುಖ್ಯವಾಗಿತ್ತು ಎನ್ನುವುದನ್ನು ಇದು ತೋರಿಸಿತು.
ದ್ರಾವಿಡ್ ಸಂಭ್ರಮಾಚರಣೆ ಮಾಡಿರುವುದನ್ನು ನೋಡಿ ಅಭಿಮಾನಿಗಳು ಕೂಡ ಅಚ್ಚರಿಗೊಂಡಿದ್ದಾರೆ.