
ಆಸ್ಟ್ರೇಲಿಯಾ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಆಘಾತಕ್ಕೊಳಗಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 109 ರನ್ಗಳಿಗೆ ಆಲೌಟ್ ಆಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಊಟದ ವೇಳೆಗೆ 84 ರನ್ ಗಳಿಸುವಷ್ಟರಲ್ಲಿ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಊಟದ ವಿರಾಮದ ವೇಳೆಯಲ್ಲಿ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕ್ಯುರೇಟರ್ನೊಂದಿಗೆ ಪಿಚ್ಗೆ ಬಂದು ಪರಿಶೀಲನೆ ನಡೆಸಿದರು.
ಇಂದೋರ್ ಪಿಚ್ ಬಗ್ಗೆ ರಾಹುಲ್ ದ್ರಾವಿಡ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅವರ ಮುಖದಲ್ಲಿ ಬೇಸರ ಹೊರಹೊಮ್ಮುತ್ತಿತ್ತು. ಭಾರತೀಯ ತಂಡದ ಆಟದ ಶೈಲಿಗೆ ಪಿಚ್ ಸರಿಹೊಂದುವುದಿಲ್ಲ ಎನ್ನುವ ಭಾವನೆ ಅವರಲ್ಲಿದ್ದಂತೆ ಇತ್ತು. ನಂತರ ಭಾರತ 109 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು.
ಮೊದಲನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾದ ಬೌಲರ್ ಗಳು ಪ್ರಾಬಲ್ಯ ಸಾಧಿಸಿದರು. ಆಸ್ಟ್ರೇಲಿಯಾದ ಸ್ಪಿನ್ನರ್ ಗಳು ಭಾರತದ ಎಲ್ಲಾ ವಿಕೆಟ್ಗಳನ್ನು ಪಡೆದು ಮಿಂಚಿದರು. ಮ್ಯಾಥ್ಯೂ ಕುಹ್ನೆಮನ್ 5 ವಿಕೆಟ್ ಪಡೆಯುವ ಮೂಲಕ ಭಾರತ ತಂಡಕ್ಕೆ ಮಾರಕವಾದರು. ನಾಥನ್ ಲಿಯಾನ್ 3 ವಿಕೆಟ್ ಪಡೆದರೆ, ಟಾಡ್ ಮುರ್ಫಿ 1 ವಿಕೆಟ್ ಪಡೆದುಕೊಂಡರು.

ಎರಡನೇ ಇನ್ನಿಂಗ್ಸ್ನಲ್ಲಿ ತಿರುಗಿಬೀಳುತ್ತಾ ಭಾರತ
ಮೊದಲನೇ ಇನ್ನಿಂಗ್ಸ್ನಲ್ಲಿ ಕಡಿಮೆ ಮೊತ್ತಕ್ಕೆ ಔಟಾಗಿರುವ ಭಾರತ ತಂಡಕ್ಕೆ ಮುಖ್ಯ ರಾಹುಲ್ ದ್ರಾವಿಡ್ ಸಲಹೆ ಸೂಚನೆಗಳನ್ನು ನೀಡುವ ಸಾಧ್ಯೆತೆ ಇದೆ. ಎರಡನೇ ಇನ್ನಿಂಗ್ಸ್ನಲ್ಲಿ ಬೃಹತ್ ಮೊತ್ತ ಗಳಿಸಿದರೆ ಮಾತ್ರ ಭಾರತ ಈ ಟೆಸ್ಟ್ ಪಂದ್ಯದ ಸೋಲನ್ನು ತಪ್ಪಿಸಿಕೊಳ್ಳಲು ಸಾಧ್ಯವಿದೆ.
ಎರಡನೇ ಇನ್ನಿಂಗ್ಸ್ನಲ್ಲಿ ಭಾರತದ ಬ್ಯಾಟರ್ ಗಳು ತಮ್ಮ ತಂತ್ರದಲ್ಲಿ ಬದಲಾವಣೆ ಮಾಡಿಕೊಂಡರೆ ಮಾತ್ರ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಎದುರಿಸಲು ಸಾಧ್ಯವಾಗಿದೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವನ್ನು ಆದಷ್ಟು ಕಡಿಮೆ ರನ್ಗಳಿಗೆ ಕಟ್ಟಿಹಾಕಬೇಕಿದೆ.
ಮೊದಲ ಎರಡು ಪಂದ್ಯಗಳು ಮೂರೇ ದಿನಕ್ಕೆ ಮುಕ್ತಾಯವಾಗಿದ್ದವು. ಮೂರನೇ ಟೆಸ್ಟ್ನಲ್ಲಿ ಮೊದಲನೇ ದಿನವೇ ಭಾರತ ತಂಡ ಔಟಾಗಿರುವುದನ್ನು ಕಂಡ ಅಭಿಮಾನಿಗಳು ಈ ಪಂದ್ಯ ಕೂಡ ಮೂರೇ ದಿನಕ್ಕೆ ಮುಕ್ತಾಯವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಭಾರತ ತಂಡದಲ್ಲಿ ಬದಲಾವಣೆ
ಮೂರನೇ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗದೆ. ಕೆಎಲ್ ರಾಹುಲ್ರನ್ನು ಉಪನಾಯಕನ ಸ್ಥಾನದಿಂದ ಕೆಳಗಿಳಿಸಿದ ನಂತರ ಅವರನ್ನು ಮೂರನೇ ಟೆಸ್ಟ್ಗೆ ಕೈಬಿಡಲಾಗಿದೆ. ಅವರ ಬದಲಾಗಿ ಶುಭಮನ್ ಗಿಲ್ಗೆ ಅವಕಾಶ ನೀಡಲಾಗಿದೆ.
ಭಾರತ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಮತ್ತೊಬ್ಬ ಅನುಭವಿ ಬೌಲರ್ ಉಮೇಶ್ ಯಾದವ್ಗೆ ಅವಕಾಶ ನೀಡಲಾಗಿದೆ.