
ಆಸ್ಟ್ರೇಲಿಯಾದ ಎಡಗೈ ಸ್ಪಿನ್ನರ್ ಮ್ಯಾಥ್ಯೂ ಕುಹ್ನೆಮನ್ ಭಾರತದ ವಿರುದ್ಧ ಸರಣಿಯ ಮೂರನೇ ಟೆಸ್ಟ್ನಲ್ಲಿ ಮೊದಲ ದಿನವೇ 5 ವಿಕೆಟ್ ಪಡೆದು ಮಿಂಚಿದ್ದಾರೆ. ತಮ್ಮ ಭರ್ಜರಿ ಪ್ರದರ್ಶನದ ನಂತರ ಮಾತನಾಡಿದ ಅವರು, ತಮ್ಮ ಜೀವನದುದ್ದಕ್ಕೂ ಇಂದೋರ್ನಲ್ಲಿನ ಪಿಚ್ನಲ್ಲಿ ಬೌಲಿಂಗ್ ಮಾಡಬಹುದು ಎಂದು ಹೇಳಿದ್ದಾರೆ.
ಮೂರನೇ ಟೆಸ್ಟ್ನಲ್ಲಿ ಮೊದಲ ದಿನವೇ ಭಾರತದ ಬ್ಯಾಟರ್ ಗಳನ್ನು ಕಾಡಿದರು. ದೆಹಲಿ ಟೆಸ್ಟ್ನಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ಗೆ ಪದಾರ್ಪಣೆ ಮಾಡಿದ ಕುಹ್ನೆಮನ್ ತಮ್ಮ ಎರಡನೇ ಟೆಸ್ಟ್ ಪಂದ್ಯದಲ್ಲೇ 5 ವಿಕೆಟ್ ಪಡೆದ ಸಾಧನೆ ಮಾಡಿದರು.
ಮ್ಯಾಥ್ಯೂ ಕುಹ್ನೆಮನ್ ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಭಾರತ ತಂಡ 109 ರನ್ಗಳಿಗೆ ಆಲೌಟ್ ಆಗಿತ್ತು. ರೋಹಿತ್ ಶರ್ಮಾರನ್ನು ಮೊದಲಿಗೆ ಔಟ್ ಮಾಡಿದ ಅವರು ಉಮೇಶ್ ಯಾದವ್ರ ವಿಕೆಟ್ ಪಡೆಯುವ ಮೂಲಕ 5 ವಿಕೆಟ್ ಪಡೆದ ಸಾಧನೆ ಮಾಡಿದರು. ದೆಹಲಿಯ ಟೆಸ್ಟ್ನಲ್ಲಿ ಕುಹ್ನೆಮನ್ ಕೇವಲ 2 ವಿಕೆಟ್ ಪಡೆದಿದ್ದರು.
ಮೊದಲ ದಿನದಾಟ ಮುಕ್ತಾಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಹ್ನೆಮನ್, ತಮ್ಮ ಬೌಲಿಂಗ್ ಮಾಡಲು ನಾಥನ್ ಲಿಯಾನ್ ನೀಡಿದ ಅಮೂಲ್ಯ ಸಲಹೆಗಳ ಬಗ್ಗೆ ಉಲ್ಲೇಖಿಸಿದರು. ಲಿಯಾನ್ ಪದೇ ಪದೇ ಎಲ್ಲಿ ಬೌಲ್ ಮಾಡಬೇಕು ಎಂದು ಹೇಳುತ್ತಿದ್ದರು ಎಂದು ಹೇಳಿದರು.

