ಭಾರತ ಹಾಗೂ ಬಾಂಗ್ಲಾದೇಶ ನಡುವಣ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಗಂಣದಲ್ಲಿ ನಡೆದಿದೆ. ಮೊದಲ ಟೆಸ್ಟ್ನ ಮೊದಲ ದಿನ ಟೀಮ್ ಇಂಡಿಯಾ ಆಲ್ರೌಂಡರ್ಗಳು ಎಲ್ಲರ ಚಿತ್ತ ಕದ್ದಿದ್ದಾರೆ. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ರವೀಂದ್ರ ಜಡೇಜಾ ಹಾಗೂ ತವರಿನ ಹುಡುಗ ರವಿಚಂದ್ರನ್ ಅಶ್ವಿನ್ ಅವರ ಜವಾಬ್ದಾರಿಯುತ ಆಟದ ನೆವಿನಿಂದ ಉತ್ತಮ ಮೊತ್ತದತ್ತ ದಾಪುಗಾಲು ಇಟ್ಟಿದೆ.
ಚೆನ್ನೈನ ಚೆಪಾಕ ಪಿಚ್ ಕೆಂಪು ಮಣ್ಣಿನಿಂದ ಕೂಡಿದ್ದು, ಈ ಪಿಚ್ ವೇಗದ ಬೌಲರ್ಗಳಿಗೆ ಕೊಂಚ ನೆರವು ನೀಡುತ್ತದೆ ಎಂದು ಅರಿತ ಬಾಂಗ್ಲಾ ನಾಯಕ ಫೀಲ್ಡಿಂಗ್ ಮಾಡಲು ಮುಂದಾದರು. ಇವರ ನಿರ್ಧಾರವನ್ನು ಬಾಂಗ್ಲಾ ತಂಡದ ವೇಗದ ಬೌಲರ್ಗಳು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಮೊದಾಲಾವಧಿಯ ಆಟದಲ್ಲೇ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಭಮನ್ ಗಿಲ್ ಪೆವಿಲಿಯನ್ ಸೇರಿ ಆಗಿತ್ತು.

ಆತಿಥೇಯ ತಂಡದಲ್ಲಿ ಚಿಂತೆಯ ಗೆರೆಗಳು ಕಾಣಿಸಿಕೊಂಡರೆ, ಪ್ರವಾಸಿ ತಂಡದ ಮುಖದಲ್ಲಿ ನಗು ಕಾಣಿಸಿಕೊಂಡಿತ್ತು. ಆದರೆ ನಾಲ್ಕನೇ ವಿಕೆಟ್ಗೆ ಟೀಮ್ ಇಂಡಿಯಾ ಎಡಗೈ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ರಿಷಭ್ ಪಂಥ್ ಎಚ್ಚರಿಕೆ ಆಟವನ್ನು ಆಡಿದರು. ಪರಿಣಾಮ ತಂಡ ಅಪಾಯದಿಂದ ಪಾರಾಯಿತು. ಈ ಜೋಡಿ ತಂಡದ ಮೊತ್ತವನ್ನು ಶತಕದ ಸನಿಹದಲ್ಲಿ ತಂದು ನಿಲ್ಲಿಸಿದ್ದಾಗ, ರಿಷಭ್ ಔಟ್ ಆದರು.
ಐದನೇ ವಿಕೆಟ್ಗೆ ಯಶಶ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಸಹ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಕನ್ನಡಿಗ ಕೆಎಲ್ ರಾಹುಲ್ ಬಿಗ್ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದ್ದರು. ಆದರೆ 16 ರನ್ ಬಾರಿಸಿದ್ದಾಗ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ಟೀಮ್ ಇಂಡಿಯಾ 144 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ, ಆಲ್ರೌಂಡರ್ಗಳಾದ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರು ಇನಿಂಗ್ಸ್ ಕಟ್ಟುವ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡರು. ಸಾಮಾನ್ಯವಾಗಿ ಈ ಜೋಡಿ ಬೌಲಿಂಗ್ ಮಾಡುವ ವೇಳೆ ಉತ್ತಮ ಹೊಂದಾಣಿಕೆಯನ್ನು ಹಲವು ಬಾರಿ ತೋರಿಸಿದೆ. ಈಗ ಟೀಮ್ ಇಂಡಿಯಾದ ಆಲ್ರೌಂಡರ್ಗಳು ತಮ್ಮ ಬ್ಯಾಟಿಂಗ್ ಕಲೆಯಿಂದ ತಂಡಕ್ಕೆ ಆಧಾರವಾದರು.

ಸುಮಾರು 38 ಓವರ್ಗಳ ವರೆಗೆ ವಿಕೆಟ್ ಬೀಳದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿದ ಅಶ್ವಿನ್ ಹಾಗೂ ಜಡೇಜಾ ತಂಡಕ್ಕೆ ಆಧಾರವಾದರು. ಕೆಟ್ಟ ಎಸೆತಗಳನ್ನು ದಂಡಿಸುತ್ತಾ ಸಾಗಿದ ಜೋಡಿ ಡ್ರೆಸ್ಸಿಂಗ್ ರೂಮ್ನಲ್ಲಿ ಕುಳಿತಿದ್ದ ರೋಹಿತ್ ಶರ್ಮಾ, ಕೋಚ್ ಗೌತಮ್ ಗಂಭಿರ್ ಅವರ ಚಿಂತೆಯನ್ನು ದೂರ ಮಾಡಿದರು. ಅಶ್ವಿನ್ ಅಜೇಯ 102 ರನ್ ಬಾರಿಸಿದರೆ, ಜಡೇಜಾ ಅಜೇಯ 86 ರನ್ ಸಿಡಿಸಿದರು. ಭಾರತ ದಿನದಾಟದಂತ್ಯಕ್ಕೆ 6 ವಿಕೆಟ್ಗೆ 339 ರನ್ ಗಳಿಸಿದೆ.
ಎರಡನೇ ದಿನದಾಟದ ಮೊದಲಾವಧಿಯಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು ಎಚ್ಚರಿಕೆಯ ಬ್ಯಾಟಿಂಗ್ ಮಾಡಿ, ತಂಡದ ಮೊತ್ತವನ್ನು ಹಿಗ್ಗಿಸುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲುವಿನ ಆಸೆ ಫಲಿಸುತ್ತದೆ.