ಸಿಡ್ನಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಐದನೇ ಟೆಸ್ಟ್ ನಡೆದಿದೆ. ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿ 185 ರನ್ಗಳಿಗೆ ಆಲೌಟ್ ಆಗಿದೆ. ಈ ಟೆಸ್ಟ್ ಪಂದ್ಯದಲ್ಲೂ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಮತ್ತೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಕೊಂಚ ನೆಲಕಚ್ಚಿ ಬ್ಯಾಟ್ ಮಾಡಿದ್ದರಿಂದ ಟೀಮ್ ಇಂಡಿಯಾ ಸಾಧಾರಣ ಮೊತ್ತವನ್ನು ಮೊದಲ ಇನಿಂಗ್ಸ್ನಲ್ಲಿ ಕಲೆ ಹಾಕಿತು.
ರೋಹಿತ್ ಶರ್ಮಾ ಅವರ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಜಸ್ಪ್ರಿತ್ ಬುಮ್ರಾ ಅವರು ಟಾಸ್ ಗೆಲ್ಲುತ್ತಿದ್ದಂತೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ನಾಯಕನ ನಿರ್ಧಾರವನ್ನು ಬ್ಯಾಟರ್ಗಳು ತಪ್ಪು ಎಂದು ಸಾಬೀತು ಮಾಡಿದರು. ಸೆಷನ್ ಬೈ ಸೆಷನ್ ವಿಕೆಟ್ಗಳು ಬೀಳುತ್ತಲೇ ಸಾಗಿದವು. ಟೀಮ್ ಇಂಡಿಯಾ ಐದನೇ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೊತ್ತ ಕಲೆ ಹಾಕಬೇಕು ಎಂಬ ಅಭಿಮಾನಿಗಳ ಕನಸಿಗೆ ಆರಂಭದಲ್ಲಿ ಪೆಟ್ಟು ಬಿದ್ದಿತು.

ಟೀಮ್ ಇಂಡಿಯಾಗೆ ಇದು ಮಹತ್ವದ ಪಂದ್ಯವಾಗಿತ್ತು. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು. ಆದರೆ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟರ್ಗಳು ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಲಿಲ್ಲ. ಆರಂಭಿಕರಾದ ಯಶಸ್ವಿ ಜೈಸ್ವಾಲ್ (10), ಕೆಎಲ್ ರಾಹುಲ್ (4) ರನ್ ಕಲೆ ಹಾಕುವಲ್ಲಿ ವಿಫಲರಾದರು. ನಾಲ್ಕನೇ ಟೆಸ್ಟ್ನಲ್ಲಿ ತಂಡದಿಂದ ಹೊರಗುಳಿದಿದ್ದ ಶುಭಮನ್ ಗಿಲ್, ಸಿಡ್ನಿ ಟೆಸ್ಟ್ನಲ್ಲಿ ಆಡುವ ಅವಕಾಶವನ್ನು ಪಡೆದರು. ಆದರೆ ಇವರು ಸಹ 20 ರನ್ಗಳ ಮೇಲೆ ದೊಡ್ಡ ಕಾಣಿಕೆ ನೀಡಲಿಲ್ಲ.
ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡುವ ಸೂಚನೆ ನೀಡಿದ್ದರು. ಅಲ್ಲದೆ ತಾವು ಎದುರಿಸಿದ ಎರಡನೇ ಎಸೆತದಲ್ಲಿ ತಪ್ಪು ಹೊಡೆತಕ್ಕೆ ಮುಂದಾಗಿ ಔಟ್ ಆಗುವ ಭಯದಲ್ಲಿದ್ದರು. ಆದರೆ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ವಿರಾಟ್ ಕೊಹ್ಲಿ 69 ಎಸೆತಗಳನ್ನು ಎದುರಿಸಿ ಭರವಸೆ ಮೂಡಿಸಿದರೂ ಸಹ 17 ರನ್ ಆಚೆಗೆ ರನ್ ಕಲೆ ಹಾಕಲಿಲ್ಲ.

72 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ರವೀಂದ್ರ ಜಡೇಜಾ ಹಾಗೂ ರಿಷಭ್ ಪಂತ್ ಜೋಡಿ ಕೊಂಚ ಆಸರೆ ಆಯಿತು. ಈ ಜೋಡಿ 151 ಎಸೆತಗಳನ್ನು ಎದುರಿಸಿ 48 ರನ್ಗಳ ಜೊತೆಯಾಟವನ್ನು ನೀಡಿತು. ರಿಷಭ್ ಪಂತ್ 98 ಎಸೆತಗಳಲ್ಲಿ 40 ರನ್ ಬಾರಿಸಿ ಔಟ್ ಆದರು. ರವೀಂದ್ರ ಜಡೇಜಾ 95 ಎಸೆತಗಳಲ್ಲಿ 26 ರನ್ ಸಿಡಿಸಿದರು.ಕೆಳ ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ 14, ಜಸ್ಪ್ರಿತ್ ಬುಮ್ರಾ 22 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಆಸ್ಟ್ರೇಲಿಯಾದ ಪರ ವೇಗದ ಬೌಲರ್ಗಳು ಬಿಗುವಿನ ದಾಳಿಯನ್ನು ನಡೆಸಿದರು. ಸ್ಕಾಟ್ ಬೋಲೆಂಡ್ 31 ರನ್ ನೀಡಿ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ವಿಕೆಟ್ ಪಡೆದರು.