ಹೆಡ್ಕೋಚ್ ಗೌತಮ್ ಗಂಭೀರ್ ಆಸ್ಟ್ರೇಲಿಯಾ ಪ್ರವಾಸದ ಮಧ್ಯದಲ್ಲಿ ಟೀಮ್ ಇಂಡಿಯಾವನ್ನು ತೊರೆದು ಭಾರತಕ್ಕೆ ಮರಳುತ್ತಿದ್ದಾರೆ. ಗೌತಮ್ ಗಂಭೀರ್ ವೈಯಕ್ತಿಕ ತುರ್ತು ಪರಿಸ್ಥಿತಿಯಿಂದಾಗಿ ಆಸ್ಟ್ರೇಲಿಯಾದಿಂದ ಮನೆಗೆ ಮರಳಿದ್ದಾರೆ. ನವೆಂಬರ್ 30 ರಿಂದ ಕ್ಯಾನ್ಬೆರಾದಲ್ಲಿ ನಡೆಯಲಿರುವ ಎರಡು ದಿನಗಳ ಹಗಲು-ರಾತ್ರಿ ಅಭ್ಯಾಸ ಪಂದ್ಯದಲ್ಲಿ ಗೌತಮ್ ಗಂಭೀರ್ ಟೀಮ್ ಇಂಡಿಯಾ ಜೊತೆ ಕಾಣಿಸಿಕೊಳ್ಳುವ ಸಾಧ್ಯತೆ ಇಲ್ಲ. ಡಿಸೆಂಬರ್ 6 ರಿಂದ ಅಡಿಲೇಡ್ನಲ್ಲಿ ನಡೆಯಲಿರುವ ಪಿಂಕ್ ಬಾಲ್ ಟೆಸ್ಟ್ಗೆ ಗೌತಮ್ ಗಂಭೀರ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಗೌತಮ್ ಗಂಭೀರ್ ತಮ್ಮ ಪುನರಾಗಮನಕ್ಕೆ ಬಿಸಿಸಿಐ ಅನುಮತಿ ಕೋರಿದ್ದಾರೆ ಎಂದು ವರದಿಗಳು ಹೇಳಿವೆ.
ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವ ಪ್ರಕಾರ, ಗಂಭೀರ್ ಮಂಗಳವಾರ ಬೆಳಗ್ಗೆ ಭಾರತಕ್ಕೆ ಮರಳಿದಿದ್ದಾರೆ. ಇದು ವೈಯಕ್ತಿಕ ತುರ್ತು ಪರಿಸ್ಥಿತಿಯಾಗಿದೆ. ಅವರ ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆ ಇರಬಹುದು. ಅಡಿಲೇಡ್ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ಗೂ ಮುನ್ನ ಅವರು ಆಸ್ಟ್ರೇಲಿಯಾಕ್ಕೆ ವಾಪಸಾಗಲಿದ್ದಾರೆ. ಟೀಮ್ ಇಂಡಿಯಾ ನವೆಂಬರ್ 27 ರಂದು ಕ್ಯಾನ್ಬೆರಾಗೆ ತೆರಳಲಿದ್ದು, ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರ ಗೌರವಾರ್ಥವಾಗಿ ಆಯೋಜಿಸಿರುವ ಸಮಾರಂಭದಲ್ಲಿ ಇಡೀ ತಂಡ ಭಾಗವಹಿಸಲಿದೆ ಎಂದು ಮಾಹಿತಿ ನೀಡಿದ್ದಾರೆ.

ನವೆಂಬರ್ 30 ರ ಶನಿವಾರದಂದು ಆರಂಭವಾಗಲಿರುವ ಎರಡು ದಿನಗಳ ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನಾಡಲು ಭಾರತ ತಂಡ ಬುಧವಾರ ಕ್ಯಾನ್ಬೆರಾಗೆ ತೆರಳಲಿದೆ. ಗೌತಮ್ ಗಂಭೀರ್ ಅನುಪಸ್ಥಿತಿಯಲ್ಲಿ ಸಹಾಯಕ ಕೋಚ್ ಅಭಿಷೇಕ್ ನಾಯರ್, ರಿಯಾನ್ ಟೆನ್ ಡೋಸ್ಚೇಟ್, ಮೋರ್ನೆ ಮೊರ್ಕೆಲ್ (ಬೌಲಿಂಗ್ ಕೋಚ್) ಮತ್ತು ಟಿ ದಿಲೀಪ್ (ಫೀಲ್ಡಿಂಗ್ ಕೋಚ್) ಅವರ ಸಹಾಯಕ ಸಿಬ್ಬಂದಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಎರಡನೇ ಮಗುವಿನ ಜನನದ ಕಾರಣ ಪರ್ತ್ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಭಾನುವಾರ ಆಸ್ಟ್ರೇಲಿಯಾ ತಲುಪಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯ ಅಡಿಲೇಡ್ನಲ್ಲಿ ಡಿಸೆಂಬರ್ 6 ರಿಂದ 10 ರವರೆಗೆ ನಡೆಯಲಿದೆ. ಇದು ಹಗಲು-ರಾತ್ರಿ ಟೆಸ್ಟ್ ಪಂದ್ಯವಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಅಡಿಲೇಡ್ ಟೆಸ್ಟ್ ಪಂದ್ಯ ಭಾರತೀಯ ಕಾಲಮಾನ ಬೆಳಗ್ಗೆ 9:30ಕ್ಕೆ ನಡೆಯಲಿದೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ನಾಯಕ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರ ಬೆಂಕಿ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ತಂಡ ಆಸ್ಟ್ರೇಲಿಯಾವನ್ನು 295 ರನ್ಗಳಿಂದ ಸೋಲಿಸಿತು. ಇದು ಆಸ್ಟ್ರೇಲಿಯಾದಲ್ಲಿ ಭಾರತಕ್ಕೆ ಅತಿದೊಡ್ಡ ಗೆಲುವಾಗಿದೆ. ಅಲ್ಲದೆ, ಭಾರತಕ್ಕೆ ಏಷ್ಯಾದ ಹೊರಗಿನ ಎರಡನೇ ಅತಿದೊಡ್ಡ ಗೆಲುವು ಕೂಡ ಹೌದು. ಭಾರತ ಈ ಹಿಂದೆ 1977ರಲ್ಲಿ ಮೆಲ್ಬೋರ್ನ್ನಲ್ಲಿ ಆಸ್ಟ್ರೇಲಿಯಾವನ್ನು 222 ರನ್ಗಳಿಂದ ಸೋಲಿಸಿತ್ತು. ನಂತರ 2019ರಲ್ಲಿ ನಾರ್ತ್ ಸೌಂಡ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 318 ರನ್ಗಳಿಂದ ಏಷ್ಯಾದ ಹೊರಗೆ ಭಾರತ ಜಯ ಗಳಿಸಿತ್ತು.