ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆಲುವಿನ ನಂತರ ಬಾಂಗ್ಲಾದೇಶ ತಂಡವು ಭಾರೀ ನಿರೀಕ್ಷೆಗಳೊಂದಿಗೆ ಭಾರತ ಪ್ರವಾಸ ಕೈಗೊಂಡಿತ್ತು. ಆದರೆ ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಎದುರು ಬಾಂಗ್ಲಾದೇಶ ಪ್ರಾಬಲ್ಯ ಕಳೆದುಕೊಂಡಿದೆ.
ಟೀಮ್ ಇಂಡಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಶೈನ್ ಆಗಿದ್ದು, ಟಾಪ್ ಆರ್ಡರ್ ಬ್ಯಾಟರ್ಗಳು ರನ್ ಗಳಿಸಲು ಪರದಾಡುತ್ತಿರುವುದು ತಲೆ ನೋವಾಗಿದೆ. ಟೀಮ್ ಇಂಡಿಯಾ ಬೌಲರ್ಗಳು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ರವೀಂದ್ರ ಜಡೇಜಾ ತಮ್ಮ ಅದ್ಭುತ ಆಲ್ರೌಂಡರ್ ಆಟವನ್ನು ಪ್ರದರ್ಶಿಸುತ್ತಿದ್ದಾರೆ. ಜೊತೆಗೆ ಅವರು ಚೆಪಾಕ್ ಸ್ಟೇಡಿಯಂನಲ್ಲಿ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಹೊಂದಿದ್ದಾರೆ.

ಬಾಂಗ್ಲಾದೇಶದ ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ ಎರಡು ವಿಕೆಟ್ಗಳನ್ನು ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಇದುವರಗೆ ಅವರು 296 ವಿಕೆಟ್ ಪಡೆದಿದ್ದು, ಇದೀಗ 300 ಗಡಿ ದಾಟುವ ಮೂಲಕ ಇತಿಹಾಸ ಸೃಷ್ಟಿಸಲಿದ್ದಾರೆ. ಮೊದಲ ಇನ್ನಿಂಗ್ಸ್ ಸಂದರ್ಭದಲ್ಲಿ ಶಕೀಬ್ ಅಲ್ ಹಸನ್ ಮತ್ತು ಲಿಟನ್ ದಾಸ್ ಅವರ ಪ್ರಮುಖ ವಿಕೆಟ್ ಉರುಳಿಸಿ ಭಾರತಕ್ಕೆ ಮುನ್ನೆಡೆ ತಂದು ಕೊಟ್ಟರು.
ಇದಲ್ಲದೆ, ಜಡೇಜಾ ಬ್ಯಾಟಿಂಗ್ನಲ್ಲಿಯೂ ಮಿಂಚಿದ್ದಾರೆ. 86 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿ ಸೈ ಎನಿಸಿಕೊಂಡಿದ್ದಾರೆ. ಈ ವೇಳೆ ರವಿಚಂದ್ರನ್ ಅಶ್ವಿನ್ (113) ಅವರೊಂದಿಗೆ ಜಡೇಜಾ 7ನೇ ವಿಕೆಟ್ಗೆ 199 ರನ್ ಸೇರಿಸಿದ್ದಾರೆ. ರವೀಂದ್ರ ಜಡೇಜಾ ತಮ್ಮ ಶತಕ ಬಾರಿಸುವ ಕಡೆ ಸಾಗುವಾಗ ತಸ್ಕಿನ್ ಅಹ್ಮದ್ ಎಸೆತದಲ್ಲಿ ಔಟಾದರು.
