ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಬ್ರಿಸ್ಬೇನ್ನ ಗಬ್ಬಾ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 445 ರನ್ಗಳನ್ನು ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್ನಲ್ಲಿ 48 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದ್ದು, ಮೂರನೇ ದಿನದಾಟ ಅಂತ್ಯಗೊಂಡಿದೆ. ಆದರೆ, ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಕೆಲವು ವಿಷಯ ಗಂಭೀರವಾಗಿ ಕಂಡುಬಂದಿವೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಆಕಾಶ್ ದೀಪ್ ಮೇಲೆ ಬಹಿರಂಗವಾಗಿ ಕೋಪವನ್ನು ವ್ಯಕ್ತಪಡಿಸಿದ್ದಾರೆ.
ಗಬ್ಬಾ ಟೆಸ್ಟ್ ಪಂದ್ಯದ ಮೇಲೆ ಆಸ್ಟ್ರೇಲಿಯಾ ಪ್ರಾಬಲ್ಯ ಸಾಧಿಸಿದೆ. ಇದು ಟೀಮ್ ಇಂಡಿಯಾ ಮೇಲೆ ಒತ್ತಡ ಹೇರಿದೆ. ಇಂತಹ ಸಂದರ್ಭದಲ್ಲಿ ಆಕಾಶ್ ದೀಪ್ ಮಾಡಿದ ಆ ಒಂದು ತಪ್ಪಿನಿಂದ ರೋಹಿತ್ ಶರ್ಮಾ ಕೋಪಗೊಂಡಿದ್ದಾರೆ. ಆಕಾಶ್ ದೀಪ್ ಮೇಲೆ ರೋಹಿತ್ ಶರ್ಮಾ ಕೋಪಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಅಡಿಲೇಡ್ ಪಿಂಕ್ ಬಾಲ್ ಟೆಸ್ಟ್ನಲ್ಲಿ ಯುವ ವೇಗಿ ಹರ್ಷಿತ್ ರಾಣಾ ಯಶಸ್ಸು ಕಾಣಲಿಲ್ಲ. ಹೀಗಾಗಿ ಅವರ ಬದಲಿಗೆ ಗಬ್ಬಾ ಟೆಸ್ಟ್ ಪಂದ್ಯಕ್ಕೆ ನಾಯಕ ರೋಹಿತ್ ಶರ್ಮಾ ಅವರು ಆಕಾಶ್ ದೀಪ್ಗೆ ಅವಕಾಶ ನೀಡಿದರು. ಆಕಾಶ್ ದೀಪ್ ಭಾರೀ ನಿರೀಕ್ಷೆಯೊಂದಿಗೆ ಕಣಕ್ಕಿಳಿದರು. ಆದರೆ ಅವರ ಬೌಲಿಂಗ್ ಆಸ್ಟ್ರೇಲಿಯಾದ ಬ್ಯಾಟರ್ಗಳ ಮುಂದೆ ವ್ಯರ್ಥವಾಯಿತು. ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ನ 114ನೇ ಓವರ್ನಲ್ಲಿ ಆಕಾಶ್ ದೀಪ್ ಅಗಲವಾದ ವೈಡ್ ಬಾಲ್ ಹಾಕಿದರು. ಆದರೆ ರಿಷಬ್ ಪಂತ್ ಅವರ ಅತ್ಯುತ್ತಮ ವಿಕೆಟ್ ಕೀಪಿಂಗ್ನಿಂದ ಚೆಂಡು ಬೌಂಡರಿ ಗೆರೆ ಮುಟ್ಟಲಿಲ್ಲ. ಈ ವೇಳೆ ಆಕಾಶ್ ದೀಪ್ ಮೇಲೆ ರೋಹಿತ್ ಶರ್ಮಾ ಕೋಪಗೊಂಡರು. 'ತಲೆ ಒಳಗೆ ಏನಿದೆ?' ಹೇಳುವ ಮೂಲಕ ಹಿಟ್ಮ್ಯಾನ್ ತನ್ನ ಕೋಪವನ್ನು ಹೊರ ಹಾಕಿದ್ದಾರೆ.
ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಅವರನ್ನು ಹೊರೆತುಪಡಿಸಿ ಉಳಿದ ಯಾವುದೇ ಬೌಲರ್ಗಳು ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ. ಜಸ್ಪ್ರೀತ್ ಬುಮ್ರಾ 6 ವಿಕೆಟ್ ಪಡೆದು ಮಿಂಚಿದರು. ಇವರೊಂದಿಗೆ ಮೊಹಮ್ಮದ್ ಸಿರಾಜ್ ಕೂಡ 2 ವಿಕೆಟ್ ಪಡೆದರು. ಆರಂಭದಲ್ಲಿ ಟೀಮ್ ಇಂಡಿಯಾ ಪರ ಬುಮ್ರಾ 2 ವಿಕೆಟ್ ಪಡೆಯುವ ಮೂಲಕ ಮಿಂಚಿದರು.
ಆಕಾಶ್ ದೀಪ್ ಈಗಾಗಲೇ ಭಾರತದ ಪರ ತವರಿನಲ್ಲಿ ಹಲವು ಟೆಸ್ಟ್ ಪಂದ್ಯಗಳನ್ನು ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ, ಆಸ್ಟ್ರೇಲಿಯಾ ಪ್ರವಾಸ ಆಕಾಶ್ ದೀಪ್ ಅವರಿಗೆ ಮೊದಲ ವಿದೇಶಿ ಟೆಸ್ಟ್ ಸರಣಿಯಾಗಿದೆ. ಹೀಗಾಗಿ ಅವರ ಪ್ರದರ್ಶನದ ಎಲ್ಲರ ಚಿತ್ತ ನೆಟ್ಟಿದೆ. ಗಬ್ಬಾ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರುವ ಅವರು ಕೇವಲ 1 ವಿಕೆಟ್ ಪಡೆಯುವಲ್ಲಿ ಯಶ್ವಿಯಾಗಿದ್ದಾರೆ. ಇದೀಗ ಎರಡನೇ ಇನ್ನಿಂಗ್ಸ್ ಅವರು ತಮ್ಮ ಸಾಮರ್ಥ್ಯವನ್ನು ತೋರಿಸಲು ಮತ್ತೊಂದು ಅವಕಾಶವಿದೆ.