
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ಭಾರತ ತಂಡ ಮೂರನೇ ಟೆಸ್ಟ್ನಲ್ಲಿ ಮುಗ್ಗರಿಸಿತು. ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ನಲ್ಲಿ ಭಾರತ 9 ವಿಕೆಟ್ಗಳಿಂದ ಸೋಲನುಭವಿಸಿದೆ.
ಈ ಸೋಲಿನಿಂದ ಭಾರತ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಲುಪಲು ಇನ್ನೊಂದು ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಇಲ್ಲದಿದ್ದ ಶ್ರೀಲಂಕಾ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಸೋಲಿಗೆ ಕಾಯಬೇಕಾಗುತ್ತದೆ.
ಇಂದೋರ್ ಟೆಸ್ಟ್ನಲ್ಲಿ ಭಾರತ ತಂಡದ ಸೋಲಿಗೆ ಮಾಜಿ ಕ್ರಿಕೆಟಿಗ ಮತ್ತು ಮಾಜಿ ಕೋಚ್ ಕಾರಣವನ್ನು ನೀಡಿದ್ದಾರೆ. ಅತಿಯಾದ ಆತ್ಮವಿಶ್ವಾಸವೇ ಭಾರತ ತಂಡಕ್ಕೆ ಮುಳುವಾಗಿದೆ ಎಂದು ಅವರು ಹೇಳಿದ್ದಾರೆ. ಮೊದಲ ಎರಡು ಪಂದ್ಯಗಳಲ್ಲಿ ಯಾವ ರೀತಿ ಗೆದ್ದಿತ್ತೋ ಅದೇ ರೀತಿ ಮೂರನೇ ಪಂದ್ಯದಲ್ಲಿ ಸೋತಿದೆ ಎಂದು ಹೇಳಿದ್ದಾರೆ.
ನಾಗ್ಪುರ ಮತ್ತು ದೆಹಲಿ ಟೆಸ್ಟ್ ಪಂದ್ಯವನ್ನು ಗೆದ್ದ ನಂತರ ಭಾರತ ತಂಡ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಇಂದೋರ್ನ ಡಸ್ಟ್ಬೌಲ್ ಪಿಚ್ನಲ್ಲಿ ಅವರು ನಿಜವಾದ ಪರೀಕ್ಷೆಯನ್ನು ಎದುರಿಸಿದರು. ಕಠಿಣ ಪಿಚ್ನಲ್ಲಿ ಭಾರತದ ಬ್ಯಾಟರ್ ಗಳ ಬಂಡವಾಳ ಬಯಲಾಯಿತು ಎಂದು ಅವರು ಹೇಳಿದ್ದಾರೆ.
ಭಾರತ ತಂಡದ ಎರಡೂ ಇನ್ನಿಂಗ್ಸ್ನಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ದಾಖಲಾಯಿತು. ಎರಡನೇ ಇನ್ನಿಂಗ್ಸ್ನಲ್ಲಿ ಪೂಜಾರ ಅರ್ಧಶತಕ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟರ್ ಗಳು ರನ್ ಗಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾದರು.

ಅತಿಯಾದ ಆತ್ಮವಿಶ್ವಾಸವೇ ಸೋಲಿಗೆ ಕಾರಣ
"ಅತಿಯಾದ ಆತ್ಮವಿಶ್ವಾಸ ಮತ್ತು ಆತ್ಮತೃಪ್ತಿ ಏನು ಮಾಡಬಹುದು ಎನ್ನುವುದಕ್ಕೆ ಈ ಸೋಲು ನಿದರ್ಶನ. ಮೊದಲ ಇನ್ನಿಂಗ್ಸ್ನಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಬ್ಯಾಟಿಂಗ್ ಮಾಡಲು ಹೋಗಿ ವಿಫಲವಾದರು. ಅಶ್ವಿನ್ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಲಿಲ್ಲ" ಎಂದು ರವಿಶಾಸ್ತ್ರಿ ಹೇಳಿದ್ದಾರೆ.
ಭಾರತ ಮೊದಲ ಎರಡು ಪಂದ್ಯಗಳಲ್ಲಿ ಜಯ ಸಾಧಿಸಿದ ನಂತರ 4-0 ಅಂತರದಲ್ಲಿ ಸರಣಿಯನ್ನು ವೈಟ್ವಾಶ್ ಮಾಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಸ್ಪಿನ್ ಪರೀಕ್ಷೆಯಲ್ಲಿ ಭಾರತದ ಬ್ಯಾಟರ್ ಗಳು ವಿಫಲವಾದ ಕಾರಣ ಇಂದೋರ್ ಟೆಸ್ಟ್ನಲ್ಲಿ ಭಾರತದ ಲೆಕ್ಕಾಚಾರ ತಲೆಕೆಳಗಾಗಿದೆ.

ಅಶ್ವಿನ್ ಬೌಲಿಂಗ್ ಬಗ್ಗೆ ಟೀಕೆ
ಆಸ್ಟ್ರೇಲಿಯಾದ ಸ್ಪಿನ್ನರ್ ಗಳಾದ ನಾಥನ್ ಲಿಯಾನ್, ಟಾಡ್ ಮರ್ಫಿ, ಮ್ಯಾಥ್ಯೂ ಕುಹ್ನೆಮನ್ ಭಾರತ ತಂಡಕ್ಕೆ ಮಾರಕವಾದರು. ಭಾರತದ ಬ್ಯಾಟರ್ ಗಳಿಗೆ ರನ್ ಗಳಿಸಲು ಮತ್ತು ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲಲು ಅವರು ಅವಕಾಶವನ್ನೇ ನೀಡಲಿಲ್ಲ.
ಅಶ್ವಿನ್ ಬೌಲಿಂಗ್ ಬಗ್ಗೆ ಕೂಡ ರವಿಶಾಸ್ತ್ರಿ ಕೋಪಗೊಂಡಿದ್ದಾರೆ, ಎರಡನೇ ಇನ್ನಿಂಗ್ಸ್ನಲ್ಲಿ ಅಶ್ವಿನ್ ಇನ್ನೂ ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ. ಭಾರತ ಸರಣಿಯಲ್ಲಿ 2-1ರಲ್ಲಿ ಮುನ್ನಡೆ ಸಾಧಿಸಿದ್ದು, ಅಹಮದಾಬಾದ್ನಲ್ಲಿ ನಡೆಯುವ ಸರಣಿಯ ಕೊನೆಯ ಟೆಸ್ಟ್ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.