'ನಾನು ಔಟ್ ಆದರೆ ಇದು ಆಟದ ಒಂದು ಭಾಗವಾಗಿದೆ. ಈಗ ನಾವು ಎರಡನೇ ಇನ್ನಿಂಗ್ಸ್ನಲ್ಲಿ ದೊಡ್ಡ ಸ್ಕೋರ್ ಗಳಿಸಬೇಕಾಗಿದೆ. ನನ್ನ ಬೌಲಿಂಗ್ ಬಗ್ಗೆ ನನಗೆ ತುಂಬಾ ಖುಷಿಯಾಗಿದೆ. ಈ ಮೈದಾನದಲ್ಲಿ 300ನೇ ವಿಕೆಟ್ ಪಡೆಯಲು ಇದೊಂದು ಉತ್ತಮ ಅವಕಾಶ ಎಂದು ದಾಖಲೆ ಬರೆಯುವ ಕುರಿತು ರವೀಂದ್ರ ಜಡೇಜಾ ಹೇಳಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯೊಂದಿಗೆ ಸುದೀರ್ಘ ಕಾಲದಿಂದ ಇರುವ ರವೀಂದ್ರ ಜಡೇಜಾಗೆ ಚೆಪಾಕ್ ಸ್ಟೇಡಿಯಂ ಬಗ್ಗೆ ಚೆನ್ನಾಗಿ ತಿಳಿದಿದೆ. ಈ ಬಗ್ಗೆಯೂ ಮಾತನಾಡಿರುವು ಅವರು, 'ಇಲ್ಲಿನ ಪಿಚ್ ಇನ್ನೂ ಬ್ಯಾಟಿಂಗ್ಗೆ ಉತ್ತಮವಾಗಿದೆ. ಆದರೆ ಇದು ವೇಗದ ಬೌಲರ್ಗಳಿಗೆ ಸಹಾಯ ಮಾಡುತ್ತದೆ. ಕೆಲವು ಬಾಲ್ಗಳು ಸ್ವಿಂಗ್ ಆಗುತ್ತಿವೆ. ವೇಗದ ಬೌಲರ್ಗಳು ಸೀಮ್ ಅನ್ನು ಚೆನ್ನಾಗಿ ಬಳಸಿದರೆ ಅದು ಬ್ಯಾಟರ್ಗಳಿಗೆ ರನ್ ಗಳಿಸಲು ಕಷ್ಟವಾಗಬಹುದು ಎಂದು ತಿಳಿಸಿದ್ದಾರೆ.
ಒಂದು ಸಮಯದಲ್ಲಿ ಭಾರತ ತಂಡ 144 ರನ್ಗಳಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಟಾಪ್ ಆರ್ಡರ್ ಬ್ಯಾಟರ್ಗಳು ವಿಕೆಟ್ ಕಳೆದುಕೊಂಡಿದ್ದರು. ಈ ವೇಳೆ ಜಡೇಜಾ ಮತ್ತು ಅಶ್ವಿನ್ 199 ರನ್ಗಳ ಜೊತೆಯಾಟ ಬಾಂಗ್ಲಾದೇಶ ಪಂದ್ಯದ ಮೇಲೆ ಪ್ರಾಬಲ್ಯ ಕಳೆದುಕೊಳ್ಳುವಂತೆ ಮಾಡಿತ್ತು. ಈ ವೇಳೆ ತಮ್ಮ ಜೊತೆಗಾರ ಅಶ್ವಿನ್ ಬಗ್ಗೆ ಜಡೇಜಾ ಅವರನ್ನು ಕೇಳಿದಾಗ 'ಮೊದಲ ವಿಷಯವೆಂದರೆ ಅಶ್ವಿನ್ ಅವರಿಗೆ ಯಾವುದೇ ಸಲಹೆಯ ಅಗತ್ಯವಿಲ್ಲ. ನಾವು ತಪ್ಪು ಹೊಡೆತಗಳನ್ನು ಆಡುವುದನ್ನು ತಪ್ಪಿಸುತ್ತೇವೆ ಎಂದು ಅವರಿಗೆ ಹೇಳುತ್ತಿದ್ದೆ. ಆ ಸಮಯದಲ್ಲಿ ವಿಕೆಟ್ ತುಂಬಾ ಚೆನ್ನಾಗಿತ್ತು. ಹೀಗಾಗಿ ನಾವಿಬ್ಬರೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆವು ಎಂದಿದ್ದಾರೆ.