ಜೂನ್ 7ರಿಂದ ಲಂಡನ್ನ ಓವಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 3 ವಿಕೆಟ್ಗೆ 327 ರನ್ ಗಳಿಸಿ ಉತ್ತಮ ಮೊತ್ತ ಕಲೆಹಾಕಿದೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರನ್ನು ಆಡಿಸದಿರುವ ಭಾರತ ತಂಡದ ನಿರ್ಧಾರವನ್ನು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸಮರ್ಥಿಸಿಕೊಂಡಿದ್ದಾರೆ. ಲಂಡನ್ ಪಿಚ್ನ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಹೆಚ್ಚುವರಿ ವೇಗಿಗಳ ಅಗತ್ಯವಿದೆ ಎಂದು ಭಾರತ ತಂಡದ ಮ್ಯಾನೇಜ್ಮೆಂಟ್ ಭಾವಿಸಿದೆ ಎಂದು ಹೇಳಿದರು.

ಭಾರತ ತಂಡವು 2023ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 1ನೇ ದಿನದಂದು ಟಾಸ್ ಗೆದ್ದ ನಂತರ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು 3 ವಿಕೆಟ್ಗೆ 327 ರನ್ ಗಳಿಸಿದ್ದರಿಂದ ಭಾರತದ ನಿರ್ಧಾರ ಉಲ್ಟಾ ಆಯಿತು.
ಲಂಡನ್ನಲ್ಲಿ ಬುಧವಾರ ಬೆಳಿಗ್ಗೆ ಮೋಡ ಕವಿದ ವಾತಾವರಣ ಇದ್ದಿದ್ದರಿಂದ, ರೋಹಿತ್ ಶರ್ಮಾ ಮೊದಲು ಬೌಲಿಂಗ್ ಮಾಡಲು ನಿರ್ಧರಿದರು. ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಹೊಸ ಬಾಲ್ನಲ್ಲಿ ದಾಳಿಗಿಳಿದರು. ಮೊಹಮ್ಮದ್ ಸಿರಾಜ್ 4ನೇ ಓವರ್ನಲ್ಲಿ ಉಸ್ಮಾನ್ ಖವಾಜಾ ಅವರ ವಿಕೆಟ್ ಪಡೆಯುವ ಮೊದಲ ಯಶಸ್ಸು ತಂದುಕೊಟ್ಟರು.
ಭಾರತದ 4ನೇ ಬೌಲಿಂಗ್ ಆಯ್ಕೆಯಾಗಿದ್ದ ಶಾರ್ದೂಲ್ ಠಾಕೂರ್ ಅವರು ಭೋಜನ ವಿರಾಮದ ಮೊದಲು ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ಭೋಜನ ವಿರಾಮದ ನಂತರ, ದೊಡ್ಡ ಮೊತ್ತ ಗಳಿಸುವ ಮುನ್ಸೂಚನೆ ನೀಡಿದ್ದ ಅಪಾಯಕಾರಿ ಬ್ಯಾಟ್ಸ್ಮನ್ ಮಾರ್ನಸ್ ಲ್ಯಾಬುಸ್ಚಾಗ್ನೆ ಅವರ ವಿಕೆಟ್ ಅನ್ನು ಮೊಹಮ್ಮದ್ ಶಮಿ ಪಡೆದರು.
ಆ ಬಳಿಕ ಓವಲ್ ಪಿಚ್ನಲ್ಲಿ ಬಿಸಿಲು ಬೀಳಲು ಪ್ರಾರಂಭಿಸಿದಾಗ, ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಬ್ಯಾಟಿಂಗ್ ಸ್ನೇಹಿ ಪರಿಸ್ಥಿತಿಯನ್ನು ಚೆನ್ನಾಗಿ ಬಳಸಿಕೊಂಡರು. ಇವರಿಬ್ಬರು ಮುರಿಯದ 4ನೇ ವಿಕೆಟ್ಗೆ 251 ರನ್ ಗಳಿಸಿದರು.
ಭಾರತೀಯ ಬೌಲಿಂಗ್ ದಾಳಿ ಕೊನೆಯ ಎರಡು ಅವಧಿಗಳಲ್ಲಿ ತನ್ನ ಲಯವನ್ನು ಕಳೆದುಕೊಂಡಿತು. ಸ್ಟೀವ್ ಸ್ಮಿತ್ ಅವರು ವೇಗದ ದಾಳಿಯನ್ನು ನಿರಾಶೆಗೊಳಿಸಿದರು.
ಇನ್ನು ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತದ ತಂಡದ ಆಯ್ಕೆಯ ಬಗ್ಗೆ ತಮ್ಮ ಅಭಿಪ್ರಾಯ ನೀಡಿದರು. ರವಿಚಂದ್ರನ್ ಅಶ್ವಿನ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡುವುದರ ಬಗ್ಗೆ ಸಾಕಷ್ಟು ಪ್ರಶ್ನೆಗಳು ಎದ್ದವು.
ಭಾರತ ತಂಡದ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಅವರು 4 ವೇಗಿಗಳನ್ನು ಆಡಿಸಲು ತಂಡದ ಮ್ಯಾನೇಜ್ಮೆಂಟ್ನ ನಿರ್ಧಾರವನ್ನು ಬೆಂಬಲಿಸಿದರು ಮತ್ತು ಪರಿಸ್ಥಿತಿಗಳು ಹೇಗೆ ವಿಭಿನ್ನವಾಗಿವೆ ಎಂಬುದರ ಕುರಿತು ವಿವರಿಸಿದರು.
"ರವಿಚಂದ್ರನ್ ಅಶ್ವಿನ್ ಅವರಂತಹ ಚಾಂಪಿಯನ್ ಬೌಲರ್ ಅನ್ನು ಕೈಬಿಡುವುದು ಯಾವಾಗಲೂ ತುಂಬಾ ಕಷ್ಟಕರವಾದ ನಿರ್ಧಾರ. ಆದರೆ ನಾವು ಬೆಳಗ್ಗೆ ಪರಿಸ್ಥಿತಿಗಳನ್ನು ನೋಡಿದ್ದೇವೆ ಮತ್ತು ಹೆಚ್ಚುವರಿ ವೇಗಿ ಖಂಡಿತವಾಗಿಯೂ ಪ್ರಯೋಜನಕಾರಿ ಎಂದು ಭಾವಿಸಿದ್ದೆವು. ಇದು ಹಿಂದೆಯೂ ಕೆಲಸ ಮಾಡಿದೆ. ಕಳೆದ ಪ್ರವಾಸದಲ್ಲಿ ನಾವು 4 ವೇಗಿಗಳೊಂದಿಗೆ ಆಡಿದ್ದೆವೆ. ಅವರು ತಂಡಕ್ಕೆ ಉತ್ತಮ ಪ್ರದರ್ಶನ ನೀಡಿದರು," ಎಂದು ಪಾರಸ್ ಮಾಂಬ್ರೆ ಮೊದಲ ದಿನದಾಟ ನಂತರದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.