
ವಿಕೆಟ್ ಕೀಪರ್ ನಯನ್ ಮೊಂಗಿಯಾ
1996ರಲ್ಲಿ ಮೊದಲ ಬಾರಿಗೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಏಕೈಕ ಟೆಸ್ಟ್ ಪಂದ್ಯ ದೆಹಲಿಯಲ್ಲಿ ನಡೆದಿತ್ತು. ಮಾಜಿ ವಿಕೆಟ್-ಕೀಪರ್ ನಯನ್ ಮೊಂಗಿಯಾ 366 ಎಸೆತಗಳಲ್ಲಿ 152 ರನ್ ಗಳಿಸುವ ಮೂಲಕ ಪಂದ್ಯದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ತಂಡವನ್ನು ಅನಿಲ್ ಕುಂಬ್ಳೆ 4 ವಿಕೆಟ್ ಪಡೆಯುವ ಮೂಲಕ 182 ರನ್ಗಳಿಗೆ ಆಲೌಟ್ ಮಾಡಿದರು. ನಂತರ ಬ್ಯಾಟಿಂಗ್ ಮಾಡಿದ ಭಾರತ 361 ರನ್ ಗಳಿಸಿತು. ಸೌರವ್ ಗಂಗೂಲಿ ಕೂಡ 154 ಎಸೆತಗಳಲ್ಲಿ 66 ರನ್ ಗಳಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ 234 ರನ್ ಗಳಿಸಿ ಆಲೌಟ್ ಆಯಿತು. ಅನಿಲ್ ಕುಂಬ್ಳೆ ಎರಡನೇ ಇನ್ನಿಂಗ್ಸ್ನಲ್ಲಿ 5 ವಿಕೆಟ್ ಗಳಿಸಿದರು. ಭಾರತ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ 7 ವಿಕೆಟ್ ಜಯ ಸಾಧಿಸಿತು.

ಅಡಿಲೇಡ್ನಲ್ಲಿ ಅಗರ್ಕರ್ ಮಿಂಚು
ಟೀಂ ಇಂಡಿಯಾ ಮಾಜಿ ವೇಗಿ 191 ಏಕದಿನ ಪಂದ್ಯಗಳಲ್ಲಿ 288 ವಿಕೆಟ್ ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಆದರೆ, ಟೆಸ್ಟ್ ಪಂದ್ಯಗಳಲ್ಲಿ ಅವರ ಸಾಧನೆ ಉತ್ತಮವಾಗಿರಲಿಲ್ಲ. 26 ಟೆಸ್ಟ್ ಪಂದ್ಯಗಳಲ್ಲಿ 47.32 ರ ಸರಾಸರಿಯಲ್ಲಿ 58 ವಿಕೆಟ್ ಪಡೆದರು.
2003-04 ರ ಪ್ರವಾಸದ ವೇಳೆ ಅಡಿಲೇಡ್ನಲ್ಲಿ ನಡೆದ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಗೆಲುವು ಸಾಧಿಸುವಲ್ಲಿ ಅಗರ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ರಿಕಿ ಪಾಂಟಿಂಗ್ (242) ಮತ್ತು ರಾಹುಲ್ ದ್ರಾವಿಡ್ (233) ದ್ವಿಶತಕ ಬಾರಿಸುವ ಮೂಲಕ ಎರಡೂ ತಂಡಗಳು 500ಕ್ಕಿಂತ ಹೆಚ್ಚಿನ ರನ್ ಗಳಿಸಿದವು.
ಎರಡನೇ ಇನ್ನಿಂಗ್ಸ್ನಲ್ಲಿ ಅಗರ್ಕರ್ ಮಾರಕ ಬೌಲಿಂಗ್ ಮಾಡಿದರು. ಜಸ್ಟಿನ್ ಲ್ಯಾಂಗರ್, ಪಾಂಟಿಂಗ್ ಮತ್ತು ಸೈಮನ್ ಕ್ಯಾಟಿಚ್ ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಶಾಕ್ ಕೊಟ್ಟರು. ಅಗರ್ಕರ್ 41 ರನ್ ನೀಡಿ 6 ವಿಕೆಟ್ ಪಡೆದರು. ಆಸ್ಟ್ರೇಲಿಯಾ 196 ರನ್ಗಳಿಗೆ ಆಲೌಟ್ ಆಯಿತು. 230 ರನ್ಗಳ ಗುರಿಯನ್ನು ಬೆನ್ನಟ್ಟಿದ ಭಾರತ ದ್ರಾವಿಡ್ರ ಅಜೇಯ 72 ರನ್ಗಳ ನೆರವಿನಿಂದ ನಾಲ್ಕು ವಿಕೆಟ್ಗಳ ಜಯ ಸಾಧಿಸಿತು.

