
ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಯ 3 ನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ಮೂರನೇ ಟೆಸ್ಟ್ಗಾಗಿ ಭಾರತದ ಬ್ಯಾಟರ್ ಗಳು ನೆಟ್ಸ್ನಲ್ಲಿ ನಡೆಸಿದ ಅಭ್ಯಾಸದ ಬಗ್ಗೆ ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ ಮಾತನಾಡಿದ್ದಾರೆ.
ನೆಟ್ಸ್ನಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡಿದ ಅನುಭವ ಮತ್ತು ಟೆಸ್ಟ್ ಸ್ಟಾರ್ ಚೇತೇಶ್ವರ ಪೂಜಾರಗೆ ಬೌಲಿಂಗ್ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ. ಭಾರತದ ಇತರ ಬ್ಯಾಟರ್ ಗಳು ನೆಟ್ಸ್ನಲ್ಲಿ ಒಂದು ಚೆಂಡನ್ನು ಹೊಡೆದ ನಂತರ ಅತ್ತ ಇತ್ತ ನೋಡುತ್ತಿದ್ದರೆ ಕೊಹ್ಲಿ ಮಾತ್ರ ತಕ್ಷಣವೇ ಸಿದ್ಧರಾಗಿರುತ್ತಿದ್ದರು ಎಂದು ಸಿರಾಜ್ ಹೇಳಿದ್ದಾರೆ.
ನೆಟ್ಸ್ನಲ್ಲಿ ವಿರಾಟ್ ಕೊಹ್ಲಿಗೆ ಬೌಲಿಂಗ್ ಮಾಡುವುದು ಕಠಿಣ ಸವಾಲಾಗಿದೆ. ವೇಗದ ಬೌಲರ್ಗಳಿಗೆ ಸ್ವಲ್ಪವೂ ವಿಶ್ರಾಂತಿ ನೀಡುವುದಿಲ್ಲ, ಶಾಟ್ ಹೊಡೆದ ತಕ್ಷಣ ಮತ್ತೊಂದು ಬಾಲ್ ಎದುರಿಸಲು ಸಿದ್ಧವಾಗಿರುತ್ತಿದ್ದರು. ಬೌಲರ್ ಗಳಿಗೆ ಯೋಚಿಸಲು ಸಮಯವೇ ಸಿಗುವುದಿಲ್ಲ ಎಂದು ಹೇಳಿದರು.
ಭಾರತದ ಮತ್ತೊಬ್ಬ ಪ್ರಮುಖ ಬ್ಯಾಟರ್ ಚೇತೇಶ್ವರ ಪೂಜಾರ ಕೂಡ ಸಾಕಷ್ಟು ಯೋಚಿಸಿ ಬ್ಯಾಟಿಂಗ್ ಮಾಡುತ್ತಾರೆ ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ. "ಪೂಜಾರ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಹೆಚ್ಚಿನ ಗಮನ ಇಟ್ಟುಕೊಂಡು ಆಡುತ್ತಾರೆ. ವಿರಾಟ್ ಕೊಹ್ಲಿ ವೇಗದ ಬೌಲರ್ಗೆ ವಿಶ್ರಾಂತಿ ನೀಡುವುದಿಲ್ಲ. ಅವರು ಶಾಟ್ ಹೊಡೆದ ತಕ್ಷಣ ತಯಾರಾಗುತ್ತಾರೆ, ನನಗೆ ಯೋಚಿಸಲು ಸಮಯ ಸಿಗುತ್ತಿರಲಿಲ್ಲ" ಎಂದು ಅವರು ಎಸ್ಜಿ ಕ್ರಿಕೆಟ್ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ವಿರಾಟ್ ಕೊಹ್ಲಿ ಆಕ್ರಮಣಶೀಲ ಆಟಗಾರ
"ವಿರಾಟ್ ಕೊಹ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳದೆ ಮತ್ತೊಂದು ಬಾಲ್ ಆಡಲು ಸಜ್ಜಾಗುತ್ತಾರೆ. ಅವರಲ್ಲಿ ಸಾಕಷ್ಟು ಹೆಚ್ಚಿನ ಉತ್ಸಾಹವಿದೆ. ಹೆಚ್ಚು ಆಕ್ರಮಣಕಾರಿಯಾಗಿ ಆಡುತ್ತಾರೆ, ಅವರಂತಹ ಸೂಪರ್ಸ್ಟಾರ್ ಬ್ಯಾಟರ್ ಗೆ ಬೌಲಿಂಗ್ ಮಾಡುವುದು ಅದ್ಭುತವಾಗಿದೆ" ಎಂದು ಹೇಳಿದ್ದಾರೆ.
ಮಾರ್ಚ್ 1ರಿಂದ ಇಂದೋರ್ನಲ್ಲಿ ನಡೆಯಲಿರುವ 3ನೇ ಬಾರ್ಡರ್ ಗವಾಸ್ಕರ್ ಟ್ರೋಫಿ 2023ರ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದೆ. ವಿರಾಟ್ ಕೊಹ್ಲಿ ಈ ಅಂಗಳದಲ್ಲಿ ದ್ವಿಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಕೂಡ ಅವರಿಂದ ದೊಡ್ಡ ಇನ್ನಿಂಗ್ಸ್ ಬರುವ ಬಗ್ಗೆ ನಿರೀಕ್ಷೆ ಮಾಡಲಾಗಿದೆ.
ಮೊಹಮ್ಮದ್ ಸಿರಾಜ್ ಕೂಡ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ. ಏಕದಿನ ಮಾದರಿಯಲ್ಲಿ ನಂಬರ್ 1 ರ್ಯಾಂಕಿಂಗ್ ಬೌಲರ್ ಆಗಿರುವ ಅವರು ಟೆಸ್ಟ್ ಮಾದರಿಯಲ್ಲೂ ತಂಡದ ಪ್ರಮುಖ ಬೌಲರ್ ಆಗಿದ್ದಾರೆ.