
ಎಡಗೈ ವೇಗಿಗಳು ಯಾವುದೇ ತಂಡದಲ್ಲಿದ್ದರೂ ತಂಡಕ್ಕೆ ಸಾಕಷ್ಟು ಲಾಭವಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಜಹೀರ್ ಖಾನ್ ಭಾರತ ತಂಡದಲ್ಲಿ ಸಾಕಷ್ಟು ಯಶಸ್ವಿಯಾಗಿದ್ದ ಎಡಗೈ ಬೌಲರ್ ಆಗಿದ್ದರು. ಅದಾದ ನಂತರ ಭಾರತ ತಂಡದಲ್ಲಿ ಹಲವು ಎಡಗೈ ವೇಗಿಗಳು ಬಂದರೂ ಸ್ಥಿರವಾದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಎಡಗೈ ವೇಗಿ ಅರ್ಶದೀಪ್ ಸಿಂಗ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ತಂಡದಲ್ಲಿ ಸ್ಥಾನ ಗಟ್ಟಿಯಾಗಿಸಿಕೊಳ್ಳುವ ಮುನ್ಸೂಚನೆ ನೀಡಿದ್ದಾರೆ. ಆದರೂ ಅವರು ಸಾಕಷ್ಟು ಸುಧಾರಣೆಯಾಗಬೇಕಾಗಿದೆ.
ಭಾರತ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಮುನ್ನ ರಾಹುಲ್ ದ್ರಾವಿಡ್ಗೆ ಈ ಬಗ್ಗೆ ಪ್ರಶ್ನೆಗಳನ್ನು ಕೇಳಲಾಯಿತು. ಭಾರತ ತಂಡದಲ್ಲಿ ಗುಣಮಟ್ಟದ ಎಡಗೈ ವೇಗಿಗಳ ಕೊರತೆ ಬಗ್ಗೆ ಪ್ರಶ್ನೆ ಮಾಡಿದರು. ಪತ್ರಕರ್ತನೊಬ್ಬ ಶಾಹೀನ್ ಶಾ ಆಫ್ರಿದಿ ಮತ್ತು ಮಿಚೆಲ್ ಸ್ಟಾರ್ಕ್ ಅವರನ್ನು ಉದಾಹರಣೆ ನೀಡಿದ ಬಳಿಕ, ದ್ರಾವಿಡ್ ಸರಿಯಾಗಿಯೇ ಉತ್ತರವನ್ನು ನೀಡಿದರು.
"ಎಡಗೈ ವೇಗದ ಬೌಲರ್ ಗಳು ಸಾಕಷ್ಟು ಬದಲಾವಣೆ ತರುತ್ತಾರೆ. ನೀವು ನಮ್ಮ ಮಾಜಿ ಆಟಗಾರ ಜಹೀರ್ ಖಾನ್ರನ್ನು ಮರೆತಿದ್ಧೀರಿ. ಟೀಂ ಇಂಡಿಯ ಆಯ್ಕೆಗಾರರು ಮತ್ತು ಮ್ಯಾನೇಜ್ಮೆಂಡ್ ಅಂತಹ ಪ್ರತಿಭೆಗಳ ಮೇಲೆ ನಿಗಾ ಇಡುತ್ತದೆ. ಅರ್ಷದೀಪ್ ಸಿಂಗ್ ಇತ್ತೀಚೆಗೆ ಏಕದಿನ ಪಂದ್ಯಗಳಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಕೂಡ ಅವರು 4-5 ವಿಕೆಟ್ ಪಡೆದಿದ್ದಾರೆ. ಅವರು ಹಂತ ಹಂತವಾಗಿ ಸುಧಾರಣೆ ಮಾಡಿಕೊಳ್ಳುತ್ತಿದ್ದಾರೆ" ಎಂದು ಮಾಧ್ಯಮಗೋಷ್ಠಿಯಲ್ಲಿ ದ್ರಾವಿಡ್ ಹೇಳಿದರು.

ಪತ್ರಕರ್ತನಿಗೆ ದ್ರಾವಿಡ್ ಖಡಕ್ ಉತ್ತರ
ದ್ರಾವಿಡ್ ಮಾತನಾಡುವಾದ ಅಡ್ಡಿಪಡಿಸಿದ ಪತ್ರಕರ್ತನೊಬ್ಬ ಎಡಗೈ ವೇಗಿಗಳು ಭಾರತದ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ ಎಂದು ಹೇಳಲು ಶುರುಮಾಡಿದಾಗ, ದ್ರಾವಿಡ್ ತಾಳ್ಮೆ ಕಳೆದುಕೊಂಡರು.