12 ವಿಕೆಟ್ ಪಡೆದಿದ್ದ ಸ್ಟೀವ್ ಓ'ಕೀಫ್
ಭಾರತದಲ್ಲಿ ಕೊನೆಯ ಬಾರಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 333 ರನ್ಗಳ ಭರ್ಜರಿ ಜಯ ಸಾಧಿಸಿತ್ತು. ಎಡಗೈ ಸ್ಪಿನ್ನರ್ ಸ್ಟೀವ್ ಓ'ಕೀಫ್ ಆಸ್ಟ್ರೇಲಿಯಾ ಗೆಲುವಿಗೆ ಪ್ರಮುಖ ಕಾರಣವಾಗಿದ್ದರು.
ಅವರು ಒಟ್ಟು 12 ವಿಕೆಟ್ಗಳನ್ನು ಪಡೆದು ಮಿಂಚಿದ್ದರು. ಮೊದಲ ಇನ್ನಿಂಗ್ಸ್ನಲ್ಲಿ 35 ರನ್ ನೀಡಿ 6 ವಿಕೆಟ್ ಪಡೆದ ಅವರು ಎರಡನೇ ಇನ್ನಿಂಗ್ಸ್ನಲ್ಲಿ ಕೂಡ 35 ರನ್ ನೀಡಿ 6 ವಿಕೆಟ್ ಪಡೆದಿದ್ದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ 260 ರನ್ಗಳಿಗೆ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಮಾಡಿದ ಭಾರತ ಮೊದಲನೇ ಇನ್ನಿಂಗ್ಸ್ನಲ್ಲಿ 105 ರನ್ಗಳಿಗೆ ಆಲೌಟ್ ಆಗಿತ್ತು.
ಎರಡನೇ ಇನ್ನಿಂಗ್ಸ್ನಲ್ಲಿ ಸ್ಟೀವ್ ಸ್ಮಿತ್ ಶತಕದ ನೆರವಿನಿಂದ ಆಸ್ಟ್ರೇಲಿಯಾ 411 ರನ್ಗಳ ಗುರಿಯನ್ನು ನೀಡಿತು. ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 107 ರನ್ಗಳಿಗೆ ಆಲೌಟ್ ಆಗುವ ಮೂಲಕ 333 ರನ್ಗಳ ಸೋಲನುಭವಿಸಿತು. ಸ್ಟೀವ್ ಓ'ಕೀಫ್ 6 ವಿಕೆಟ್ ಪಡೆದರೆ, ನಾಥನ್ ಲಿಯಾನ್ ಉಳಿದ ನಾಲ್ಕು ವಿಕೆಟ್ ಪಡೆದಿದ್ದರು.

ಗಬ್ಬಾದ ಗೆಲುವಿನಲ್ಲಿ ಶಾರ್ದೂಲ್ ಪಾತ್ರ
2020-21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಸರಣಿ ಟೆಸ್ಟ್ ಇತಿಹಾಸದಲ್ಲೇ ಶ್ರೇಷ್ಠ ಸರಣಿಗಳಲ್ಲಿ ಒಂದೆನಿಸಿಕೊಂಡಿದೆ. ಮೊದಲ ಟೆಸ್ಟ್ನಲ್ಲಿ 36 ರನ್ಗಳಿಗೆ ಆಲೌಟ್ ಆಗಿ ಕೆಟ್ಟ ದಾಖಲೆ ಬರೆದ ಟೀಂ ಇಂಡಿಯಾ ನಂತರ ಹೋರಾಡಿ ಸರಣಿ ಗೆದ್ದಿದ್ದು ಇತಿಹಾಸ.
ಸರಣಿಯ ಕೊನೆಯ ಪಂದ್ಯ ಗಬ್ಬಾದಲ್ಲಿ ನಡೆಯುವ ಟೆಸ್ಟ್ ವೇಳೆಗೆ ಪ್ರಮುಖ ಬೌಲರ್ ಗಾಯಗೊಂಡಿದ್ದರು. ಮೊಹಮ್ಮದ್ ಸಿರಾಜ್ರಂತಹ ಅನನುಭವಿ ಬೌಲರ್ ಮೇಲೆ ಭಾರತ ಅವಲಂಬಿತವಾಗಿತ್ತು.
ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅಂದಿನ ಪಂದ್ಯದ ಹೀರೋಗಳಲ್ಲಿ ಒಬ್ಬರಾದರು. ಮೊದಲ ಇನ್ನಿಂಗ್ಸ್ನಲ್ಲಿ 94 ರನ್ ನೀಡಿ 3 ವಿಕೆಟ್ ಪಡೆದುಕೊಂಡರು. ಆಸ್ಟ್ರೇಲಿಯಾ 369 ರನ್ಗಳಿಗೆ ಆಲೌಟ್ ಆಗಿತ್ತು. ಭಾರತ ಮೊದಲ ಇನ್ನಿಂಗ್ಸ್ನಲ್ಲಿ 186 ರನ್ ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಠಾಕೂರ್ 115 ಎಸೆತಗಳಲ್ಲಿ 67 ರನ್ ಗಳಿಸಿದರು. ವಾಷಿಂಗ್ಟನ್ ಸುಂದರ್ (62) ಒತೆಗೂಡಿ 123 ರನ್ ಕಲೆಹಾಕುವ ಮೂಲಕ ಭಾರತ 336 ರನ್ಗಳಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ 61 ರನ್ ನೀಡಿ ಪ್ರಮುಖ ನಾಲ್ಕು ವಿಕೆಟ್ ಪಡೆದು ಮಿಂಚಿದರು. ಮೊಹಮ್ಮದ್ ಸಿರಾಜ್ 5 ವಿಕೆಟ್ ಪಡೆದರು. ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ ಭಾರತಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.


Click it and Unblock the Notifications
