ಗುರುವಾರ, ನವೆಂಬರ್ 23ರಂದು ವಿಶಾಖಪಟ್ಟಣದ ವೈಎಸ್ ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ 5 ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಆತಿಥೇಯ ಭಾರತ ತಂಡ 209 ರನ್ಗಳ ಬೃಹತ್ ಮೊತ್ತವನ್ನು ಯಶಸ್ವಿಯಾಗಿ ಚೇಸ್ ಮಾಡಿ 2 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು.
ಇದೇ ವೇಳೆ ಭಾರತದ ಆರಂಭಿಕ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಟಿ20 ಕ್ರಿಕೆಟ್ನಲ್ಲಿ ಡೈಮಂಡ್ ಡಕ್ಗೆ ಔಟಾದ ಭಾರತದ ಮೂರನೇ ಬ್ಯಾಟರ್ ಎಂಬ ಕುಖ್ಯಾತಿಗೆ ಪಾತ್ರರಾದರು.
ಆಸೀಸ್ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಅವರಿಂದ ರನೌಟ್ ಆಗುವ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಒಂದೇ ಒಂದು ಎಸೆತವನ್ನು ಎದುರಿಸದೆ ವಿಕೆಟ್ ಒಪ್ಪಿಸಿದರು.

ಭಾರತ ತಂಡದ ರನ್-ಚೇಸಿಂಗ್ ವೇಳೆ ಮೊದಲ ಓವರ್ನ ಅಂತಿಮ ಎಸೆತದಲ್ಲಿ, ಸಹ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಎರಡನೇ ರನ್ ಕರೆಯಲ್ಲಿ ರುತುರಾಜ್ ಗಾಯಕ್ವಾಡ್ ಗೊಂದಲಕ್ಕೆ ಒಳಗಾಗಿ ರನೌಟ್ ಆದರು. ಈ ವೇಳೆ ಭಾರತ 0.5 ಓವರ್ಗಳಲ್ಲಿ 11 ರನ್ಗಳಾಗುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು.
ಈ ಮೂಲಕ ರುತುರಾಜ್ ಗಾಯಕ್ವಾಡ್ ಅವರು ಟಿ20 ಕ್ರಿಕೆಟ್ನಲ್ಲಿ ಡೈಮಂಡ್ ಡಕ್ಗೆ ಔಟಾದ ಇತರ ಭಾರತೀಯ ಬ್ಯಾಟರ್ಗಳಾದ ಅಮಿತ್ ಮಿಶ್ರಾ ಮತ್ತು ಜಸ್ಪ್ರೀತ್ ಬುಮ್ರಾ ಅವರ ಸಾಲಿಗೆ ಸೇರಿಕೊಂಡರು.
2016ರ ಫೆಬ್ರವರಿ 9ರಂದು, ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಶ್ರೀಲಂಕಾ ವಿರುದ್ಧ ಜಸ್ಪ್ರೀತ್ ಬುಮ್ರಾ ಡೈಮಂಡ್ ಡಕ್ಗೆ ಔಟಾದರು.
ಇದಾದ ಬಳಿಕ 2017ರ ಜನವರಿಯಲ್ಲಿ ನಾಗ್ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ (ವಿಸಿಎ) ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧ ಅಮಿತ್ ಮಿಶ್ರಾ ಡೈಮಂಡ್ ಡಕ್ಗೆ ವಿಕೆಟ್ ಒಪ್ಪಿಸಿದರು. ಒಟ್ಟಾರೆಯಾಗಿ, ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ 21 ಭಾರತೀಯ ಬ್ಯಾಟರ್ಗಳು ಡೈಮಂಡ್ ಡಕ್ಗಾಗಿ ಔಟಾಗಿದ್ದಾರೆ.

ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ ಮತ್ತು ರುತುರಾಜ್ ಗಾಯಕ್ವಾಡ್ ಹೊರತುಪಡಿಸಿ, ಬಿಷನ್ ಸಿಂಗ್ ಬೇಡಿ, ರೋಜರ್ ಬಿನ್ನಿ, ಅಂಶುಮಾನ್ ಗಾಯಕ್ವಾಡ್, ಚೇತನ್ ಶರ್ಮಾ, ವೆಂಕಟಪತಿ ರಾಜು, ಜಾವಗಲ್ ಶ್ರೀನಾಥ್, ಅಬೆ ಕುರುವಿಲ್ಲ, ರಾಜೇಶ್ ಚೌಹಾಣ್, ನವಜೋತ್ ಸಿಂಗ್ ಸಿಧು, ಎಂಎಸ್ಕೆ ಪ್ರಸಾದ್, ಹರ್ಭಜನ್ ಸಿಂಗ್, ರಾಹುಲ್ ದ್ರಾವಿಡ್, ಎಸ್ ಶ್ರೀಶಾಂತ್, ಜಹೀರ್ ಖಾನ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಡೈಮಂಡ್ ಡಕ್ಗೆ ಔಟಾದ ಭಾರತೀಯರಾಗಿದ್ದಾರೆ.
ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ (ಯುಎಸ್ಎ) ನಲ್ಲಿ ನಡೆಯಲಿರುವ 2024ರ ಟಿ20 ವಿಶ್ವಕಪ್ಗೆ ಮುಂಚಿತವಾಗಿ ಭಾರತ ತಂಡ ತಮ್ಮ ಸರಿಯಾದ ಸಂಯೋಜನೆ ಕಂಡುಕೊಳ್ಳಲು ಎದುರು ನೋಡುತ್ತಿರುವ ಕಾರಣ, ರುತುರಾಜ್ ಗಾಯಕ್ವಾಡ್ ಎರಡನೇ ಟಿ20 ಪಂದ್ಯದಲ್ಲಿ ಪುನರಾಗಮನ ಮಾಡಲು ಬಯಸುತ್ತಿದ್ದಾರೆ.
ಮೊದಲ ಟಿ20 ಪಂದ್ಯದ ಕುರಿತು ಹೇಳುವುದಾದರೆ, ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ವಿಕೆಟ್ ಕೀಪರ್-ಬ್ಯಾಟರ್ ಜೋಶ್ ಇಂಗ್ಲಿಸ್ ಅವರ ಸ್ಫೋಟಕ ಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್ಗಳನ್ನು ಕಲೆಹಾಕಿತು.
209 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಇಶಾನ್ ಕಿಶನ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.