ಇಲ್ಲೇ ಉಳಿದು ಕ್ರಿಕೆಟ್ ಆಡಬೇಕು ಎನಿಸುತ್ತದೆ
"ನಾನು ಇಲ್ಲೇ ವಾಸಿಸಬಹುದು ಮತ್ತು ನನ್ನ ವೃತ್ತಿಜೀವನದ ಉಳಿದ ಭಾಗದ ಕ್ರಿಕೆಟ್ ಅನ್ನು ಇಲ್ಲೇ ಆಡಬಹುದು. ಇದು ಅದ್ಭುತವಾಗಿದೆ. ಬೌಲಿಂಗ್ ಮಾಡುವ ಬಗ್ಗೆ, ನಾಥನ್ ಲಿಯಾನ್ ಸಾಕಷ್ಟು ಸಲಹೆಗಳನ್ನು ನೀಡಿದರು. ನಾಥನ್ ಲಿಯಾನ್ ಅತ್ಯುತ್ತಮವಾಗಿ ಮಾರ್ಗದರ್ಶನ ನೀಡಿದರು. ಯಾವ ಲೈನ್ ಮತ್ತು ಲೆಂತ್ನಲ್ಲಿ ಬೌಲಿಂಗ್ ಮಾಡಬೇಕು ಎನ್ನುವುದನ್ನು ಪದೇ ಪದೇ ಹೇಳುವ ಮೂಲಕ ಸಹಾಯ ಮಾಡಿದರು" ಎಂದು ಹೇಳಿದ್ದಾರೆ.
ಭಾರತದ ಸ್ಪಿನ್ ಜೋಡಿಯಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾರ ದೊಡ್ಡ ಅಭಿಮಾನಿ ಎಂದು ಕುಹ್ನೆಮನ್ ಹೇಳಿದ್ದಾರೆ. "ಅವರಿಬ್ಬರ ಬೌಲಿಂಗ್ ಕೌಶಲ್ಯವನ್ನು ನೋಡಿ ನನಗೆ ವಿಸ್ಮಯವಾಗಿದೆ. ಸರಣಿ ಮುಗಿತ ನಂತರ ಕೆಲವು ತಂತ್ರಗಳನ್ನು ಕಲಿಸುವುದಾಗಿ ಜಡೇಜಾ ಭರವಸೆ ನೀಡಿದ್ದಾರೆ" ಎಂದು ಕುಹ್ನೆಮನ್ ಹೇಳಿದ್ದಾರೆ.

ದೆಹಲಿ ಟೆಸ್ಟ್ನಲ್ಲಿ ಅವರಿಂದ ತುಂಬಾ ಕಲಿತಿದ್ದೇನೆ
"ಜಡೇಜಾ ಮತ್ತು ಅಶ್ವಿನ್ ಬೌಲಿಂಗ್ ಮಾಡುವ ರೀತಿಗೆ ನಾನು ದೊಡ್ಡ ಅಭಿಮಾನಿಯಾಗಿದ್ದೇನೆ. ಜಡೇಜಾ ಬಳಿ ನೀವು ನನಗೆ ಏನಾದರೂ ಸಲಹೆಗಳನ್ನು ಕೊಡಿ ಎಂದು ಕೇಳಿದೆ, ಸರಣಿ ಮುಗಿದ ಬಳಿಕ ನನಗೆ ಕೆಲವು ಸಲಹೆ ನೀಡುವುದಾಗಿ ಜಡೇಜಾ ಹೇಳಿದ್ದಾರೆ ಎಂದು ಕುಹ್ನೆಮನ್ ಹೇಳಿದರು.
ದೆಹಲಿ ಟೆಸ್ಟ್ ವೇಳೆ ಜಡೇಜಾ ಬೌಲಿಂಗ್ ಮಾಡುವ ಶೈಲಿಯನ್ನು ಗಮನಿಸಿದ್ದೇನೆ. ಅದರಿಂದ ನಾನು ಸಾಕಷ್ಟು ಕಲಿತಿದ್ದೇನೆ. ಅದನ್ನೇ ನಾನು ಇಂದೋರ್ ಟೆಸ್ಟ್ನಲ್ಲಿ ಅನುಸರಿದ್ದೇನೆ ಎಂದು ಕುಹ್ನೆಮನ್ ಹೇಳಿದರು.