ದೀಪಕ್ ಚಹರ್ಗೆ ಮತ್ತೆ ಕಾಡಿದ ಗಾಯ
ಟೀಮ್ ಇಂಡಿಯಾದ ಆಲ್ರೌಂಡರ್ ದೀಪಕ್ ಚಹರ್ ಕಳೆದ ವಿಶ್ವಕಪ್ಗೂ ಮುನ್ನ ಗಾಯಕ್ಕೊಳಗಾಗಿ ತಂಡದಿಂದ ಹೊರಬಿದ್ದಿದ್ದರು. ಅದಕ್ಕೂ ಮುನ್ನವೂ ಅವರು ಸುದೀರ್ಘ ಕಾಲ ವಿಶ್ರಾಂತಿಯಲ್ಲಿದ್ದರು. ಇದೀಗ ಮತ್ತೆ ಗಾಯಕ್ಕೆ ಒಳಕ್ಕೊಳಗಾಗಿರುವ ದೀಪಕ್ ಚಹರ್ ಬಾಂಗ್ಲಾದೇಶ ವಿರುದ್ಧದ ಅಂತಿಮ ಪಂದ್ಯದಿಂದ ಹೊರಗುಳಿಯುವುದನ್ನು ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಖಚಿತಪಡಿಸಿದ್ದಾರೆ. ಇನ್ನು ಮತ್ತೋರ್ವ ಆಟಗಾರ ಕುಲ್ದೀಪ್ ಸೇನ್ ಕೂಡ ಬೆನ್ನು ನೋವಿಗೆ ಒಳಗಾಗಿದ್ದು ಎರಡನೇ ಪಂದ್ಯದಲ್ಲಿಯೂ ಆಡಿರಲಿಲ್ಲ. ಅಂತಿಮ ಪಂದ್ಯಕ್ಕೆ ಸೇನ್ ಕೂಡ ಹೊರಗುಳಿಯಲಿದ್ದಾರೆ.
9ನೇ ಕ್ರಮಾಂಕದಲ್ಲಿ ಆಡಿದ್ದ ರೋಹಿತ್
ಫೀಲ್ಡಿಂಗ್ ವೇಳೆ ಬೆರಳಿನ ಗಾಯಕ್ಕೊಳಗಾಗಿದ್ದ ರೋಹಿತ್ ಶರ್ಮಾ ಬಳಿಕ ಮೈದಾನ ತೊರೆದಿದ್ದರು. ಇನ್ನು ಭಾರತ ಬ್ಯಾಟಿಂಗ್ನಲ್ಲಿ ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ಅಂಚಿಗೆ ತಲುಪಿದ್ದ ಸಂದರ್ಭದಲ್ಲಿ 9ನೇ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಬ್ಯಾಟಿಂಗ್ಗೆ ಇಳಿದಿದ್ದರು. ನೋವಿನ ಮಧ್ಯೆಯೂ ರೋಹಿತ್ ಶರ್ಮಾ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡವನ್ನು ಗೆಲುವಿನ ಸನಿಹಕ್ಕೆ ತಲುಪಿಸಿದ್ದರು. ಆದರೆ ಗೆಲುವಿನ ಗೆರೆ ದಾಟಲು ಭಾರತ ತಂಡಕ್ಕೆ ಸಾಧ್ಯವಾಗಲಿಲ್ಲ. 28 ಎಸೆತಗಳನ್ನು ಎದುರಿಸಿದ ರೋಹಿತ್ ಶರ್ಮಾ 51 ರನ್ಗಳನ್ನು ಸಿಡಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ ಐದು ಸಿಕ್ಸರ್ ಸೇರಿತ್ತು.
ಟೆಸ್ಟ್ ಸರಣಿಗೂ ರೋಹಿತ್ ಅನುಮಾನ
ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಪಂದ್ಯದ ಬಳಿಕ ಮಾತನಾಡುತ್ತಾ ರೋಹಿತ್ ಶರ್ಮಾ ಗಾಯದ ಕಾರಣದಿಂದಾಗಿ ಎರಡನೇ ಪಂದ್ಯದ ಬಳಿಕ ಭಾರತಕ್ಕೆ ವಾಪಾಸಾಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಟೆಸ್ಟ್ ಸರಣಿಗೂ ರೋಹಿತ್ ಲಭ್ಯವಾಗುವುದು ಅನುಮಾನವಾಗಿದೆ. ಆದರೆ ಈ ಬಗ್ಗೆ ದ್ರಾವಿಡ್ ಸ್ಪಷ್ಟಪಡಿಸಿಲ್ಲ. ಮತ್ತೊಂದು ಸಮಾಧಾನಕರ ಸಂಗತಿಯೆಂದರೆ ರೋಹಿತ್ ಶರ್ಮಾ ಅವರ ಬೆರಳಿನ ಮೂಳೆ ಮುರಿತಕ್ಕೊಳಗಾಗಿಲ್ಲ, ಆದರೆ ಮೂಳೆ ಸಣ್ಣ ಪ್ರಮಾಣದಲ್ಲಿ ಸ್ಥಳಾಂತರವಾಗಿದೆ ಹಾಗೂ ಸ್ಟಿಚ್ಗಳನ್ನು ಹಾಕಲಾಗಿದೆ ಎಂದು ಸ್ವತಃ ರೋಹಿತ್ ಶರ್ಮಾ ಮಾಹಿತಿ ನೀಡಿದ್ದಾರೆ.
ಭಾರತದ ಮುಂದಿದೆ ಕಠಿಣ ಸವಾಲು
ಮೊದಲ ಎರಡು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಆಘಾತಕಾರಿಯಾಗಿ ಸೋಲು ಕಂಡಿದೆ. ಇದೀಗ ಏಕದಿನ ಸರಣಿಯ ಅಂತಿಮ ಪಂದ್ಯ ಮಾತ್ರವೇ ಬಾಕಿಯಿದೆ. ಈ ಅಂತಿಮ ಪಂದ್ಯದಲ್ಲಾದರೂ ಭಾರತ ಗೆಲುವು ಸಾಧಿಸಿ ಸರಣಿಯಲ್ಲಿ ವೈಟ್ವಾಶ್ ಅವಮಾನದಿಂದ ಪಾರಾಗಲಿದೆಯಾ ಎಂಬುದು ಪ್ರಶ್ನೆಯಾಗಿದೆ. ಇನ್ನು ನಾಯಕ ರೋಹಿತ್ ಶರ್ಮಾ ಕೂಡ ಅಲಭ್ಯವಾಗುತ್ತಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯುಂಟು ಮಾಡಲಿದೆ. ಟೆಸ್ಟ್ ಸರಣಿ ಕೂಡ ನಡೆಯಲಿರುವ ಕಾರಣ ಭಾರತ ಸುದೀರ್ಘ ಮಾದರಿಯಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.