
ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿ ಸಾಕಷ್ಟು ಟೀಕೆಗೆ ಗುರಿಯಾದ್ದಾರೆ ಕೆಎಲ್ ರಾಹುಲ್. ಈ ಸರಣಿಯ ಮೂರು ಹಾಗೂ ನಾಲ್ಕನೇ ಪಂದ್ಯಗಳಿಗೆ ತಂಡವನ್ನು ಘೋಷಣೆ ಮಾಡಿದ್ದು ರಾಹುಲ್ ಅವರಿಂದ ಉಪನಾಯಕನ ಹೊಣೆಗಾರಿಕೆಯನ್ನು ವಾಪಾಸ್ ಪಡೆಯಲಾಗಿದೆ. ಅಭಿಮಾನಿಗಳು ಮಾತ್ರವಲ್ಲದೆ ಹಲವು ಕ್ರಿಕೆಟ್ ಪಂಡಿತರು ಕೂಡ ಕೆಎಲ್ ರಾಹುಲ್ ವಿಚಾರವಾಗಿ ಕಠಿಣ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಕೆಎಲ್ ರಾಹುಲ್ ಬೆಂಬಲಕ್ಕೆ ನಿಂತಿದ್ದಾರೆ.
ಕೆಎಲ್ ರಾಹುಲ್ ಪರವಾಗಿ ಮಾತನಾಡಿರುವ ಗೌತಮ್ ಗಂಭೀರ್ ಎಲ್ಲಾ ಕ್ರಿಕೆಟಿಗರು ಕೂಡ ತಮ್ಮ ವೃತ್ತಿ ಜೀವನದಲ್ಲಿ ಕಠಿಣ ಸಂದರ್ಭಗಳನ್ನು ಎದುರಿಸುತ್ತಾರೆ ಎಂದಿದ್ದು ರಾಹುಲ್ ಅವರನ್ನು ತಂಡದಿಂದ ಕೈಬೊಡಬಾರದು ಎಂದಿದ್ದಾರೆ. ರಾಹುಲ್ ಬಳಿ ಸಾಕಷ್ಟು ಸಾಮರ್ಥ್ಯವಿದ್ದು ಅಂಥಾ ಆಟಗಾರರಿಗೆ ಬೆಂಬಲ ನೀಡಬೇಕು ಎಂದಿದ್ದಾರೆ.
"ಭಾರತ ತಂಡದಿಂದ ಕೆಎಲ್ ರಾಹುಲ್ ಅವರನ್ನು ಹೊರಗಿಡಬಾರದು. ಎಲ್ಲರು ಕೂಡ ಕಳಪೆ ಫಾರ್ಮ್ಗಳನ್ನು ಎದುರಿಸುತ್ತಾರೆ. ಕ್ರಿಕೆಟ್ ಪಂಡಿತರು ಸೇರಿದಂತೆ ಯಾರಾದರೂ ಆಗಿರಲಿ ಆತ ಚೆನ್ನಾಗಿ ಪ್ರದರ್ಶನ ನೀಡುತ್ತಿಲ ಹಾಗಾಗಿ ಆಡುವ ಕೈಬಿಡಬೇಕು ಎಂದು ಹೇಳಲು ಸಾಧ್ಯವಿಲ್ಲ" ಎಂದಿದ್ದಾರೆ ಗೌತಮ್ ಗಂಭೀರ್.
