
ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯ 3ನೇ ಟೆಸ್ಟ್ಗಾಗಿ ಭಾರತ ತಂಡ ಇಂದೋರ್ ತಲುಪಿದೆ. ಭಾರತ ತಂಡ ಅಭ್ಯಾಸ ಆರಂಭಿಸುವ ಮುನ್ನ ಕೆಎಲ್ ರಾಹುಲ್ ಅಥಿಯಾ ಶೆಟ್ಟಿ ಜೊತೆ ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಭಾನುವಾರ ಮುಂಜಾನೆ 4 ಗಂಟೆ ವೇಳೆಗೆ ಕೆಎಲ್ ರಾಹುಲ್ ಮದುವೆಯಾದ ನಂತರ ಮೊದಲ ಬಾರಿಗೆ ಹೆಂಡತಿ ಆಥಿಯಾ ಶೆಟ್ಟಿಯೊಂದಿಗೆ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದರು. ಮುಂಜಾನೆ ನಡೆಯುವ ಭಸ್ಮ ಆರತಿಯಲ್ಲಿ ದಂಪತಿ ಭಾಗವಹಿಸಿದರು.
ದಂಪತಿಗಳು ದೇವಸ್ಥಾನದ ನವ ಗ್ರಹಕ್ಕೆ ತೆರಳಿ ವಿಧಿ ವಿಧಾನಗಳನ್ನು ನೆರವೇರಿಸಿದರು. ರಾಹುಲ್ ಮತ್ತು ಅಥಿಯಾ ಶೆಟ್ಟಿ ನಂದಿ ಸಭಾಂಗಣದಲ್ಲಿ ಬಹಳ ಹೊತ್ತು ಕುಳಿತು ಧ್ಯಾನ ಮಾಡಿದರು. ಇಡೀ ದೇವಾಲಯದ ಆವರಣದಲ್ಲಿ ಸಾಕಷ್ಟು ಸುತ್ತಾಡುವ ಮೂಲಕ ಸಮಯ ಕಳೆದರು.
ಭಾನುವಾರವಾಗಿದ್ದರಿಂದ ದೇವಸ್ಥಾನದಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ನೆರೆದಿದ್ದರು. ಮುಂಜಾನೆ 4 ಗಂಟೆಗೆ ಭಸ್ಮ ಆರತಿ ಸಮಯದಲ್ಲಿ ದೇವಾಲಯದ ಬಾಗಿಲು ತೆರೆಯಲಾಯಿತು. ಮಹಾಕಾಳೇಶ್ವರನಿಗೆ ಜಲಾಭಿಷೇಕ ಮಾಡಿದ ನಂತರ ಅರ್ಚಕರು ಹಾಲು, ಮೊಸರು, ತುಪ್ಪ, ಸಕ್ಕರೆ ಮತ್ತು ಹಣ್ಣಿನ ರಸದಿಂದ ಅಭಿಷೇಕ ಮಾಡಿದರು.

ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಸರ್ಕಸ್
ಏಕದಿನ ಮತ್ತು ಟಿ20 ಮಾದರಿಯಲ್ಲಿ ರನ್ ಗಳಿಸಲು ವಿಫಲವಾಗಿದ್ದ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ನಲ್ಲಿ ಕೂಡ ರನ್ ಗಳಿಸಲು ಪರದಾಡುತ್ತಿದ್ದಾರೆ. ಭಾರತ ಟೆಸ್ಟ್ ತಂಡಕ್ಕೆ ಭವಿಷ್ಯದ ನಾಯಕತ್ವಕ್ಕೆ ಕೆಎಲ್ ರಾಹುಲ್ರನ್ನು ಕೂಡ ಪರಿಗಣಿಸಲಾಗಿತ್ತು, ಆದರೆ ಸತತವಾಗಿ ರನ್ ಗಳಿಸುವಲ್ಲಿ ವಿಫಲವಾದ ನಂತರ ಅವರನ್ನು ಉಪನಾಯಕನ ಸ್ಥಾನದಿಂದ ತೆಗೆಯಲಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಸರಣಿಯ 3ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಾಗಿ ಶುಭಮನ್ ಗಿಲ್ಗೆ ಅವಕಾಶ ನೀಡಬೇಕೆನ್ನುವ ಕೂಗು ಕೇಳಿಬಂದಿದೆ. ಕೋಚ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಕೆಎಲ್ ರಾಹುಲ್ ಮೇಲೆ ನಂಬಿಕೆ ಇಟ್ಟಿರುವುದರಿಂದ ಅವರು ಇನ್ನೂ ತಂಡದಲ್ಲಿದ್ದಾರೆ ಎನ್ನಲಾಗಿದೆ.

ಇದೇ ಕೊನೆ ಅವಕಾಶ
ಕೆಎಲ್ ರಾಹುಲ್ ಅತ್ಯುತ್ತಮ ಬ್ಯಾಟರ್ ಎನ್ನುವುದರಲ್ಲಿ ಅನುಮಾನವಿಲ್ಲ. ಅವರು ಕ್ಲಾಸ್ ಆಟಗಾರ ಆದರೆ ಅದಕ್ಕೆ ತಕ್ಕಂತೆ ಆಡದೇ ಇರುವುದು ಸಮಸ್ಯೆಯಾಗಿದೆ. 3ನೇ ಟೆಸ್ಟ್ನಲ್ಲಿ ಅವರಿಗೆ ಅವಕಾಶ ಸಿಕ್ಕರೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲೇಬೇಕಾದ ಅನಿವಾರ್ಯತೆ ಇದೆ.
ಒಂದು ವೇಳೆ 3ನೇ ಟೆಸ್ಟ್ ಪಂದ್ಯದಲ್ಲೂ ಕೆಎಲ್ ರಾಹುಲ್ ವಿಫಲರಾದರೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಲಿದೆ. ಕೆಎಲ್ ರಾಹುಲ್ ಆಡಿರುವ ಕೊನೆ 10 ಇನ್ನಿಂಗ್ಸ್ಗಳಲ್ಲಿ 8, 12, 10, 22, 23, 10, 2, 20 ಮತ್ತು 1 ರನ್ಗಳನ್ನು ಗಳಿಸಿದ್ದಾರೆ.