ಇನ್ನೇನು ಕೆಲವೇ ಕ್ಷಣಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಈ ನಡುವೆ ಟೀಮ್ ಇಂಡಿಯಾ ಸಹ ಈ ಬಾರಿ ಕಪ್ ಗೆಲ್ಲುವತ್ತ ಚಿತ್ತ ನೆಟ್ಟಿದೆ. ಈ ಉದ್ದೇಶದಿಂದಲೇ ಭಾರತ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಚಾಂಪಿಯನ್ಸ್ ಟ್ರೋಫಿಗೆ ಪ್ರಕಟಿತ ತಂಡ ಈಗಾಗಲೇ ದುಬೈಗೆ ಹಾರಿದ್ದು ಅಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಈ ಮೆಗಾ ಟೂರ್ನಿ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಚಿಂತೆಯನ್ನು ಹೆಚ್ಚಿಸುವ ಸುದ್ದಿಯೊಂದು ಬಂದಿದೆ.
ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಡ್ರೆಸ್ಸಿಂಗ್ ರೂಮ್ ಚಾಟ್ಗಳು ಸೋರಿಕೆಯಾದ ಆರೋಪ ಕೇಳಿ ಬಂದಿತ್ತು. ಈಗ ಬಂದಿರುವ ಸುದ್ದಿ ನಿಜಕ್ಕೂ ಟೀಮ್ ಇಂಡಿಯಾದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿ ಸೋಲಿನ ಬಳಿಕ ಡ್ರೆಸ್ಸಿಂಗ್ ಮಾತುಗಳ ಸೋರಿಕೆಯಾದ ಬಗ್ಗೆ ವಿವಾದ ಹುಟ್ಟಿಕೊಂಡಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಅಮೋಘ ಸರಣಿ ಗೆಲುವಿನಲ್ಲಿ ಈ ವಿವಾದ ಮರೆ ಮಾಚಿತ್ತು. ಈಗ ಮತ್ತೆ ಡ್ರೆಸ್ಸಿಂಗ್ ರೂಮ್ನಲ್ಲಿ ಹೊತ್ತಿಕೊಂಡ ಹೊಗೆ ಎಲ್ಲಡೆ ಪಸರಿಸುತ್ತಿದೆ.

ಟೈಮ್ಸ್ ನೌದಲ್ಲಿ ಪ್ರಕಟಿತ ಸುದ್ದಿಯಂತೆ, ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಕೋಚ್ ಗೌತಮ್ ಗಂಭೀರ್ ವಿರುದ್ಧ ಗಂಭೀರ್ ಆರೋಪವನ್ನು ಮಾಡಿದ್ದಾರೆ. ಈ ವೇಳೆ ಚಾಂಪಿಯನ್ಸ್ ಟ್ರೋಫಿಯ ಪ್ಲೇಯಿಂಗ್ ಇಲೆವೆನ್ನಲ್ಲಿ ತಾವು ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿರಲಿಲ್ಲ ಎಂದು ಕೋಚ್ ನಂಬಿದ್ದಾರೆ ಎಂದು ಪ್ಲೇಯರ್ ತಿಳಿಸಿದ್ದಾರೆ. ಈಗ ಬಂದಿರುವ ಸುದ್ದಿಯಲ್ಲಿ ವಿಕೆಟ್ ಕೀಪರ್ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದರು ಎಂದು ತಿಳಿದು ಬಂದಿದೆ.
ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿರುವ ವಿಕೆಟ್ ಕೀಪರ್ ಕೋಚ್ ಗೌತಮ್ ಗಂಭೀರ್ ಕಾರ್ಯವೈಖರಿ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು ಟೈಮ್ಸ್ ನೌ ವರದಿ ಮಾಡಿದೆ. ಮುಂಬರುವ ಪಂದ್ಯಗಳಲ್ಲಿ ಈ ಪ್ಲೇಯರ್ ಕೋಚ್ ಅವರ ಮೊದಲ ಆಯ್ಕೆಯ ಕೀಪರ್ ಆಗಿರಲಿಲ್ಲ ಎಂಬುದನ್ನು ಖಚಿತ ಪಡಿಸಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಈ ಮಾಹಿತಿಯನ್ನು ಇವರು ಸೋರಿಕೆ ಮಾಡಿರಲು ಸಾಧ್ಯವಿಲ್ಲ. ಅಲ್ಲದೆ ಇವರು ಏಕದಿನ ಫಾರ್ಮೆಟ್ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದು, ಇವರ ಅಂಕಿ ಅಂಶಗಳು ಸಹ ಇವರಿಗೆ ಮಣೆ ಹಾಕುವಂತೆ ಸೂಚಿಸುತ್ತಿವೆ.

ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬ ವಿಕೆಟ್ ಕೀಪರ್ ಎಂದರೆ ರಿಷಭ್ ಪಂತ್. ಇವರು ಭಾನುವಾರ ಅಭ್ಯಾಸದ ಸಮಯದಲ್ಲಿ ಗಾಯಕ್ಕೆ ತುತ್ತಾಗಿದ್ದರು. ಮತ್ತು ಸೋಮವಾರ ನೆಟ್ಸ್ ವೇಳೆ ಇವರು ಕುಂಟುತಾ ಕಾಣಿಸಿಕೊಂಡರು. ಇವರಿಗೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲೂ ಆಡುವ ಅವಕಾಶವನ್ನು ನೀಡಿರಲಿಲ್ಲ. ಪಂತ್ ಗಾಯ ಗಂಭೀರವಾಗದಿರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದಾರೆ.