
ವಿಶಾಖಪಟ್ಟಣದಲ್ಲಿ ಎರಡನೇ ಏಕದಿನ ಪಂದ್ಯದಲ್ಲಿ 10 ವಿಕೆಟ್ಗಳ ಸೋಲನುಭವಿಸಿದ ಬಳಿಕ ಮೂರನೇ ಏಕದಿನ ಪಂದ್ಯಕ್ಕಾಗಿ ಟೀಂ ಇಂಡಿಯಾ ಚೆನ್ನೈಗೆ ಆಗಮಿಸಿದೆ. ಸೋಮವಾರ ಭಾರತ ತಂಡದ ಆಟಗಾರರು ಚೆನ್ನೈಗೆ ಆಗಮಿಸಿದ್ದು, ಮಂಗಳವಾರ ಅಭ್ಯಾಸ ಮಾಡಲಿದೆ.
ಮುಂಬೈನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿತ್ತು. ಆದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್ಗಳಿಂದ ಭಾರತವನ್ನು ಸೋಲಿಸುವ ಮೂಲಕ ಸರಣಿಯನ್ನು 1-1 ರಲ್ಲಿ ಸಮಬಲಗೊಳಿಸಿದೆ.
ಈ ಮೂಲಕ ಚೆನ್ನೈನಲ್ಲಿ ನಡೆಯಲಿರುವ ಮೂರನೇ ಏಕದಿನ ಪಂದ್ಯ ಭಾರಿ ಮಹತ್ವ ಪಡೆದುಕೊಂಡಿದೆ. ಭಾರತಕ್ಕೆ ಸರಣಿ ಗೆಲ್ಲುವ ಜೊತೆ ಐಸಿಸಿ ರ್ಯಾಂಕಿಂಗ್ನಲ್ಲಿ ನಂಬರ್ 1 ಸ್ಥಾನವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಕೂಡ ಇದೆ. ಭಾರತ ಒಂದು ವೇಳೆ ಚೆನ್ನೈ ಪಂದ್ಯದಲ್ಲಿ ಸೋತರೆ ಸರಣಿ ಜೊತೆಗೆ ಅಗ್ರಸ್ಥಾನವನ್ನು ಕಳೆದುಕೊಳ್ಳಬೇಕಾಗುತ್ತದೆ.
ಮೂರನೇ ಪಂದ್ಯದಲ್ಲಿ ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಭಾರತ ತಂಡ ಮಂಗಳವಾರ ಕಠಿಣ ಅಭ್ಯಾಸ ಮಾಡಲಿದೆ. ವಿಶಾಖಪಟ್ಟಣದ ಹೀನಾಯ ಸೋಲನ್ನು ಮರೆರು ರೋಹಿತ್ ಶರ್ಮಾ ಮತ್ತು ತಂಡ ಮೂರನೇ ಪಂದ್ಯಕ್ಕೆ ಸಿದ್ಧವಾಗಬೇಕಾಗಿದೆ.

ಭಾರತಕ್ಕೆ ತಲೆನೋವಾದ ಮಿಚೆಲ್ ಸ್ಟಾರ್ಕ್
ಭಾರತ ತಂಡಕ್ಕೆ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಮಾರಕವಾಗಿದ್ದಾರೆ. ವಿಶಾಖಪಟ್ಟಣದಲ್ಲಿ ಅವರು 5 ವಿಕೆಟ್ ಪಡೆಯುವ ಮೂಲಕ ಭಾರತ 117 ರನ್ಗಳಿಗೆ ಆಲೌಟ್ ಆಗಲು ಕಾರಣವಾಗಿದ್ದರು. ಎಡಗೈ ವೇಗಿಗಳಿಗೆ ಭಾರತ ತಂಡದ ಅಗ್ರಕ್ರಮಾಂಕದ ಆಟಗಾರರು ಉತ್ತಮವಾಗಿ ಆಡುವುದಿಲ್ಲ ಎನ್ನುವ ವಿಚಾರ ಮತ್ತೆ ಜಗಜ್ಜಾಹೀರಾಗಿದೆ.
ಚೆನ್ನೈನಲ್ಲಿ ನಡೆಯುವ ಮೂರನೇ ಏಕದಿನ ಪಂದ್ಯದಲ್ಲಿ ಕೂಡ ಸ್ಟಾರ್ಕ್ ಭಾರತದ ಬ್ಯಾಟಿಂಗ್ ಪಡೆಗೆ ಕಡಿವಾಣ ಹಾಕುವ ಸಾಧ್ಯತೆ ಇದೆ. ಅವರನ್ನು ಎದುರಿಸಲು ಭಾರತದ ಬ್ಯಾಟರ್ ಗಳು ಯಾವ ತಂತ್ರ ಅನುಸರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲವಾಗಿದೆ.
ಎರಡೂ ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ, ಅದರಲ್ಲೂ ಸೂರ್ಯಕುಮಾರ್ ಯಾದವ್ ಎರಡೂ ಇನ್ನಿಂಗ್ಸ್ಗಳಲ್ಲಿ ಸ್ಟಾರ್ಕ್ ಅವರ ಮೊದಲ ಎಸೆತೆದಲ್ಲೇ ಔಟಾಗಿದ್ದಾರೆ.

ಸ್ಪಿನ್ಗೆ ನರವು ನೀಡುವ ಪಿಚ್
ಭಾರತದ ಬ್ಯಾಟಿಂಗ್ ಸಾಕಷ್ಟು ಸುಧಾರಿಸಬೇಕಾಗಿದೆ. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದ್ದರೂ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಚೆಪಾಕ್ ಸ್ಪಿನ್ನರ್ ಗಳಿಗೆ ಅನುಕೂಲವಾಗಿದ್ದರೂ, ವೇಗಿಗಳಿಗೆ ಕೂಡ ನೆರವು ನೀಡುವ ಸಾಧ್ಯತೆ ಇದೆ.
ಮೂರನೇ ಏಕದಿನ ಪಂದ್ಯದಲ್ಲಿ ಕೂಡ ಮೂವರು ಸ್ಪಿನ್ನರ್ ಗಳು ಕಣಕ್ಕಿಳಿಯುವ ಸಾಧ್ಯತೆ ಇದೆ. ಕುಲದೀಪ್ ಯಾದವ್ ಪ್ರಮುಖ ಸ್ಪಿನ್ನರ್ ಆಗಿದ್ದು, ರವೀಂದ್ರ ಜಡೇಜಾ ಆಲ್ ರೌಂಡರ್ ಸ್ಥಾನ ಪಡೆದಿದ್ದಾರೆ. ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ವಿಫಲವಾಗುತ್ತಿರುವ ಕಾರಣ, ಚೆನ್ನೈನಲ್ಲಿ ಸ್ಥಳೀಯ ಆಟಗಾರ ವಾಷಿಂಗ್ಟನ್ ಸುಂದರ್ ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲು ಬಯಸಿದರೆ ಎಡಗೈ ವೇಗಿ ಜಯದೇವ್ ಉನಾದ್ಕತ್ ತಂಡಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಇದೆ. ಉಮ್ರಾನ್ ಮಲಿಕ್ ಕೂಡ ರೋಹಿತ್ ಶರ್ಮಾಗೆ ಇರುವ ಮತ್ತೊಂದು ಆಯ್ಕೆಯಾಗಿದ್ದಾರೆ.
ಭಾರತ ತಂಡದ ಸಂಭಾವ್ಯ ಆಡುವ ಬಳಗ
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್/ ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಯದೇವ್ ಉನಾದ್ಕತ್.