
ಇಂದೋರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 9 ವಿಕೆಟ್ಗಳ ಸೋಲನುಭವಿಸಿದ ನಂತರ ಭಾರತ ತಂಡ ಪಾಠ ಕಲಿತಂತಿದೆ. 4ನೇ ಟೆಸ್ಟ್ಗಾಗಿ ಭಾರತ ತಂಡ ಸಿದ್ಧತೆ ಆರಂಭಿಸಿದ್ದು, ಅಹಮದಾಬಾದ್ಗೆ ತೆರಳುವ ಮುನ್ನ ಇಂದೋರ್ನಲ್ಲಿ ಅಭ್ಯಾಸ ಮಾಡಿದರು.
ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮಾತ್ರ ಅಭ್ಯಾಸಕ್ಕೆ ಗೈರಾಗಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಉಳಿದ ಆಟಗಾರರು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಹೆಚ್ಚಿನ ಅಭ್ಯಾಸ ಮಾಡಿದರು.
ಕೆಎಲ್ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದು ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾದ ಶುಭಮನ್ ಗಿಲ್ ಸಾಕಷ್ಟು ಅಭ್ಯಾಸ ಮಾಡಿದರು. ದ್ರಾವಿಡ್ ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಗಿಲ್ ಜೊತೆ ಸುದೀರ್ಘವಾದ ಸೆಷನ್ ನಡೆಸಿದರು. ಉತ್ತಮ ರನ್ ಗಳಿಸುವಲ್ಲಿ ವಿಫಲವಾಗಿರುವ ಶ್ರೇಯಸ್ ಅಯ್ಯರ್ ಕೂಡ ಕೆಎಸ್ ಭರತ್ ಜೊತೆಗೆ ಕೂಡ ಹೆಚ್ಚಿನ ಸಮಯ ಕಳೆಯುವ ಮೂಲಕ ಮಾರ್ಗದರ್ಶನ ನೀಡಿದರು.
ಇಂದೋರ್ ಟೆಸ್ಟ್ನಲ್ಲಿ ಸೋತ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಅರ್ಹತೆ ಪಡೆಯಬೇಕೆಂದರೆ ನಾಲ್ಕನೇ ಟೆಸ್ಟ್ನಲ್ಲಿ ಗೆಲುವು ಸಾಧಿಸಲೇಬೇಕಿದೆ. ಮಾರ್ಚ್ 9ರಿಂದ ಅಹಮದಾಬಾದ್ನಲ್ಲಿ ಆರಂಭವಾಗಲಿರುವ ನಾಲ್ಕನೇ ಟೆಸ್ಟ್ ಭಾರತಕ್ಕೆ ಮಹತ್ವದ್ದಾಗಿದೆ.

ಮೊಹಮ್ಮದ್ ಶಮಿ ವಾಪಸ್
ಅಹಮದಾಬಾದ್ ಟೆಸ್ಟ್ನಲ್ಲಿ ಭಾರತ ತಂಡದ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ವಾಪಸಾಗುವ ಸಾಧ್ಯತೆ ಇದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ದೃಷ್ಟಿಯಿಂದ ಅವರಿಗೆ ಮೂರನೇ ಟೆಸ್ಟ್ನಲ್ಲಿ ವಿಶ್ರಾಂತಿ ನೀಡಲಾಗಿತ್ತು.
ಅಹಮದಾಬಾದ್ ಪಿಚ್ ವೇಗಿಗಳಿಗೆ ನೆರವು ನೀಡುವ ಸಾಧ್ಯತೆ ಇರುವುದರಿಂದ ಅವರನ್ನು ನಾಲ್ಕನೇ ಟೆಸ್ಟ್ಗೆ ಆಡುವ ಬಳಗದಲ್ಲಿ ನೋಡಬಹುದಾಗಿದೆ. ನಾಲ್ಕನೇ ಟೆಸ್ಟ್ಗಾಗಿ ಭಾರತ ತಂಡದಲ್ಲಿ ಕೆಲವು ಬದಲಾವಣೆ ಮಾಡುವ ಸಾಧ್ಯತೆ ಇದೆ.

ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಅಭ್ಯಾಸ
ಸ್ಟಾರ್ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಬ್ಯಾಟಿಂಗ್ ಅಭ್ಯಾಸ ಮಾಡಿದರು. ರಾಥೋರ್ ಮತ್ತು ದ್ರಾವಿಡ್ ಅಶ್ವಿನ್ಗೆ ಸ್ವೀಪ್ ಮಾಡುವ ಪಾಠ ಮಾಡಿದರು. ಕುಲದೀಪ್ ಯಾದವ್ ಕೂಡ ಪೂರ್ಣ ಪ್ರಮಾಣದ ಸೆಷನ್ನಲ್ಲಿ ಅಭ್ಯಾಸ ಮಾಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಕುಲದೀಪ್ ಯಾದವ್ ಅಭ್ಯಾಸ ಮಾಡಿದರು.
ಭಾನುವಾರ ಇಂದೋರ್ ನಲ್ಲಿ ಅಭ್ಯಾಸ ಮಾಡಿರುವ ಟೀಂ ಇಂಡಿಯಾ ಸೋಮವಾರ ಅಹಮದಾಬಾದ್ಗೆ ಪ್ರಯಾಣ ಮಾಡಲಿದ್ದು, ಮಂಗಳವಾರದಿಂದ ಅಭ್ಯಾಸವನ್ನು ಮತ್ತೆ ಆರಂಭಿಸಲಿದೆ. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್ ಮತ್ತು ಜಯದೇವ್ ಉನದ್ಕತ್ ಅಭ್ಯಾಸದಲ್ಲಿ ಭಾಗವಹಿಸರಲಿಲ್ಲ. ಕೊನೆಯ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ.