
ಅಹಮದಾಬಾದ್ನಲ್ಲಿ ನಡೆಯುತ್ತಿರುವ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಕೊನೆಯ ಟೆಸ್ಟ್ನಲ್ಲಿ ಟಾಸ್ ಗೆದ್ದಿರುವ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಪಿಚ್ ಬ್ಯಾಟಿಂಗ್ಗೆ ನೆರವಾಗುವ ಸಾಧ್ಯತೆ ಇರುವುದರಿಂದ ನಾಯಕ ಸ್ಟೀವ್ ಸ್ಮಿತ್ ಈ ನಿರ್ಧಾರ ಮಾಡಿದ್ದಾರೆ.
ಆಸ್ಟ್ರೇಲಿಯಾ ಮೂರನೇ ಟೆಸ್ಟ್ನಲ್ಲಿ ಆಡಿದ್ದ ತಂಡವನ್ನೇ 4ನೇ ಟೆಸ್ಟ್ ಪಂದ್ಯಕ್ಕಾಗಿ ಉಳಿಸಿಕೊಂಡಿದೆ. ಭಾರತ ತಂಡದಲ್ಲಿ ಮಾತ್ರ ಒಂದು ಬದಲಾವಣೆ ಮಾಡಿದ್ದು, ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡಲಾಗಿದ್ದು, ಹಿರಿಯ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ವಾಪಸಾಗಿದ್ದಾರೆ.
4ನೇ ಟೆಸ್ಟ್ ಪಂದ್ಯವನ್ನು ವೀಕ್ಷಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಮೈದಾನದಲ್ಲಿ ಹಾಜರಿದ್ದಾರೆ. ಇಬ್ಬರೂ ಪ್ರಧಾನಿಗಳು ಉಭಯ ತಂಡದ ನಾಯಕರಿಗೆ ಟೆಸ್ಟ್ ಕ್ಯಾಪ್ ನೀಡಿ ಹಾರೈಸಿದರು. ನಂತರ ಇಬ್ಬರೂ ಪ್ರಧಾನಿಗಳು ವಾಹನದಲ್ಲಿ ಮೈದಾನದಲ್ಲಿ ಮೆರವಣಿಗೆ ಮೂಲಕ ನೆರೆದಿದ್ದ ಅಪಾರ ಜನಸ್ತೋಮಕ್ಕೆ ಕೈ ಬೀಸಿದರು.
4ನೇ ಟೆಸ್ಟ್ ಆರಂಭಕ್ಕೆ ಮುನ್ನ ಗುಜರಾತ್ನ ಸಂಸ್ಕೃತಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಗುಜರಾತ್ನ ಸಾಂಪ್ರದಾಯಿಕ ಉಡುಗೆಗಳನ್ನು ಉಟ್ಟು ನೃತ್ಯ ಮಾಡುವ ಮೂಲಕ ನೆರೆದಿದ್ದ ಅಪಾರ ಪ್ರೇಕ್ಷರರನ್ನು ರಂಜಿಸಲಾಯಿತು.

ಬ್ಯಾಟಿಂಗ್ಗೆ ನೆರವಾಗುವ ಪಿಚ್
ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಮೂರು ಪಂದ್ಯಗಳಿಗೆ ಇದ್ದ ಪಿಚ್ಗಿಂತ ಇದು ಉತ್ತಮವಾಗಿದೆ ಎಂದು ಪಿಚ್ ವರದಿ ತಿಳಿಸಿದೆ. ಪಿಚ್ ಮೇಲೆ ಹುಲ್ಲು ಇರುವುದರಿಂದ ಬ್ಯಾಟಿಂಗ್ಗೆ ನೆರವಾಗುತ್ತದೆ ಎಂದು ಹೇಳಲಾಗಿದೆ. ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಕೂಡ ಪಿಚ್ ಬ್ಯಾಟಿಂಗ್ಗೆ ಉತ್ತಮವಾಗಿದೆ. ಆದರೂ ಪಂದ್ಯ ನಡೆದಂತೆ ಬೌಲರ್ ಗಳಿಗೆ ಹೆಚ್ಚಿನ ನೆರವು ಸಾಧ್ಯತೆ ಇದೆ.
ಅಹಮದಾಬಾದ್ನಲ್ಲಿ ಶಮಿಗೆ ಹೆಚ್ಚಿನ ಅನುಭವ ಇರುವುದರಿಂದ ಅವರನ್ನು ತಂಡದಲ್ಲಿ ತರಲಾಗಿದೆ ಎಂದು ಹೇಳಲಾಗಿದೆ. ಶಮಿ ಆರಂಭದಲ್ಲಿ ವಿಕೆಟ್ ಪಡೆದರೆ ಭಾರತ ಆರಂಭದಲ್ಲಿ ಮೇಲುಗೈ ಸಾಧಿಸಬಹುದಾಗಿದೆ.

ಉಭಯ ತಂಡಗಳ ಆಡುವ ಬಳಗ
ಭಾರತ: ರೋಹಿತ್ ಶರ್ಮಾ(ನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಉಮೇಶ್ ಯಾದವ್.
ಆಸ್ಟ್ರೇಲಿಯಾ: ಟ್ರಾವಿಸ್ ಹೆಡ್, ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್ (ನಾಯಕ), ಪೀಟರ್ ಹ್ಯಾಂಡ್ಸ್ಕಾಂಬ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್, ನಾಥನ್ ಲಿಯಾನ್.