
ನಾಗ್ಪುರದಲ್ಲಿ ನಡೆದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್ ಮತ್ತು 132 ರನ್ಗಳ ಭರ್ಜರಿ ಜಯ ಸಾಧಿಸಿದೆ. 5 ದಿನಗಳ ಟೆಸ್ಟ್ ಪಂದ್ಯವನ್ನು ಭಾರತ ತಂಡ ಮೂರೇ ದಿನದಲ್ಲಿ ಮುಗಿಸಿದೆ.
ಸೋಲಿನ ಮೂಲಕ ಮುಖಭಂಗ ಅನುಭವಿಸಿರುವ ಆಸ್ಟ್ರೇಲಿಯಾ ಮಾಧ್ಯಮಗಳು ವಿವಾದಗಳನ್ನು ಸೃಷ್ಟಿಸಲು ಯತ್ನಿಸಿದ್ದವು. ಪಂದ್ಯದ ಆರಂಭಕ್ಕೆ ಮುನ್ನವೇ ಭಾರತ ತನಗೆ ಬೇಕಾದಂತೆ ಪಿಚ್ಗಳನ್ನು ನಿರ್ಮಿಸಿದೆ ಎಂದು ವರದಿ ಮಾಡಿದ್ದವು. ಪಂದ್ಯದ ಮೊದಲನೇ ದಿನ ಜಡೇಜಾ ಬಾಲ್ ಟ್ಯಾಂಪರಿಂಗ್ ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದವು.
ಪಂದ್ಯ ಮುಗಿದ ಬಳಿಕ ಕೂಡ ಹಲವು ಆಸ್ಟ್ರೇಲಿಯಾ ಮಾಧ್ಯಮಗಳು ಪಿಚ್ ಬಗ್ಗೆ ತಕರಾರು ತೆಗೆದಿದ್ದವು. ಕೆಲವು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗರು ಭಾರತಕ್ಕೆ ಬೆಂಬಲ ನೀಡಿದ್ದು, ಆಸ್ಟ್ರೇಲಿಯಾ ಮಾಧ್ಯಮಗಳು ಸುಮ್ಮನೆ ವಿವಾದ ಮಾಡಲು ಯತ್ನಿಸುತ್ತಿವೆ ಎಂದು ಟೀಕಿಸಿದ್ದರು.
ಭಾರತ ತಂಡದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ವಿವಾದ ಸೃಷ್ಟಿಸಲು ಯತ್ನಿಸಿದ ಆಸ್ಟ್ರೇಲಿಯಾ ಮಾಧ್ಯಮಗಳಿಗೆ ತಿರುಗೇಟು ನೀಡಿದ್ದಾರೆ. ಮೊದಲನೇ ಟೆಸ್ಟ್ ಪಂದ್ಯ ಮುಕ್ತಾಯವಾದ ಬಳಿಕ ನಾಯಕ ರೋಹಿತ್ ಶರ್ಮಾ ಜೊತೆ ಮಾತನಾಡುವ ವೇಳೆ ಅಶ್ವಿನ್ ಪಿಚ್ ವಿವಾದದ ಬಗ್ಗೆ ಮಾತನಾಡಿದರು.

ನಾವು ಬೇರೆ ಪಿಚ್ನಲ್ಲಿ ಆಡಿಲ್ಲ
ರೋಹಿತ್ ಶರ್ಮಾ ಅಶ್ವಿನ್ ಜೊತೆ ಚರ್ಚೆ ಮಾಡುವ ಸಂದರ್ಭದಲ್ಲಿ ಪಿಚ್ ವಿವಾದದ ಬಗ್ಗೆ ವ್ಯಂಗ್ಯವಾಗಿ ಕೇಳಿದ ಪ್ರಶ್ನೆಗೆ ಅಶ್ವಿನ್ ಪ್ರತಿಕ್ರಿಯೆ ನೀಡಿದರು.
"ಸಾಮಾಜಿಕ ಮಾಧ್ಯಮಗಳಲ್ಲಿ ಪಿಚ್ ಬಗ್ಗೆ ಹೆಚ್ಚಿನ ಚರ್ಚೆಯಾಗುತ್ತಿದೆ. ವಿಶೇಷವಾಗಿ ಪ್ರವಾಸಿ ತಂಡಗಳು ಪಿಚ್ ಬಗ್ಗೆ ಹೆಚ್ಚಾಗಿ ಮಾತನಾಡುತ್ತವೆ. ಭಾರತ ಬ್ಯಾಟಿಂಗ್ ಮಾಡುವಾಗ ಅಥವಾ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡುವಾಗ ಒಂದು ಚೆಂಡು ಕೂಡ ಅನಿರೀಕ್ಷಿತವಾಗಿ ಟರ್ನ್ ಆಗಲಿಲ್ಲ, ಸಿಲ್ಲಿ ಪಾಯಿಂಟ್ಗೆ ಹೋಗಲಿಲ್ಲ. ಯಾವುದೇ ತೊಂದರೆ ಆಗಲಿಲ್ಲ, ಮತ್ತೆ ಪಿಚ್ನ ರಹಸ್ಯವೇನಿದೆ. ನಾವೇನು ಬೇರೆ ಪಿಚ್ನಲ್ಲಿ ಆಡುತ್ತೇವೆಯೇ?" ಎಂದು ಪ್ರಶ್ನಿಸಿದ್ದಾರೆ.
"ಎರಡೂ ತಂಡಗಳು ಆಡುವುದು ಒಂದೇ ಪಿಚ್ನಲ್ಲಿ, ನಾನು ಹೇಳಿದಂತೆ ಚೇಂಜ್ ರೂಮ್ನಲ್ಲಿ ನಾವು ಮಾತನಾಡುವ ಮಾತು, ಪಿಚ್ನಲ್ಲಿ ಏನು ಮಾಡಬಹುದು ಎನ್ನುವುದು ನಿಮ್ಮ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ. ಪಿಚ್ ಬಗ್ಗೆ ಯಾಕೆ ಜಾಸ್ತಿ ಚರ್ಚೆ ಮಾಡುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗಿಲ್ಲ. ಪಿಚ್ ಬಗ್ಗೆ ಯಾಕೆ ಮಾತನಾಡುತ್ತೀರಿ, ಆಟಗಾರರ ಕೌಶಲ್ಯಗಳ ಬಗ್ಗೆ ಚರ್ಚೆ ಮಾಡಿ" ಎಂದು ಅಶ್ವಿನ್ ಹೇಳಿದ್ದಾರೆ.

ದೆಹಲಿ ಪಿಚ್ ಕೂಡ ಸ್ಪಿನ್ನರ್ ಗೆ ಸಹಕಾರಿ
ಭಾರತ ಆಸ್ಟ್ರೇಲಿಯಾ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿದೆ. ದೆಹಲಿ ಪಿಚ್ ಕೂಡ ಮೊದಲನೇ ದಿನದಿಂದಲೇ ಸ್ಪಿನ್ನರ್ ಗಳಿಗೆ ನೆರವಾಗಲಿದೆ ಎನ್ನುವ ಸೂಚನೆ ಇದೆ.
ಮೊದಲನೇ ಪಂದ್ಯದ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ಎರಡನೇ ಪಂದ್ಯಕ್ಕಾಗಿ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ರನ್ನು ತಂಡಕ್ಕೆ ಸೇರಿಸಿಕೊಂಡಿದೆ.