
ಇಂದೋರ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ನಲ್ಲಿ ಭಾರತ ಸಂಕಷ್ಟಕ್ಕೆ ಸಿಲುಕಿದೆ. ಎರಡನೇ ದಿನದಾಟದಲ್ಲಿ ಭಾರತ ತಂಡದ ರಣತಂತ್ರದ ಬಗ್ಗೆ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಎರಡನೇ ದಿನದಾಟ ಆರಂಭವಾದಾಗ ಬಹುತೇಕ ಮೊದಲ ಒಂದು ಗಂಟೆಯವರೆಗೂ ರವಿಚಂದ್ರನ್ ಅಶ್ವಿನ್ಗೆ ಬೌಲಿಂಗ್ ನೀಡದಿರುವ ನಾಯಕನ ನಿರ್ಧಾರವನ್ನು ಪ್ರಶ್ನೆ ಮಾಡಿದ್ದಾರೆ. ಡ್ರಿಂಕ್ಸ್ ಬ್ರೇಕ್ಗೆ ಕೆಲವೇ ನಿಮಿಷಗಳಿರುವಾಗ ಅವರಿಗೆ ಬೌಲಿಂಗ್ ನೀಡಲಾಯಿತು.
ಆದರೆ ಆ ಸಮಯಕ್ಕೆ ಪೀಟರ್ ಹ್ಯಾಂಡ್ಸ್ಕಾಂಬ್ ಮತ್ತು ಕ್ಯಾಮರೂನ್ ಗ್ರೀನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿ ಆಸ್ಟ್ರೇಲಿಯಾಗೆ ಮೊದಲ ಇನ್ನಿಂಗ್ಸ್ನಲ್ಲಿ 75 ರನ್ಗಳ ಮುನ್ನಡೆ ತಂದುಕೊಟ್ಟಿದ್ದರು. ಕ್ರಿಕೆಟಿಗರ ಗುಣಮಟ್ಟಕ್ಕೆ ಬದಲಾಗಿ ಮ್ಯಾಚ್-ಅಪ್ಗಳಿಗೆ ರೋಹಿತ್ ಶರ್ಮಾ ಹೆಚ್ಚಿನ ಗಮನ ನೀಡುವ ತಂತ್ರದ ಬಗ್ಗೆ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ.
ಹ್ಯಾಂಡ್ಸ್ಕಾಂಬ್ ಮತ್ತು ಗ್ರೀನ್ ಇಬ್ಬರು ಬಲಗೈ ಬ್ಯಾಟರ್ ಆದ ಕಾರಣ, ರೋಹಿತ್ ಶರ್ಮಾ ವೇಗಿ ಮೊಹಮ್ಮದ್ ಸಿರಾಜ್ ಮತ್ತು ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾರನ್ನು ಸತತವಾಗಿ ದಾಳಿಗೆ ಇಳಿಸಿದರು ಎಂದು ಗವಾಸ್ಕರ್ ಹೇಳಿದರು. ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಬೌಲಿಂಗ್ಗೆ ಬರುವುದನ್ನು ಗವಾಸ್ಕರ್ ಕಾಯುತ್ತಿದ್ದರು.

ಅಶ್ವಿನ್ರನ್ನು ಬೇಗನೆ ದಾಳಿಗೆ ಇಳಿಸಬೇಕಾಗಿತ್ತು
ಕ್ರೀಸ್ನಲ್ಲಿ ಇಬ್ಬರು ಬಲಗೈ ಆಟಗಾರರು ಇದ್ದ ಕಾರಣ, ಡ್ರಿಂಕ್ಸ್ ವಿರಾಮದ ಮೊದಲು ಕೊನೆಯ ಓವರ್ನವರೆಗೂ ಅಶ್ವಿನ್ಗೆ ಬೌಲಿಂಗ್ ಸಿಗಲಿಲ್ಲ. ಇಬ್ಬರು ಎಡಗೈ ಆಟಗಾರರು ಬೌಲ್ ಮಾಡಿದರು, ನಂತರ ಏನಾಯಿತು? ರವಿಚಂದ್ರನ್ ಅಶ್ವಿನ್, ಹ್ಯಾಂಡ್ಸ್ಕಾಂಬ್ನ ವಿಕೆಟ್ ಪಡೆದರು.
ರವಿಚಂದ್ರನ್ ಅಶ್ವಿನ್ ತಂಡದ ಅಗ್ರ ಆಟಗಾರ, ಅವರು ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅದು ಬಲಗೈ ಬ್ಯಾಟರ್ ಆದರೂ ಸರಿ ಎಡಗೈ ಬ್ಯಾಟರ್ ಆದರೂ ಸರಿ ಅವರು ವಿಕೆಟ್ ಪಡೆಯುತ್ತಾರೆ. ಅಶ್ವಿನ್ 450 ವಿಕೆಟ್ಗಳನ್ನು ಪಡೆದಿದ್ದಾರೆ. ದಿನದ ಆರಂಭದಲ್ಲೇ ಅವರಿಗೆ ಬೌಲಿಂಗ್ ನೀಡಬೇಕಿತ್ತು ಎಂದು ಗವಾಸ್ಕರ್ ಹೇಳಿದರು.

ಪಂದ್ಯಕ್ಕೆ ತಿರುವು ನೀಡಿದ ಅಶ್ವಿನ್
ಅಶ್ವಿನ್ ಹ್ಯಾಂಡ್ಸ್ಕಾಂಬ್ ವಿಕೆಟ್ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಹ್ಯಾಂಡ್ಸ್ಕಾಂಬ್ ವಿಕೆಟ್ ಬಿದ್ದ ನಂತರ ಆಸ್ಟ್ರೇಲಿಯಾ ದಿಢೀರ್ ಕುಸಿತ ಕಂಡಿತು. ಅಲೆಕ್ಸ್ ಕ್ಯಾರಿ ಮತ್ತು ನಾಥನ್ ಲಿಯಾನ್ ವಿಕೆಟ್ ಪಡೆದರು. ಉಮೇಶ್ ಯಾದವ್ 3 ವಿಕೆಟ್ ಪಡೆಯುವ ಮೂಲಕ 11 ರನ್ಗಳಿಸುವಷ್ಟರಲ್ಲಿ ಆಸ್ಟ್ರೇಲಿಯಾ 6 ವಿಕೆಟ್ಗಳನ್ನು ಕಳೆದುಕೊಂಡು 197 ರನ್ಗಳಿಗೆ ಆಲೌಟ್ ಆಯಿತು.
"ಮೂರನೇ ಕ್ರಮಾಂಕದ ಬ್ಯಾಟರ್ ಬದಲಾಗಿ ನೀವು ಏಳನೇ ಕ್ರಮಾಂಕದ ಬ್ಯಾಟರ್ ಅನ್ನು ಕಳುಹಿಸುವುದಿಲ್ಲ. ನೀವು ಅಗ್ರ ಕ್ರಮಾಂಕದ ಬ್ಯಾಟರ್ ಅನ್ನು ಮೊದಲು ಕಳುಹಿಸುವ ಹಾಗೆ, ಅಗ್ರ ಕ್ರಮಾಂಕದ ಬೌಲರ್ ಗಳಿಗೆ ಮೊದಲ ಅವಕಾಶ ನೀಡಬೇಕು, ಅಶ್ವಿನ್ ವಿಚಾರದಲ್ಲಿ ಭಾರತ ತಂಡ ಇದೇ ತಪ್ಪು ಮಾಡುತ್ತಿದೆ" ಎಂದು ಗವಾಸ್ಕರ್ ಹೇಳಿದ್ದಾರೆ.