6 ಅಡಿ 4 ಇಂಚು ಎತ್ತರದ ಎಡಗೈ ಬೌಲರ್ ಯಾರಾದರು ನಿಮಗೆ ಗೊತ್ತಿದ್ದರೆ ನಮಗೆ ತಿಳಿಸಿ ಎಂದು ಪತ್ರಕರ್ತನಿಗೆ ಚಾಟಿ ಬೀಡಿದರು. ಶಾಹಿನ್ ಅಫ್ರಿದಿ, ಮಿಚೆಲ್ ಸ್ಟಾರ್ಕ್ ಹೆಸರನ್ನು ತೆಗೆದುಕೊಂಡಿದ್ದೀರಿ, 6 ಅಡಿ 5 ಇಂಚು ಎತ್ತರವಿರುವ ಎಡಗೈ ಬೌಲರ್ ಭಾರತದಲ್ಲಿ ಸಿಗುವುದು ಅಪರೂಪ ಎಂದು ದ್ರಾವಿಡ್ ಹೇಳಿದರು.

ಉತ್ತಮ ಪ್ರದರ್ಶನ ನೀಡಿದರೆ ತಂಡದಲ್ಲಿ ಸ್ಥಾನ
ಆಯ್ಕೆದಾರು ಕೂಡ ಅಂತಹ ಪ್ರತಿಭೆಗಳನ್ನು ಹುಡುಕುತ್ತಿದ್ದಾರೆ ಎಂದು ರಾಹುಲ್ ದ್ರಾವಿಡ್ ಹೇಳಿದರು. ಆದರೆ, ಎಡಗೈ ವೇಗದ ಬೌಲರ್ ಆದ ಮಾತ್ರಕ್ಕೆ ತಂಡದಲ್ಲಿ ಸ್ಥಾನ ಸಿಗುವುದಿಲ್ಲ. ಅತ್ಯುತ್ತಮ ಪ್ರದರ್ಶನ ನೀಡಬೇಕು, ಸಾಮರ್ಥ್ಯವನ್ನು ಸಾಬೀತುಪಡಿಸಿದಾಗ ಮಾತ್ರ ಅಂತಹ ಆಟಗಾರರಿಗೆ ತಂಡದಲ್ಲಿ ಅವಕಾಶ ಸಿಗುತ್ತದೆ ಎಂದ್ರ ದ್ರಾವಿಡ್ ಹೇಳಿದರು.
"ಎಡಗೈ ಬೌಲರ್ ಪ್ರಾಮುಖ್ಯತೆ ನಮಗೂ ತಿಳಿದಿದೆ. ಎಡಗೈ ಬೌಲರ್ ಆದ ತಕ್ಷಣ ಆತನಿಗೆ ಅವಕಾಶ ಸಿಗುವುದಿಲ್ಲ. ಜಹೀರ್ ಖಾನ್ ಮತ್ತು ಆಶಿಶ್ ನೆಹ್ರಾರಂತಹ ಆಟಗಾರರಿಗೆ ಎಡಗೈ ಬೌಲರ್ ಎಂದು ಅವಕಾಶ ನೀಡಿದ್ದಲ್ಲ, ಬದಲಾಗಿ ಅವರು ಅತ್ಯುತ್ತಮ ಆಟಗಾರರಾಗಿದ್ದರು, ಹಾಗಾಗಿ ತಂಡದಲ್ಲಿ ಅವಕಾಶ ಪಡೆದರು" ಎಂದು ದ್ರಾವಿಡ್ ತಿಳಿಸಿದರು.
ಎಡಗೈ ವೇಗಿಗಳಾದ ಅರ್ಷದೀಪ್, ಖಲೀಲ್ ಅಹ್ಮದ್ ಮತ್ತು ಮುಖೇಶ್ ಚೌಧರಿ ಅವರನ್ನು ಆಯ್ಕೆದಾರರು ಗಮನಿಸುತ್ತಿದ್ದಾರೆ ಎಂದು ದ್ರಾವಿಡ್ ಹೇಳಿದ್ದಾರೆ.