ಮೆಲ್ಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಭಾರತ ತಂಡದಿಂದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ ಅವರನ್ನು ಕೈಬಿಡಲಾಗಿತ್ತು. ಶುಭ್ಮನ್ ಗಿಲ್ ಬದಲಿಗೆ, ಸ್ಪಿನ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿದ್ದರು. ಇದೀಗ ಈ ಬಗ್ಗೆ ಟೀಮ್ ಇಂಡಿಯಾದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಮುಕ್ತವಾಗಿ ಮಾತನಾಡಿದ್ದಾರೆ. ಶುಭ್ಮನ್ ಗಿಲ್ ಆಡುವ ಹನ್ನೊಂದರಿಂದ ಹೊರಗಿಡಲು ಕಾರಣವನ್ನು ನಾಯರ್ ಬಹಿರಂಗಪಡಿಸಿದ್ದಾರೆ.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಮೊದಲ ದಿನದ ಸ್ಟಂಪ್ ನಂತರ ಪತ್ರಿಕಾಗೋಷ್ಠಿಯಲ್ಲಿ ಅಭಿಷೇಕ್ ನಾಯರ್ ಮಾತನಾಡಿದ್ದಾರೆ. ಈ ವೇಳೆ ಆಡುವ ಹನ್ನೊಂದರ ಬಳಗದಿಂದ ಶುಭ್ಮನ್ ಗಿಲ್ ಅವರನ್ನು ಹೊರಗಿಡಲು ಕಾರಣ ತಿಳಿಸಿದ್ದಾರೆ.

ಶುಭಮನ್ ಗಿಲ್ ಅವರನ್ನು ಹೊರಗಿಡುವುದು ತಂಡದ ಕಾರ್ಯತಂತ್ರದ ಭಾಗವೇ ಹೊರತು ಅವರ ಫಾರ್ಮ್ ಅಥವಾ ಪ್ರದರ್ಶನದಿಂದಲ್ಲ. ಮೆಲ್ಬೋರ್ನ್ ಪಿಚ್ನಲ್ಲಿ ಭಾರತ ತಂಡಕ್ಕೆ ಉತ್ತಮ ಸಮತೋಲನ ನೀಡುತ್ತದೆ ಎಂದು ತಂಡದ ಆಡಳಿತವು ವಾಷಿಂಗ್ಟನ್ ಸುಂದರ್ ರೂಪದಲ್ಲಿ ಹೆಚ್ಚುವರಿ ಸ್ಪಿನ್ ಆಯ್ಕೆಯನ್ನು ಆರಿಸಿದೆ. ಹೀಗಾಗಿ ಶುಭ್ಮನ್ ಗಿಲ್ ಅವರನ್ನು ಆಡುವ ಹನ್ನೊಂದರ ಬಳಗದಿಂದ ಕೈ ಬಿಡಲಾಯಿತು ಎಂದು ಟೀಮ್ ಇಂಡಿಯಾ ಬ್ಯಾಟಿಂಗ್ ಕೋಚ್ ಅಭಿಷೇಕ್ ನಾಯರ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಹಲವು ನಿರ್ಧಾರಗಳನ್ನು ತೆಗೆದುಕೊಂಡಾಗ ಮತ್ತು ಅವುಗಳನ್ನು ಕಾರ್ಯ ರೂಪಕ್ಕೆ ತರುವಾಗ ಸಂವಹನ ಯಾವಾಗಲೂ ನಡೆಯುತ್ತದೆ. ಮೆಲ್ಬೋರ್ನ್ ಪಿಚ್ ನೋಡುವಾಗ ವಾಷಿಂಗ್ಟನ್ ಸುಂದರ್ ನಮಗೆ ಬೌಲಿಂಗ್ ದಾಳಿ ನಡೆಸಲು ಪ್ರಮುಖ ಎಂದು ತಿಳಿಯಿತು. ವಿಶೇಷವಾಗಿ ಚೆಂಡು ಹಳೆಯದಾಗುವಾಗ ಕೊನೆಯಲ್ಲಿ ಅಂದರೆ 50 ಓವರ್ಗಳ ನಂತರ ಇದು ನಾವು ಸುಧಾರಿಸಬೇಕಾದ ಕ್ಷೇತ್ರವೆಂದು ನಾವು ಭಾವಿಸಿದ್ದೇವೆ. ಸುಂದರ್ ನಮಗೆ ರವೀಂದ್ರ ಜಡೇಜಾ ಜೊತೆ ಒಗ್ಗಟ್ಟ ಪ್ರದರ್ಶನ ನೀಡಬಲ್ಲರು ಎಂದು ನಾವು ಭಾವಿಸಿದ್ದೇವೆ ಎಂದು ವಾಷಿಂಗ್ಟನ್ ಸುಂದರ್ ಆಯ್ಕೆ ಬಗ್ಗೆ ನಾಯರ್ ಹೇಳಿದ್ದಾರೆ.
ಶುಭ್ಮನ್ ಗಿಲ್ ಸತತವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ತವರಿನಲ್ಲಿ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಗಳಲ್ಲಿ ಗಿಲ್ ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಿಲ್ ಮಂಕಾಗಿದ್ದಾರೆ. ರನ್ ಗಳಿಸುವಲ್ಲಿ ಗಿಲ್ ಹಿಂದೆ ಉಳಿದಿದ್ದಾರೆ.