
ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲನೇ ಪಂದ್ಯ ನೀರಸವಾಗಿ ಮುಕ್ತಾಯವಾದ ಬಳಿಕ, ದೆಹಲಿಯಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯ ಸಾಕಷ್ಟು ರೋಚಕವಾಗುತ್ತಿದೆ.
ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ಹೋರಾಟ ಮಾಡುತ್ತಿವೆ. ಎರಡನೇ ದಿನ ಅಶ್ವಿನ್ ಮತ್ತು ಅಕ್ಷರ್ ಪಟೇಲ್ ಅಮೋಘ ಆಟದ ನೆರವಿನಿಂದ ಭಾರತ 262 ರನ್ಗಳಿಗೆ ಆಲೌಟ್ ಆಗುವ ಮೂಲಕ 1 ರನ್ಗಳ ಹಿನ್ನಡೆ ಅನುಭವಿಸಿತು. ಕೇವಲ ಒಂದು ರನ್ಗಳ ಮುನ್ನಡೆ ಪಡೆದುಕೊಂಡ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿತು.
ಆಸ್ಟ್ರೇಲಿಯಾ 23 ರನ್ ಗಳಿಸಿದ್ದಾಗ ಉಸ್ಮಾನ್ ಖವಾಜಾರ ವಿಕೆಟ್ ಕಳೆದುಕೊಂಡರು, ಟ್ರಾವಿಸ್ ಹೆಡ್ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ ಇವರಿಗೆ ಉತ್ತಮವಾಗಿ ಜೊತೆಯಾದರು. ಈ ಜೋಡಿ 37 ಎಸೆತಗಳಲ್ಲಿ ಅಜೇಯ 38 ರನ್ಗಳ ಜೊತೆಯಾಟ ಆಡುವ ಮೂಲಕ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಎರಡನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 61 ರನ್ ಗಳಿಸುವ ಮೂಲಕ 62 ರನ್ಗಳ ಮುನ್ನಡೆ ಪಡೆದುಕೊಂಡಿದೆ.
40 ಎಸೆತಗಳಲ್ಲಿ 39 ರನ್ ಗಳಿಸಿರುವ ಟ್ರಾವಿಸ್ ಹೆಡ್ ಅಪಾಯಕಾರಿಯಾಗಿ ಕಾಣುತ್ತಿದ್ದಾರೆ. ಲ್ಯಾಬುಸ್ಚಾಗ್ನೆ ಕೂಡ ಒಮ್ಮೆ ಲಯ ಕಂಡುಕೊಂಡರೆ ಕಟ್ಟಿಹಾಕುವುದು ಕಷ್ಟ. ಆದಷ್ಟು ಬೇಗನೆ ಇವರಿಬ್ಬರನ್ನು ಔಟ್ ಮಾಡುವ ಯೋಜನೆಯಲ್ಲಿದೆ ಭಾರತ ತಂಡ.

ಬ್ಯಾಟಿಂಗ್ ಮಾಡುವುದು ಸುಲಭವಲ್ಲ
ದೆಹಲಿ ಪಿಚ್ ಎರಡನೇ ದಿನವೇ ಬೌಲರ್ ಗಳಿಗೆ ಸಾಕಷ್ಟು ನೆರವು ನೀಡುತ್ತಿದ್ದು ಬ್ಯಾಟರ್ ಗಳು ರನ್ ಗಳಿಸಲು ಪರದಾಡುತ್ತಿದ್ದಾರೆ. ಭಾರತ ಆಸ್ಟ್ರೇಲಿಯಾ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕದಿದ್ದರೆ ಬ್ಯಾಟಿಂಗ್ನಲ್ಲಿ ಸಾಕಷ್ಟು ಕಷ್ಟಪಡಬೇಕಾಗುತ್ತದೆ.
ಮೂರನೇ ದಿನ ಪಿಚ್ ಇನ್ನೂ ಕಠಿಣವಾಗಲಿದ್ದು, ಆಸ್ಟ್ರೇಲಿಯಾ ಭಾರತದ ಸ್ಪಿನ್ ದಾಳಿಯನ್ನು ಹೇಗೆ ಎದುರಿಸುತ್ತದೆ ಎನ್ನುವದನ್ನು ನೋಡಬೇಕಿದೆ. ಬ್ಯಾಟಿಂಗ್ ಮಾಡಲು ಪಿಚ್ ಕಠಿಣವಾಗುತ್ತಿರುವುದರಿಂದ ಆದಷ್ಟು ರನ್ ಕಲೆಹಾಕುವ ಮೂಲಕ ಭಾರತಕ್ಕೆ ಕಠಿಣ ಗುರಿ ನೀಡಲು ನೋಡುತ್ತಿದೆ ಆಸ್ಟ್ರೇಲಿಯಾ.

ಕಾಂಗರೂಗಳಿಗೆ ಕಡಿವಾಣ ಹಾಕೋದ್ಯಾರು?
ಸ್ಪಿನ್ನರ್ ಗಳಿಗೆ ಪಿಚ್ ಹೆಚ್ಚಿನ ನೆರವು ನೀಡುತ್ತಿರುವುದರಿಂದ ಕಾಂಗರೂಗಳನ್ನು ಕಟ್ಟಿಹಾಕಲು ರೋಹಿತ್ ಶರ್ಮಾ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾರಿಗೆ ಹೆಚ್ಚಿನ ಬೌಲಿಂಗ್ ನೀಡಲಿದ್ದಾರೆ.
ಜಡೇಜಾ ಖವಾಜಾರನ್ನು ಔಟ್ ಮಾಡುವ ಮೂಲಕ ಎರಡನೇ ಇನ್ನಿಂಗ್ಸ್ನಲ್ಲಿ ವಿಕೆಟ್ ಖಾತೆ ತೆರೆದಿದ್ದು, ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ಭಾರತಕ್ಕೆ ಪ್ರಮುಖವಾಗಲಿದೆ. ಎರಡನೇ ದಿನದಾಟವನ್ನು ನೋಡಿದರೆ, ಮೂರನೇ ದಿನದಾಟ ಮುಗಿಯುವ ವೇಳೆಗೆ ಪಂದ್ಯ ಯಾರ ಕಡೆ ವಾಲುತ್ತದೆ ಎನ್ನುವ ಸ್ಪಷ್ಟ ಸೂಚನೆಯಂತು ಸಿಗುವ ಸಾಧ್ಯತೆ ಇದೆ.