
ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಚೇತೇಶ್ವರ ಪೂಜಾರ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡರು. 4 ಇನ್ನಿಂಗ್ಸ್ಗಳಿಂದ ಅವರು 74 ರ ಸರಾಸರಿಯಲ್ಲಿ 222 ರನ್ ಗಳಿಸಿದರು.
ಅವರು ಸರಣಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 90 ರನ್ ಗಳಿಸಿ ಶತಕದಿಂದ ವಂಚಿತರಾಗಿದ್ದರು. ನಂತರ ಎರಡನೇ ಇನ್ನಿಂಗ್ಸ್ನಲ್ಲಿ ಅಜೇಯ 102 ರನ್ ಗಳಿಸುವ ಮೂಲಕ ಶತಕ ಬಾರಿಸಿದರು. ಸರಣಿಯ ಆಟಗಾರ ಪ್ರಶಸ್ತಿ ಪಡೆದುಕೊಂಡ ನಂತರ ಅವರು ಪ್ರತಿಕ್ರಿಯೆ ನೀಡಿದ್ದು, ತಮ್ಮ ಯಶಸ್ಸಿಗೆ ಪ್ರಥಮ ದರ್ಜೆ ಕ್ರಿಕೆಟ್ ಕಾರಣ ಎಂದು ಹೇಳಿದ್ದಾರೆ.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಸಾಕಷ್ಟು ಸಮಯ ಕಳೆಯುತ್ತಿದ್ದೆ, ನನ್ನ ಪ್ರದರ್ಶನವನ್ನು ಉತ್ತಮಪಡಿಸಿಕೊಳ್ಳುವಲ್ಲಿ ಇದು ಸಹಕಾರಿಯಾಯಿತು. ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಶತಕಗಳನ್ನು ಗಳಿಸುವಾಗ ಅವರು ತಮ್ಮ ಆಟವನ್ನು ಉತ್ತಮಪಡಿಸಿಕೊಳ್ಳಲು ತೀವ್ರವಾಗಿ ಕೆಲಸ ಮಾಡುತ್ತಿದ್ದೆ ಎಂದು ಪೂಜಾರ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ವಿರಾಮದ ಪ್ರಾಮುಖ್ಯತೆಯನ್ನು ತಿಳಿಸಿದರು. ಟೆಸ್ಟ್ ಪಂದ್ಯಗಳ ನಡುವೆ ಹೆಚ್ಚಿನ ಅಂತರ ನೀಡುವುದರಿಂದ, ಆಟಗಾರರಿಗೆ ತಯಾರಿಗೆ ಸಮಯವನ್ನು ನೀಡುತ್ತದೆ ಎಂದು ಹೇಳಿದರು. ಆಟದ ಮೊದಲು ದೈಹಿಕವಾಗಿ ಮಾತ್ರವೇ ಅಲ್ಲ ಮಾನಸಿಕವಾಗಿ ಕೂಡ ಸಿದ್ಧವಾಗಬೇಕು ಎಂದು ಹೇಳಿದರು.

ಮಾನಸಿಕವಾಗಿ ಸಿದ್ಧತೆ ಬೇಕು
"ಕೆಲವೊಮ್ಮೆ, ಟೆಸ್ಟ್ ಪಂದ್ಯಗಳ ನಡುವೆ ಸಾಕಷ್ಟು ಅಂತರವಿರುತ್ತದೆ, ಇದು ನಿಮಗೆ ತಯಾರಾಗಲು ಸಹಾಯ ಮಾಡುತ್ತದೆ. ಆಟವನ್ನು ಸುಧಾರಿಸಲು ಪ್ರಥಮ ದರ್ಜೆ ಕ್ರಿಕೆಟ್ ಆಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ. ಮಾನಸಿಕವಾಗಿ ಸಿದ್ಧರಾಗಿರಬೇಕು ಮತ್ತು ಮಾನಸಿಕವಾಗಿ ಸದೃಢರಾಗಿದ್ದರೆ ಮತ್ತು ಉತ್ತಮವಾಗಿ ತಯಾರಿ ನಡೆಸಿದರೆ, ಉತ್ತಮ ಪ್ರದರ್ಶನ ನೀಡಲು ಸಹಾಯಕವಾಗುತ್ತದೆ" ಎಂದು ಅವರು ಹೇಳಿದರು.
ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಚೇತೇಶ್ವರ ಪೂಜಾರ ಮತ್ತೆ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದರು. ಕೌಂಟಿ ಕ್ರಿಕೆಟ್ನಲ್ಲಿ, ರಾಯಲ್ ಲಂಡನ್ ಏಕದಿನ ಕಪ್ ಟೂರ್ನಿಯಲ್ಲಿ ಕೂಡ ಪೂಜಾರ ಬ್ಯಾಟಿಂಗ್ ಸಾಮರ್ಥ್ಯ ಸಾಬೀತುಪಡಿಸಿದ್ದರು.
ಸ್ಮರಣೀಯ ಗೆಲುವು ಸಾಧಿಸಿದ ಭಾರತ
145 ರನ್ಗಳ ಗುರಿಯನ್ನು ಬೆನ್ನತ್ತಿದ ಭಾರತ ತಂಡ 74 ರನ್ ಆಗುವಷ್ಟರಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಶ್ರೇಯಸ್ ಅಯ್ಯರ್ ಮತ್ತು ರವಿಚಂದ್ರನ್ ಅಶ್ವಿನ್ ಜೋಡಿ, ಅಜೇಯ 71 ರನ್ ಕಲೆಹಾಕುವ ಮೂಲಕ ಭಾರತಕ್ಕೆ 3 ವಿಕೆಟ್ಗಳ ಜಯ ತಂದುಕೊಟ್ಟರು. ರವಿಚಂದ್ರನ್ ಅಶ್ವಿನ್ ಅಜೇಯ 42 ಮತ್ತು ಶ್ರೇಯಸ್ ಅಯ್ಯರ್ ಅಜೇಯ 29 ರನ್ ಗಳಿಸಿದರು. ಭಾರತ 2-0 ಅಂತರದಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.
ಮೆಹಿದಿ ಹಸನ್ ಮಿರಾಜ್ ಅದ್ಭುತವಾಗಿ ಬೌಲಿಂಗ್ ಮಾಡಿ ಐದು ವಿಕೆಟ್ ಕಬಳಿಸಿದರು ಆದರೂ ಆತಿಥೇಯರಿಗೆ ಟೆಸ್ಟ್ ಗೆಲ್ಲಲು ಸಾಧ್ಯವಾಗಲಿಲ್ಲ. ಟೆಸ್ಟ್ ಸರಣಿ ಜಯವು ಭಾರತ ತಂಡಕ್ಕೆ ಏಷ್ಯಾದಲ್ಲಿ ಸತತ 16 ನೇ ಜಯವಾಗಿದೆ.