
ಇಂದೋರ್ ಟೆಸ್ಟ್ನಲ್ಲಿ ಗೆಲ್ಲುವ ವಿಶ್ವಾಸದಲ್ಲಿರುವ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದೆ. ಎರಡನೇ ಇನ್ನಿಂಗ್ಸ್ ಆರಂಭಕ್ಕೆ ಮುನ್ನವೇ ತಂಡದ ಆರಂಭಿಕ ಆಟಗಾರ ಗಾಯಗೊಂಡಿದ್ದು, ಮೂರನೇ ದಿನ ಬ್ಯಾಟಿಂಗ್ ಮಾಡುವುದು ಅನುಮಾನ ಎನ್ನಲಾಗಿದೆ.
ತಂಡದ ಪ್ರಮುಖ ಬ್ಯಾಟರ್ ಉಸ್ಮಾನ್ ಖವಾಜಾ ಗಾಯಗೊಂಡಿದ್ದು ಆಸ್ಟ್ರೇಲಿಯಾ ತಂಡಕ್ಕೆ ಆತಂಕವನ್ನುಂಟು ಮಾಡಿದೆ. ಖವಾಜಾ ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ಆಸ್ಟ್ರೇಲಿಯಾ ಪರವಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
ಎರಡನೇ ದಿನದಲ್ಲಿ ಉಸ್ಮಾನ್ ಖವಾಜಾ ಆಸ್ಟ್ರೇಲಿಯಾ ಬೌಲಿಂಗ್ ವೇಳೆ ಅವರು ಫೀಲ್ಡಿಂಗ್ ಮಾಡಲು ಬರಲಿಲ್ಲ. ಚಹಾ ವಿರಾಮದ ನಂತರ ಮೈದಾನಕ್ಕೆ ಗಮನಾರ್ಹ ಪುನರಾಗಮನ ಮಾಡಿದರು. ಶ್ರೇಯಸ್ ಅಯ್ಯರ್ ನೀಡಿದ ಕ್ಯಾಚ್ ಹಿಡಿಯುವ ಮೂಲಕ ಗಮನ ಸೆಳೆದರು.
ಒಂದು ವೇಳೆ ಮುಂಜಾಗ್ರತಾ ಕ್ರಮವಾಗಿ ಅವರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ ಮೂರನೇ ದಿನ ಬ್ಯಾಟಿಂಗ್ ಮಾಡುವ ಸಾಧ್ಯತೆ ಇಲ್ಲ. ಆದರೆ ಅಹಮದಾಬಾದ್ ಟೆಸ್ಟ್ಗೆ ಅವರು ಲಭ್ಯವಿದ್ದಾರ ಇಲ್ಲವಾ ಎನ್ನುವುದು ವೈದ್ಯಕೀಯ ಪರೀಕ್ಷೆಗಳ ನಂತರ ನಿರ್ಧರಿಸಲು ತೀರ್ಮಾನಿಸಲಾಗಿದೆ.

ಮೈದಾನಕ್ಕೆ ಮರಳುವ ವಿಶ್ವಾಸದಲ್ಲಿ ಆಸ್ಟ್ರೇಲಿಯಾ
ಖವಾಜಾ ಗಾಯದ ಸಮಸ್ಯೆ ಗಂಭೀರವಾದುದಲ್ಲ ಎನ್ನುವ ವಿಶ್ವಾಸದಲ್ಲಿದೆ ಆಸ್ಟ್ರೇಲಿಯಾ ತಂಡ. ಒಂದು ವೇಳೆ ಅವರ ಬೆನ್ನು ನೋವಿನ ಸಮಸ್ಯೆ ಹೆಚ್ಚಾದರೆ ಆಸ್ಟ್ರೇಲಿಯಾ ಬ್ಯಾಟಿಂಗ್ ಬಲ ಕುಸಿಯಲಿದೆ. ಆಸ್ಟ್ರೇಲಿಯಾ ಈಗಾಗಲೇ ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತಿದ್ದು, ಉಳಿದ ಎರಡು ಪಂದ್ಯಗಳನ್ನು ಗೆಲ್ಲಲೇಬೇಕೆನ್ನುವ ಆಲೋಚನೆಯಲ್ಲಿದೆ.
ಭಾರತದ ವಿರುದ್ಧದ ಸರಣಿಯಲ್ಲಿ 5 ಇನ್ನಿಂಗ್ಸ್ಗಳಲ್ಲಿ ಖವಾಜಾ 153 ರನ್ ಗಳಿಸಿದ್ದಾರೆ. ಇಂದೋರ್ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಅಮೂಲ್ಯ 60 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ.

ಗೆಲುವಿನ ಸನಿಹದಲ್ಲಿ ಆಸ್ಟ್ರೇಲಿಯಾ
ಇಂದೋರ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವಿನ ಸನಿಹದಲ್ಲಿದೆ. ಪಂದ್ಯದ ಎರಡನೇ ದಿನ ಮೊದಲ ಇನ್ನಿಂಗ್ಸ್ನಲ್ಲಿ 197 ರನ್ಗಳಿಗೆ ಆಲೌಟ್ ಆಗುವ ಮೂಲಕ 88 ರನ್ಗಳ ಮುನ್ನಡೆ ಪಡೆದುಕೊಂಡಿತ್ತು, ನಂತರ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಭಾರತ 163 ರನ್ಗಳಿಗೆ ಆಲೌಟ್ ಆಯಿತು. ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸಬೇಕಾದರೆ ಎರಡನೇ ಇನ್ನಿಂಗ್ಸ್ನಲ್ಲಿ 76 ರನ್ ಗಳಿಸಬೇಕಾಗಿದೆ.
ಬೌಲರ್ ಗಳಿಗೆ ಪಿಚ್ ಹೆಚ್ಚಿನ ನೆರವು ನೀಡುತ್ತಿರುವುದರಿಂದ ಈ ಮೊತ್ತವನ್ನು ಚೇಸ್ ಮಾಡುವುದು ಸುಲಭವಲ್ಲ. ಸರಣಿಯ ಮೊದಲ ಎರಡೂ ಪಂದ್ಯಗಳು ಮೂರೇ ದಿನಕ್ಕೆ ಮುಗಿದ ನಂತರ ಮೂರನೇ ಟೆಸ್ಟ್ ಕೂಡ ಮೂರನೇ ದಿನವೇ ಮುಗಿಯುವುದು ನಿಶ್ಚಿತವಾಗಿದೆ.