ಭಾನುವಾರ, ಡಿಸೆಂಬರ್ 3ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಆತಿಥೇಯ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಮುಖಾಮುಖಿಯಾಗುತ್ತಿವೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಭಾರತ ತಂಡ ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ಗಳನ್ನು ಕಲೆಹಾಕಿದ್ದು, ಆಸ್ಟ್ರೇಲಿಯಾ ತಂಡಕ್ಕೆ 161 ರನ್ಗಳ ಸವಾಲಿನ ಗುರಿ ನೀಡಿದೆ.
ಭಾರತದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಯಶಸ್ವಿ ಜೈಸ್ವಾಲ್ ಮತ್ತು ರುತುರಾಜ್ ಗಾಯಕ್ವಾಡ್ ಉತ್ತಮ ಆರಂಭ ನೀಡಲು ಪ್ರಯತ್ನಿಸಿದರು. ಆದರೆ, ತಂಡದ ಮೊತ್ತ 4 ಓವರ್ಗಳಲ್ಲಿ 33 ರನ್ಗಳಾಗಿದ್ದಾಗ 15 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಮೇತ 21 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಇನ್ನು 10 ರನ್ ಗಳಿಸಿ ಆಡುತ್ತಿದ್ದ ರುತುರಾಜ್ ಗಾಯಕ್ವಾಡ್ ಕೂಡಾ ಔಟಾದರು.

ನಂತರ ಬಂದ ಶ್ರೇಯಸ್ ಅಯ್ಯರ್ 37 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 2 ಸಿಕ್ಸರ್ಗಳ ಮೂಲಕ 53 ರನ್ ಬಾರಿಸಿ ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ನೋಡಿಕೊಂಡರು. ನಾಯಕ ಸೂರ್ಯಕುಮಾರ್ ಯಾದವ್ 5 ರನ್, ರಿಂಕು ಸಿಂಗ್ 6 ರನ್ ಗಳಿಸಿ ಬೇಗನೆ ವಿಕೆಟ್ ನೀಡಿದರು.
ಕೊನೆಯಲ್ಲಿ ಜಿತೇಶ್ ಶರ್ಮಾ 16 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿದರೆ, ಅಕ್ಷರ್ ಪಟೇಲ್ 21 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಮೇತ 31 ರನ್ ಬಾರಿಸಿದರು.
ಬೌಲಿಂಗ್ನಲ್ಲಿ ಆಸ್ಟ್ರೇಲಿಯಾ ತಂಡದ ಪರ ಬೆನ್ ದ್ವಾರ್ಶುಯಿಸ್ ಮತ್ತು ಜೇಸನ್ ಬೆಹ್ರೆಂಡಾರ್ಫ್ ತಲಾ ಎರಡು ವಿಕೆಟ್ ಕಬಲಿಸಿದರೆ, ಆರನ್ ಹಾರ್ಡಿ, ತನ್ವೀರ್ ಸಂಘ ಮತ್ತು ನಾಥನ್ ಎಲ್ಲಿಸ್ ತಲಾ ಒಂದೊಂದು ವಿಕೆಟ್ ಪಡೆದರು.