ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಬಹುನಿರೀಕ್ಷಿತ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯ ನವೆಂಬರ್ 22 ರಂದು ಪರ್ತ್ನ ಆಪ್ಟಸ್ ಸ್ಟೇಡಿಯಂನಲ್ಲಿ ಆರಂಭವಾಗಲಿದೆ. ಜಸ್ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡವು ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಶುಭಾರಂಭ ಮಾಡಲು ಸಜ್ಜಾಗಿವೆ.
ವಿರಾಟ್ ಕೊಹ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಆಪ್ಟಸ್ ಸ್ಟೇಡಿಯಂನಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಭಾರೀ ಕುತೂಹಲ ಮೂಡಿಸಿದೆ. ಪರ್ತ್ ಟೆಸ್ಟ್ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ ಬಂದಿದೆ. ಅಭಿಮಾನಿಗಳಿಗೆ ಪರ್ತ್ನಿಂದ ಒಳ್ಳೆಯ ಸುದ್ದಿ ಏನೆಂದರೆ ಅವರು ಎಲ್ಲಾ ಐದು ದಿನಗಳ ಕಾಲ ಪಂದ್ಯವನ್ನು ನೋಡಲಿದ್ದಾರೆ.

ಪರ್ತ್ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತ ಆಗುವ ಸಾಧ್ಯತೆಗಳಿವೆ. ಗುರುವಾರ ಸಹಾ ಮೊದಲ ಟೆಸ್ಟ್ ಪಂದ್ಯದ ತಯಾರಿಯಲ್ಲಿರುವಾಗಲೇ ಪರ್ತ್ನಲ್ಲಿ ಮಳೆಯಾಗಿದೆ. ಹೀಗಾಗಿ ಶುಕ್ರವಾರ ಪರ್ತ್ ಟೆಸ್ಟ್ನ ಆರಂಭಿಕ ದಿನ ಮಳೆಯಿಂದಾಗಿ ಪಂದ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಮಳೆ ಪಂದ್ಯದ ಆರಂಭದಲ್ಲಿ ಬರುವ ಸಾಧ್ಯತೆಯಿದ್ದು, ಇಡೀ ದಿನದಾಟ ವಾಶ್ ಔಟ್ ಆಗುವ ಸಾಧ್ಯತೆಗಳಿಲ್ಲ ಎಂದು ಹವಾಮಾನ ವರದಿಗಳು ಮಾಹಿತಿ ನೀಡಿವೆ. ಹಾಗಾಗಿ ಐದು ದಿನಗಳ ಕಾಲ ಕ್ರಿಕೆಟ್ ಅಭಿಮಾನಿಗಳು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಾದಾಟವನ್ನು ನೋಡಲಿದ್ದಾರೆ.
ಹವಾಮಾನ ಮುನ್ಸೂಚನೆಗಳ ಪ್ರಕಾರ, ಪರ್ತ್ ಟೆಸ್ಟ್ ಪಂದ್ಯದ ಮೊದಲ ದಿನ ಶೇ.25ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಬೆಳಿಗ್ಗೆ ಮಳೆ ಬೀಳಲಿದ್ದು, ಆಪ್ಟಸ್ ಸ್ಟೇಡಿಯಂನಲ್ಲಿ ವೇಗದ ಬೌಲಿಂಗ್ಗೆ ಅನುಕೂಲಕರ ಪರಿಸ್ಥಿತಿಗಳು ಸೃಷ್ಟಿಯಾಗಲಿವೆ. ಪರ್ತ್ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ಮೊದಲ ದಿನ ಬೆಳಗ್ಗೆ ಹೊರತುಪಡಿಸಿ ಉಳಿದ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಕಡಿಮೆ ಇದೆ. ಕೆಲವು ಸ್ಥಳಗಳಲ್ಲಿ ಮೋಡ ಕವಿದ ವಾತಾವರಣವಿರಬಹುದು. ಆದರೆ ಹವಾಮಾನದಿಂದಾಗಿ ಆಟಕ್ಕೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ವರದಿ ಹೊರ ಬಿದ್ದಿದೆ.
ಪರ್ತ್ನ ಕ್ಯುರೇಟರ್ಗಳು ಆಟವು ಮುಂದುವರೆದಂತೆ ಪಿಚ್ನಲ್ಲಿ ಬಿರುಕುಗಳನ್ನು ಉಂಟಾಗಬಹುದು ಅಂದುಕೊಂಡಿದ್ದಾರೆ. ಆದರೆ ಈಗ ಅದು ಅಸಂಭವವಾಗಿದೆ. ಆ ಪರಿಸ್ಥಿತಿಯಲ್ಲಿ, ಟೆಸ್ಟ್ ಪಂದ್ಯದ ಮೊದಲ ಎರಡು ದಿನಗಳಲ್ಲಿ ಬೌಲರ್ಗಳಿಂದ ಸಾಕಷ್ಟು ವೇಗ ಮತ್ತು ಬೌನ್ಸ್ ಅನ್ನು ನಿರೀಕ್ಷಿಸಬಹುದು. ಆದರೆ ನಂತರ ಅದು ಬ್ಯಾಟರ್ಗಳಿಗೆ ರನ್ಗಳಿಗೆ ಅನುಕೂಲಕರವಾಗಬಹುದು. ಟೀಮ್ ಇಂಡಿಯಾ ಪರ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಅವರೊಂದಿಗೆ ಮೂವರು ವೇಗದ ಬೌಲರ್ಗಳು ಕಣಕ್ಕೀಳಿಯುವ ಸಾಧ್ಯತೆಯಿದೆ. ಪ್ರಸ್ತುತ ಭಾರತ ತಂಡವು ನಾಯಕ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಆಕಾಶ್ ದೀಪ್ ಅವರೊಂದಿಗೆ ವೇಗದ ಬೌಲಿಂಗ್ ದಾಳಿ ನಡೆಸಲು ಯೋಜನೆ ರೂಪಿಸಿದೆ.