
ಬಾರ್ಡರ್ ಗವಾಸ್ಕರ್ ಟ್ರೋಫಿ ಎಂದರೆ ನೆನಪಾಗುವುದು ರಿಷಬ್ ಪಂತ್, ಕಳೆದ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಪಂತ್ ಅಮೋಘ ಆಟದ ಮೂಲಕ ಮಿಂಚಿದ್ದರು. ಅದರಲ್ಲೂ ಗಬ್ಬಾದಲ್ಲಿ ಕಾಂಗರೂಗಳ ಹೆಡೆಮುರಿ ಕಟ್ಟುವಲ್ಲಿ ಪಂತ್ ಕೊಡುಗೆ ಅಪಾರ.
ಈ ಬಾರಿಯ ಸರಣಿಯಲ್ಲಿ ಪಂತ್ ಆಡದೇ ಇರುವುದು ಭಾರತ ತಂಡಕ್ಕೆ ಕೊರತೆಯಾಗಿದೆ. ಅಪಘಾತದಲ್ಲಿ ಗಾಯಗೊಂಡ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಚೇತರಿಸಿಕೊಳ್ಳಲು ಇನ್ನೂ 8-9 ತಿಂಗಳು ಬೇಕಾಗಿದೆ.
ಬಾರ್ಡರ್ ಗವಾಸ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ ರಿಷಬ್ ಪಂತ್ರನ್ನು ನೆನಪಿಸಿಕೊಂಡರು. ಗವಾಸ್ಕರ್ ಮಾತ್ರವಲ್ಲದೆ ಭಾರತ ತಂಡದ ಅಭಿಮಾನಿಗಳು ಕೂಡ ಪಂತ್ರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
2ನೇ ದಿನದ ಆರಂಭದಲ್ಲಿ ಭಾರತ ಸತತವಾಗಿ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ನಾಥನ್ ಲಿಯಾನ್ ದಾಳಿಗೆ ಸಿಕ್ಕ ರೋಹಿತ್ ಪಡೆ 139 ರನ್ಗಳಾಗುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಈ ಸಂದರ್ಭದಲ್ಲಿ ಕಾಮೆಂಟೇಟರ್ ಆಗಿದ್ದ ಸುನಿಲ್ ಗವಾಸ್ಕರ್ ರಿಷಬ್ ಪಂತ್ರನ್ನು ನೆನಪಿಸಿಕೊಂಡರು. ಇಂತರ ಸಂಕಷ್ಟದ ಸಮಯದಲ್ಲಿ ಪಂತ್ ಇರಬೇಕಿತ್ತು ಎಂದರು. ಈ ಸರಣಿಯಲ್ಲಿ ಪಂತ್ ಆಡದೇ ಇರುವುದು ಆಸ್ಟ್ರೇಲಿಯಾದ ಅದೃಷ್ಟ ಎಂದು ಹೇಳಿದರು.

ಮಿಸ್ ಯೂ ರಿಷಬ್ ಪಂತ್
ವೀಕ್ಷಕ ವಿವರಣೆ ನೀಡುತ್ತಿದ್ದ ಸುನಿಲ್ ಗವಾಸ್ಕರ್, "ರಿಷಬ್ ಪಂತ್ ಇಲ್ಲದಿರುವುದು ಆಸ್ಟ್ರೇಲಿಯಾ ತಂಡದ ಅದೃಷ್ಟ. ಇಂತಹ ಸಂಕಷ್ಟದ ಸಮಯದಲ್ಲಿ ಅವರು ಧೈರ್ಯವಾಗಿ ಆಡುತ್ತಿದ್ದರು. ರಿಷಬ್ ಪಂತ್ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ನೀವು ಶೀಘ್ರದಲ್ಲೇ ಗುಣಮುಖರಾಗಿ" ಎಂದು ಹೇಳಿದರು.
ರಿಷಬ್ ಪಂತ್ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ ಮಾಡುವಾಗ ಕೂಡ ತಂಡಕ್ಕೆ ಉತ್ಸಾಹ ತುಂಬುವ ಆಟಗಾರರಾಗಿದ್ದರು. ಆಸ್ಟ್ರೇಲಿಯಾ ಕ್ರಿಕೆಟರ್ ಗಳ ಕಾಲೆಳೆಯುತ್ತಾ ತಂಡದ ಆಟಗಾರರನ್ನು ಉಲ್ಲಾಸದಿಂದ ಇಡುತ್ತಿದ್ದರು.

ಟ್ರೋಫಿ ಉಳಿಸಿಕೊಂಡ ಭಾರತ
ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಮೂರನೇ ದಿನಕ್ಕೆ ಮುಗಿಸಿದ ಭಾರತ ತಂಡ, ಆಸ್ಟ್ರೇಲಿಯಾ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ರವೀಂದ್ರ ಜಡೇಜಾ 7 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್ನಲ್ಲಿ 113 ರನ್ಗಳಿಗೆ ಆಲೌಟ್ ಆದ ಆಸ್ಟ್ರೇಲಿಯಾ ಭಾರತಕ್ಕೆ 115 ರನ್ಗಳ ಗುರಿ ನೀಡಿತ್ತು. ರೋಹಿತ್, ಪೂಜಾರಾ, ಕೊಹ್ಲಿ, ಶ್ರೀಕರ್ ಭರತ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ 6 ವಿಕೆಟ್ಗಳ ಜಯ ಸಾಧಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಂಡಿದೆ.