ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಆಡಿದ ಬಳಿಕ ಪಿತೃತ್ವದ ರಜೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮರಳಲಿದ್ದಾರೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಈ ನಿರ್ಧಾರಕ್ಕೆ ಕೋಚ್ ರವಿಶಾಸ್ತ್ರಿ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ನವೆಂಬರ್ 9ರಂದು ಬಿಸಿಸಿಐ ಪರಿಷ್ಕೃತ ಟೆಸ್ಟ್ ತಂಡವನ್ನು ಪ್ರಕಟಿಸಿತು. ಈ ತಂಡದಲ್ಲಿ ಕೊಹ್ಲಿ ಮೊದಲ ಟೆಸ್ಟ್ ಪಂದ್ಯದ ಬಳಿಕ ಪಿತೃತ್ವದ ರಜೆಯನ್ನು ಪಡೆದುಕೊಳ್ಳುವ ವಿಚಾರವನ್ನು ತಿಳಿಸಲಾಗಿತ್ತು.
ವಿರಾಟ್ ಕೊಹ್ಲಿ ನಿರ್ಧಾರದ ಬಗ್ಗೆ ರವಿಶಾಸ್ತ್ರಿ ಪ್ರತಿಕ್ರಿಯಿಸಿದರು, "ಇದು ಜೀವನದಲ್ಲಿ ಸಿಗುವ ಏಕೈಕ ಕ್ಷಣ(ಮೊದಲ ಮಗುವಿನ ಜನ್ಮ). ಹೀಗಾಗಿ ನಾನು ಆತನ ನಿರ್ಧಾರದ ಜೊತೆಗಿರುತ್ತೇನೆ" ಎಂದು ಕೋಚ್ ರವಿಶಾಸ್ತ್ರಿ ಸ್ಪೊರ್ಟ್ಸ್ಸ್ಟಾರ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿಕೊಂಡಿದ್ದಾರೆ.
ರೋಹಿತ್, ಇಶಾಂತ್ ಶೀಘ್ರ ಆಸ್ಟ್ರೇಲಿಯಾಕ್ಕೆ ಹೊರಡಬೇಕು: ರವಿ ಶಾಸ್ತ್ರಿ
ಇದೇ ಸಂದರ್ಭದಲ್ಲಿ ರವಿ ಶಾಸ್ತ್ರಿ ಕಠಿಣವಾದ ಕ್ವಾರಂಟೈನ್ ಅವಧಿಯಿಲ್ಲದಿದ್ದರೆ ವಿರಾಟ್ ಕೊಹ್ಲಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ ಬಳಿಕವೇ ಮರಳುತ್ತಿದ್ದರು ಎಂದು ತಿಳಿಸಿದ್ದಾರೆ. "ಬಲವಾದ ಕಾರಣಗಳು ಇಲ್ಲದೆ ಆತ ಆಟವನ್ನು ತಪ್ಪಿಸಿಕೊಳ್ಳಲಾರ. ಆದರೆ ಈ ದುಷ್ಟ ಕ್ವಾರಂಟೈನ್ನ ಕಾರಣದಿಂದಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡುವುದಕ್ಕೂ ಮುನ್ನವೇ ಭಾರತಕ್ಕೆ ಮರಳಲಿದ್ದಾರೆ" ಎಂದು ಶಾಸ್ತ್ರಿ ಹೇಳಿದ್ದಾರೆ.
"ಆಸ್ಟ್ರೇಲಿಯಾದಲ್ಲಿ ಕ್ವಾರಂಟೈನ್ ನಿಯಮ ಬಹಳಷ್ಟು ಕಠಿಣವಾಗಿದೆ. ಮತ್ತೊಮ್ಮೆ 14 ದಿನಗಳ ಕ್ವಾರಂಟೈನ್ ಅವಧಿಯ ಮೂಲಕ ತಂಡವನ್ನು ಕೂಡಿಕೊಳ್ಳುವುದು ಯಾರಿಗಾದರೂ ಕಠಿಣವಾಗಿರುತ್ತದೆ, ಆದರೆ ನಮ್ಮ ಅಭಿಮಾನಿಗಳಿಗೆ ಹಾಗೂ ಟೀಕಾಕಾರರಿಗೆ ಒಂದು ಸಂಗತಿಯನ್ನು ಹೇಳಲು ಬಯಸುತ್ತೇವೆ. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಭಾರತದ ಏಕೈಕ ನಾಯಕ ವಿರಾಟ್ ಕೊಹ್ಲಿ" ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.
ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ
ಅಡಿಲೇಡ್ನಲ್ಲಿ ನಿಗದಿಯಾಗಿರುವಂತೆ ಡಿಸೆಂಬರ್ 17ರಂದು ಟೆಸ್ಟ್ ಸರಣಿಯ ಮೊದಲ ಪಂದ್ಯ ಅಹರ್ನಿಶಿಯಾಗಿ ನಡೆದ ನಂತರ ವಿರಾಟ್ ಕೊಹ್ಲಿ ಭಾರತಕ್ಕೆ ಮರಳಲಿದ್ದಾರೆ. ಪಿಂಕ್ ಬಾಲ್ ಟೆಸ್ಟ್ನ ನಂತರ ಭಾರತ ಹಾಗೂ ಎರಡು ತಂಡಗಳು ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಆದರೆ ಇದರಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಣಕ್ಕಿಳಿಯುವುದಿಲ್ಲ. ಟೆಸ್ಟ್ನಲ್ಲಿ ಟೀಮ್ ಇಂಡಿಯಾದ ಉಪನಾಯಕಾಗಿರುವ ಅಜಿಂಕ್ಯ ರಹಾನೆ ಟೀಮ್ ಇಂಡಿಯಾವನ್ನು ಈ ಮೂರು ಟೆಸ್ಟ್ ಪಂದ್ಯಗಳಿಗೆ ಮುನ್ನಡೆಸಲಿದ್ದಾರೆ.