"ಪ್ರತಿಭೆ ಹೊಂದಿರುವ ಆಟಗಾರರಿಗೆ ನೀವು ಬೆಂಬಲ ನೀಡಬೇಕು. ರೋಹಿತ್ ಶರ್ಮಾ ಅವರನ್ನೇ ನೋಡಿ ಆತ ಕೂಡ ಕಳಪೆ ಫಾರ್ಮ್ನಲ್ಲಿದ್ದರು. ಆತ ವೃತ್ತಿ ಜೀವನವನ್ನು ಆರಂಭಿಸಿದ ರೀತಿಯನ್ನು ನೋಡಿ. ಆತ ಬಹಳ ನಿಧಾರವಾಗಿ ತಮ್ಮ ನೈಜ ಪ್ರದರ್ಶನ ನೀಡಲು ಆರಂಭಿಸಿದ್ದರು. ಈ ಮೊದಲಿಗೆ ನೀವು ನೋಡಿದರೆ ಈಗ ಆತ ಹೇಗೆ ಆಡುತ್ತಿದ್ದಾರೆ ಎಂಬುದನ್ನು ನೋಡಿ. ಆತನ ಸಾಮರ್ಥ್ಯವನ್ನು ಎಲ್ಲರೂ ನೋಡಿದ್ದರು ಹಗೂ ಬೆಂಬಲ ನೀಡಿದ್ದರು. ಈಗ ಅದರ ಫಲಿತಾಂಶ ದೊರೆಯುತ್ತಿದೆ. ಆತ ಅದ್ಭುತವಾಗಿ ಪ್ರದರ್ಶನ ನೀಡುತ್ತಿದ್ದಾರೆ. ರಾಹುಲ್ ಕೂಡ ಅಂಥಾದ್ದೇ ಸಾಮರ್ಥ್ಯವನ್ನು ಹೊಂದಿರುವ ಆಟಗಾರ" ಎಂದಿದ್ದಾರೆ ಗೌತಮ್ ಗಂಭೀರ್.
ಇನ್ನು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಮುನ್ನಡೆಯಲ್ಲಿದೆ. ಇಂಥಾ ಸಂದರ್ಭದಲ್ಲಿ ತಂಡದ ಒಟಟ್ಆರೆ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ಯಾರನ್ನು ಕೂಡ ಆಡುವ ಬಳಗದಿಂದ ಕೈಬಿಡಬಾರದು ಎಂದಿದ್ದಾರೆ ಗೌತಮ್ ಗಂಭೀರ್. ಅಲ್ಲದೆ ಕೆಎಲ್ ರಾಹುಲ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಗಳಿಸಿದ್ದು ಅದಕ್ಕಾಗಿ ಗಂಭೀರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ಭಾರತ ಈ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆಯಲ್ಲಿದೆ. 0-2 ಅಂತರದಲ್ಲಿ ಇಲ್ಲ. ಹಾಗಾಗಿ ಯಾರನ್ನು ಕೂಡ ತಂಡದಿಂದ ಕೈಬಿಡಬಾರದು ಹಾಗೂ ತಂಡದ ಪ್ರದರ್ಶನಕ್ಕೆ ಬೆಂಬಲ ನೀಡಬೇಕು ನನ್ನ ಪ್ರಕಾರ ಕೆಎಲ್ ರಾಹುಲ್ ಅವರಿಗೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಡ್ ಬೆಂಬಲ ನೀಡಲಿದೆ ಎಂಬ ಭಾವನೆಯಿದೆ. ಆತ ಒಬ್ಬ ಅದ್ಭುತ ಆಟಗಾರ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾಕಷ್ಟು ರನ್ಗಳಿಸಿದ್ದಾರೆ" ಎಂದಿದ್ದಾರೆ ಗೌತಮ್ ಗಂಭೀರ್.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯ ಮಾರ್ಚ್ 1ರಿಂದ ಆರಂಭವಾಗಲಿದ್ದು ಇಂದೋರ್ನಲ್ಲಿ ಆಯೋಜನೆಯಾಗಲಿದೆ. ಆಸ್ಟ್ರೇಲಿಯಾ ತಂಡ ಖಾಯಂ ನಾಯಕ ಪ್ಯಾಟ್ ಕಮ್ಮಿನ್ಸ್ ಅಲಭ್ಯತೆಯೊಂದಿಗೆ ಈ ಪಂದ್ಯವನ್ನಾಡಲಿದ್ದು ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಇನ್ನು ಎರಡು ಪಂದ್ಯಗಳಲ್ಲಿ ಗೆದ್ದಿರುವ ಆತ್ಮವಿಶ್ವಾಸದಲ್ಲಿರುವ ಟೀಮ್ ಇಂಡಿಯಾ ವೈಟ್ವಾಶ್ ಗೆಲುವಿನ ಮೇಲೆ ಚಿತ್ತ ನೆಟ್ಟಿದೆ.