ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಐದನೇ ಮತ್ತು ಕೊನೆ ಟೆಸ್ಟ್ ಪಂದ್ಯ ಸಿಡ್ನಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಉಭಯ ತಂಡಗಳ ಕೊನೆಯ ಟೆಸ್ಟ್ ಪಂದ್ಯ ಭಾರೀ ಕುತೂಹಲ ಮೂಡಿಸಿದೆ. ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾ ಯುವ ಬ್ಯಾಟರ್ ಸ್ಯಾಮ್ ಕಾನ್ಸ್ಟಾಸ್ ಕೆಣಕಿದ್ದಾರೆ. ಇದಾದ ನಂತರದ ಎಸೆತದಲ್ಲಿ ಬುಮ್ರಾ ಉಸ್ಮಾನ್ ಖವಾಜಾ ಔಟ್ ಮಾಡುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರು ಖವಾಜಾ ವಿಕೆಟ್ ಕಬಳಿಸುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಒಟ್ಟಿಗೆ ಓಡಿ ಬಂದು ಸಂಭ್ರಮಾಚರಣೆ ಮಾಡಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಆಟಗಾರರು ಒಗ್ಗಟು ಪ್ರದರ್ಶನ ಮಾಡಿದ್ದು, ತಂಡದೊಳಗೆ ಎಲ್ಲವೂ ಸರಿಯಿಲ್ಲ ಎಂಬ ಊಹಪೋಹಗಳಿಗೆ ತೆರೆ ಎಳೆದಿದ್ದಾರೆ.

ಸಿಡ್ನಿ ಟೆಸ್ಟ್ನ ಮೊದಲ ದಿನದ ಆಟದ ಅಂತ್ಯದ ವೇಳೆ ಆಸ್ಟ್ರೇಲಿಯಾ ಇನ್ನಿಂಗ್ಸ್ನಲ್ಲಿ ಉಸ್ಮಾನ್ ಖಾವಾಜಾ ಮತ್ತು ಸ್ಯಾಮ್ ಕಾನ್ಸ್ಟಾಸ್ ಆಡುತ್ತಿದ್ದರು. ಈ ವೇಳೆ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ನ ಮೂರನೇ ಓವರ್ ಬೌಲಿಂಗ್ ಮಾಡಲು ತಯಾರಾಗಿದ್ದರು. ಬಳಿಕ ಬುಮ್ರಾ ಹಿಂತಿರುಗಿ ತಾನು ಗುರುತು ಮಾಡಿದ ಜಾಗದಿಂದ ಬೌಲಿಂಗ್ ಮಾಡಲು ಹೋಗಬೇಕಾಯಿತು. ಈ ವೇಳೆ ಬುಮ್ರಾ ಅವರಿಗೆ ಸ್ಯಾಮ್ ಏನೋ ಹೇಳಿದರು. ಈ ಸಂದರ್ಭದಲ್ಲಿ ಬುಮ್ರಾ ಮತ್ತು ಸ್ಯಾಮ್ ನಡುವೆ ವಾಗ್ವಾದ ನಡೆಯಿತು. ತಕ್ಷಣ ಅಂಪೈರ್ ಮಧ್ಯಪ್ರವೇಶಿಸಬೇಕಾಯಿತು.
ಇದಾದ ನಂತರ ಬುಮ್ರಾ ತಮ್ಮ ಮೂರನೇ ಓವರ್ನಲ್ಲಿ ಎರಡು ಎಸೆತಗಳ ನಂತರ ಖವಾಜಾ ಅವರನ್ನು ಔಟ್ ಮಾಡಿದರು. ವಿಕೆಟ್ ಬೀಳುತ್ತಿದ್ದಂತೆ ಟೀಮ್ ಇಂಡಿಯಾ ಆಟಗಾರರು ಉತ್ಸುಕರಾಗಿ ಅದ್ಧೂರಿಯಾಗಿ ಸಂಭ್ರಮಿಸಿದರು. ಜಸ್ಪ್ರೀತ್ ಬುಮ್ರಾ, ವಿರಾಟ್ ಕೊಹ್ಲಿ ಮತ್ತು ಪ್ರಸಿದ್ಧ್ ಕೃಷ್ಣ ಸೇರಿದಂತೆ ಭಾರತ ತಂಡದ ಬಹುತೇಕ ಆಟಗಾರರು ಮೈದಾನದಲ್ಲಿ ಸಂಭ್ರಮಿಸಿದರು.
ಸಿಡ್ನಿ ಟೆಸ್ಟ್ ಪಂದ್ಯ ಮೊದಲ ದಿನವೇ ಭಾರತ ತಂಡ ಮೊದಲ ಇನಿಂಗ್ಸ್ನಲ್ಲಿ 185 ರನ್ಗಳಿಗೆ ಆಲೌಟಾಗಿದೆ. ಟೀಮ್ ಇಂಡಿಯಾದ ಬ್ಯಾಟರ್ಗಳು ಕೇವಲ 72.2 ಓವರ್ಗಳಿಗೆ ಮಾತ್ರ ಬ್ಯಾಟಿಂಗ್ ಮಾಡಲು ಶಕ್ತರಾಗಿದ್ದಾರೆ. ಭಾರತದ ಪರ ರಿಷಬ್ ಪಂತ್ ಗರಿಷ್ಠ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ಮಿಚೆಲ್ ಸ್ಟಾರ್ಕ್ 3, ಪ್ಯಾಟ್ ಕಮಿನ್ಸ್ 2 ಮತ್ತು ನಾಥನ್ ಲಿಯಾನ್ 1 ವಿಕೆಟ್ ಉರುಳಿಸಿದರು.
ಸಿಡ್ನಿ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್ ಕಳೆದುಕೊಂಡು 9 ರನ್ ಗಳಿಸಿದೆ. ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರನ್ನು ಔಟ್ ಮಾಡಿದ್ದಾರೆ ಖಾವಾಜಾ ಕೇವಲ 2 ರನ್ಗಳಿಗೆ ವಿಕೆಟ್ ಕಳೆದುಕೊಂಡಿದ್ದಾರೆ.