
ಬಾರ್ಡರ್ ಗವಾಸ್ಕರ್ ಟ್ರೋಫಿಯ 3ನೇ ಪಂದ್ಯದಲ್ಲಿ ಭಾರತ ಮೊದಲನೇ ಇನ್ನಿಂಗ್ಸ್ನಲ್ಲಿ 109 ರನ್ಗಳಿಗೆ ಆಲೌಟ್ ಆಯಿತು. ಸ್ಪಿನ್ಗೆ ನೆರವಾಗುವ ಪಿಚ್ನಲ್ಲಿ ಭಾರತದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು.
ನಂತರ ಮೊದಲ ಇನ್ನಿಂಗ್ಸ್ ಆರಂಭಿಸಿ ಆಸ್ಟ್ರೇಲಿಯಾಗೆ ರವೀಂದ್ರ ಜಡೇಜಾ ಆಘಾತ ನೀಡಿರು. ಆರಂಭಿಕ ಆಟಗಾರ ಟ್ರಾವಿಸ್ ಹೆಡ್ರನ್ನು ಇನ್ನಿಂಗ್ಸ್ನ ಎರಡನೇ ಓವರ್ ನಲ್ಲಿ ಔಟ್ ಮಾಡಿದರು. ಆದರೆ, ನಂತರ ಅವರು ಮಾಡಿದ ತಪ್ಪಿನಿಂದ ಆಸ್ಟ್ರೇಲಿಯಾ ಲಾಭ ಪಡೆಯಿತು.
ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ಮಾರ್ನಸ್ ಲ್ಯಾಬುಸ್ಚಾಗ್ನೆ ತನ್ನ ಖಾತೆಯನ್ನು ತೆರೆಯುವ ಮೊದಲೇ ಬೌಲ್ಡ್ ಆಗಿದ್ದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ 14 ರನ್ಗಳಿಗೆ 2 ವಿಕೆಟ್ ಕಳೆದುಕೊಳ್ಳಬೇಕಿತ್ತು, ಆದರೆ ಜಡೇಜಾ ಎಸೆದ ಎಸೆತ ನೋಬಾಲ್ ಆಗಿತ್ತು.
ರವೀಂದ್ರ ಜಡೇಜಾ ಮಾಡಿದ ಎಡವಟ್ಟಿನಿಂದ ಜೀವದಾನ ಪಡೆದ ಮಾರ್ನಸ್ ಲ್ಯಾಬುಸ್ಚಾಗ್ನೆ ಅಮೂಲ್ಯವಾದ 31 ರನ್ ಗಳಿಸಿದರು. ಉಸ್ಮಾನ್ ಖವಾಜ ಜೊತೆಗೆ 96 ರನ್ಗಳ ಜೊತೆಯಾಟ ಆಡುವ ಮೂಲಕ ಆಸ್ಟ್ರೇಲಿಯಾ ತಂಡ ಮೇಲುಗೈ ಸಾಧಿಸಲು ಕಾರಣವಾದರು.

ಸುನಿಲ್ ಗವಾಸ್ಕಾರ್ ಚಾಟಿ
ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ರವೀಂದ್ರ ಜಡೇಜಾ ನೋ ಬಾಲ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ವೃತ್ತಿಪರ ಕ್ರಿಕೆಟಿಗರಾಗಿ ಅದರಲ್ಲೂ ನೀವು ಸ್ಪಿನ್ನರ್ ಆಗಿದ್ದಾಗ ನೋ ಬಾಲ್ ಎಸೆಯಲು ಸಾಧ್ಯವೇ ಇಲ್ಲ. ನೀವು ಕ್ರೀಸ್ ಹಿಂದಿನಿಂದ ಬೌಲಿಂಗ್ ಮಾಡಬೇಕು, ಜಡೇಜಾ ನಿಯಂತ್ರಣವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ." ಎಂದು ಗವಾಸ್ಕರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಮೂರು ಟೆಸ್ಟ್ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಹಲವು ನೋ ಬಾಲ್ ಮಾಡಿದ್ದಾರೆ. ನೋ ಬಾಲ್ಗಳನ್ನು ಮಾಡದಿರುವುದು ನಿಮ್ಮ ನಿಯಂತ್ರಣದಲ್ಲಿರುತ್ತದೆ. ಹಾಗಾದರೆ ಯಾಕೆ ಆ ತಪ್ಪು ನಡೆಯುತ್ತಿದೆ. ಈ ತಪ್ಪಿನ ಹೊಣೆಯನ್ನು ಯಾರು ತೆಗೆದುಕೊಳ್ಳುತ್ತಾರೆ. ಬೌಲರ್ ಅಥವಾ ಬೌಲಿಂಗ್ ಕೋಚ್, ಯಾರಾದರೂ ಆಗಿರಲಿ ಮೂರು ಪಂದ್ಯಗಳಲ್ಲಿ ಈ ರೀತಿಯ ತಪ್ಪು ಹಲವು ಬಾರಿ ಆಗಿದೆ." ಎಂದು ಹೇಳಿದರು.

ಸಮಸ್ಯೆಯನ್ನು ಸರಿಪಡಿಸಿಕೊಳ್ಳಬೇಕು
ರವೀಂದ್ರ ಜಡೇಜಾ ಸಮಸ್ಯೆಯನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಬೇಕಿದೆ. ನೋ ಬಾಲ್ ಪಂದ್ಯದ ಫಲಿತಾಂಶವನ್ನೇ ಬದಲಿಸಬಹುದು ಎಂದು ಅವರು ಹೇಳಿದರು. ಒಂದು ವೇಳೆ ಲ್ಯಾಬುಸ್ಚಾಗ್ನೆ ಶೂನ್ಯಕ್ಕೆ ಔಟಾಗಿದ್ದರೆ, ಆಸ್ಟ್ರೇಲಿಯಾ ಕಡಿಮೆ ಮೊತ್ತಕ್ಕೆ ಇನ್ನಷ್ಟು ವಿಕೆಟ್ಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು. ಆದರೆ, ಜಡೇಜಾ ತಪ್ಪಿನಿಂದ ಅವರು ಖವಾಜಾ ಜೊತೆ ಉತ್ತಮ ಜೊತೆಯಾಟ ಆಡಿದರು ಎಂದು ಗವಾಸ್ಕರ್ ಹೇಳಿದರು.
ರವೀಂದ್ರ ಜಡೇಜಾ ನೋ ಬಾಲ್ ಬಗ್ಗೆ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ರವೀಂದ್ರ ಜಡೇಜಾರಂತಹ ಬೌಲರ್ನಿಂದ ನೋ ಬಾಲ್ ನಿರೀಕ್ಷೆ ಮಾಡಲಾಗುವುದಿಲ್ಲ. ವಿಕೆಟ್ ಪಡೆದ ಎಸೆತವೇ ನೋಬಾಲ್ ಆದರೆ, ಅದರ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗುತ್ತದೆ ಎಂದು ಹೇಳಿದರು.