
ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡೂ ಟೆಸ್ಟ್ ಪಂದ್ಯಗಳನ್ನು ಮೂರು ದಿನಗಳಲ್ಲಿ ಮುಗಿಸಿದ ನಂತರ ಬ್ರೇಕ್ ಪಡೆದುಕೊಂಡಿದ್ದ ಭಾರತ ತಂಡ ಈಗ 3ನೇ ಟೆಸ್ಟ್ ಪಂದ್ಯಕ್ಕಾಗಿ ಇಂದೋರ್ಗೆ ಪ್ರಯಾಣಿಸಿದೆ. ಭಾನುವಾರದಿಂದ ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ಅಭ್ಯಾಸ ಆರಂಭಿಸಲಿದೆ.
ಮಾರ್ಚ್ 1ರಿಂದ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಪಂದ್ಯ ಆರಂಭವಾಗಲಿದೆ. ಮೊದಲ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ ಈಗಾಗಲೇ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ದೆಹಲಿಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಮೂರೇ ದಿನದಲ್ಲಿ ಗೆದ್ದುಕೊಂಡಿತ್ತು.
ರಣಜಿ ಫೈನಲ್ ಪಂದ್ಯಕ್ಕಾಗಿ ತಂಡದಿಂದ ಹೊರಗುಳಿದಿದ್ದ ಎಡಗೈ ವೇಗಿ ಜಯದೇವ್ ಉನಾದ್ಕತ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಮುನ್ನಡೆಸಿದ್ದರು. ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ಚಾಂಪಿಯನ್ ಆಗಿತ್ತು. ತಂಡವನ್ನು ಚಾಂಪಿಯನ್ ಮಾಡಿದ ನಂತರ ಉನಾದ್ಕತ್ ಮತ್ತೆ ಭಾರತ ತಂಡವನ್ನು ಸೇರಿಕೊಂಡಿದ್ದಾರೆ.
6 ದಿನಗಳ ವಿರಾಮ ಪಡೆದ ನಂತರ ಸಾಕಷ್ಟು ಆತ್ಮವಿಶ್ವಾಸದಲ್ಲಿರುವ ರೋಹಿತ್ ಶರ್ಮಾ ಮತ್ತು ತಂಡ ಮೂರನೇ ಪಂದ್ಯವನ್ನು ಗೆಲ್ಲುವ ವಿಶ್ವಾಸದಲ್ಲಿದೆ.

ಮೂರನೇ ಟೆಸ್ಟ್ ಗೆದ್ದರೆ ಭಾರತ ನಂಬರ್ 1
ಇಂದೋರ್ ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆಯಲಿರುವ ಸರಣಿಯ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ಗೆದ್ದರೆ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ ಮೊದಲ ಸ್ಥಾನಕ್ಕೇರಲಿದೆ. ಅಗ್ರಸ್ಥಾನದ ಜೊತೆಗೆ ಭಾರತ ತಂಡ ವಿಶ್ವ ಟೆಸ್ಟ್ಚಾಂಪಿಯನ್ಶಿಪ್ನಲ್ಲಿ ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ.
ಈಗಾಗಲೇ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ತಂಡ ಈಗಾಗಲೇ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಭಾನುವಾರ ಹೋಳ್ಕರ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಅಭ್ಯಾಸವನ್ನು ಆರಂಭಿಸಲಿದೆ.

ದೆಹಲಿಯಲ್ಲಿ ಆಸ್ಟ್ರೇಲಿಯಾ ತಂಡದ ಅಭ್ಯಾಸ
ಮೊದಲ ಎರಡು ಪಂದ್ಯಗಳನ್ನು ಸೋತಿರುವ ಆಸ್ಟ್ರೇಲಿಯಾ ಭಾರಿ ಮುಖಭಂಗವನ್ನು ಅನುಭವಿಸಿದ್ದೂ ಮೂರನೇ ಪಂದ್ಯವನ್ನು ಗೆಲ್ಲಲೇಬೇಕೆನ್ನುವ ಯೋಚನೆಯಲ್ಲಿದೆ. ಭಾರತ ತಂಡದ ಆಟಗಾರರು ವಿಶ್ರಾಂತಿ ಪಡೆಯುತ್ತಿದ್ದರೆ, ಆಸ್ಟ್ರೇಲಿಯಾ ತಂಡದ ಆಟಗಾರರು ಮಾತ್ರ ದೆಹಲಿಯಲ್ಲಿ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.
ಪ್ರತಿ ದಿನ 4-5 ಗಂಟೆಗಳ ಕಾಲ ಅಭ್ಯಾಸ ಮಾಡುತ್ತಿರುವ ಆಸ್ಟ್ರೇಲಿಯಾ ತಂಡ ಭಾನುವಾರ ಇಂದೋರ್ ಗೆ ಪ್ರಯಾಣ ಬೆಳೆಸಲಿದೆ. ನಾಯಕ ಪ್ಯಾಟ್ ಕಮ್ಮಿನ್ಸ್ ವೈಯಕ್ತಿಕ ಕಾರಣಗಳಿಂದ ಆಸ್ಟ್ರೇಲಿಯಾಗೆ ವಾಪಸ್ ತೆರಳಿದ್ದು, ಮೂರನೇ ಟೆಸ್ಟ್ಗೆ ಅಲಭ್ಯರಾಗಿರುವ ಕಾರಣ ಸ್ಟೀವ್ ಸ್ಮಿತ್ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ.