ಭಾರತ vs ಬಾಂಗ್ಲಾದೇಶ ಟೆಸ್ಟ್ ಸರಣಿ: ಕನ್ನಡಿಗ ಕೆಎಲ್ ರಾಹುಲ್ಗೆ ನಾಯಕತ್ವದ ಹೊಣೆಗಾರಿಕೆ ಸಾಧ್ಯತೆ

ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಏಕದಿನ ಸರಣಿಯ ಒಂದು ಪಂದ್ತ ಮಾತ್ರವೇ ಬಾಕಿಯಿದೆ. ಶನಿವಾರ ಈ ಪಂದ್ಯ ನಡೆಯಲಿದ್ದು ಅದಾದ ಬಳಿಕ ಈ ಎರಡು ತಂಡಗಳು ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈಗಾಗಲೇ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಸರಣಿ ಗೆಲ್ಲಬೇಕಾದ ಒತ್ತಡವೂ ಇದೆ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾ ಖಾಯಂ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದು ಟೆಸ್ಟ್ ಸರಣಿಗೆ ಅಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.
ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಲಭ್ಯವಾಗುವ ಬಗ್ಗೆ ಈವರೆಗೆ ಸ್ಪಷ್ಟ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೂರನೇ ಏಕದಿನ ಪಂದ್ಯಕ್ಕೂ ಮುನ್ನವೇ ತಂಡದ ಕೋಚ್ ರಾಹುಲ್ ದ್ರಾವಿಡ್ ತವರಿಗೆ ರೋಹಿತ್ ಶರ್ಮಾ ಮರಳಲಿದ್ದಾರೆ ಎಂಬ ಸುಳಿವು ನೀಡಿದ್ದರು. ಹೀಗಾಗಿ ಟೆಸ್ಟ್ ಸರಣಿಗೆ ರೋಹಿತ್ ಲಭ್ಯವಾಗುವ ಸಾಧ್ಯತೆ ಕಡಿಮೆಯಿದೆ. ಹೀಗಾಗಿ ಉಪ ನಾಯಕ ಕೆಎಲ್ ರಾಹುಲ್ ಟೆಸ್ಟ್ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

ಕೆಎಲ್ ರಾಹುಲ್ ಉಪ ನಾಯಕ
ಇನ್ನು ಬಾಂಗ್ಲಾದೇಶ ಪ್ರವಾಸಕ್ಕೆ ಕೆಎಲ್ ರಾಹುಲ್ ಅವರನ್ನು ಉಪನಾಯಕನನ್ನಾಗಿ ನೇಮಕಗೊಳಿಸಲಾಗಿತ್ತು. ಏಕದಿನ ಸರಣಿಯಲ್ಲಿಯೂ ಉಪನಾಯಕನಾಗಿ ಸಾಥ್ ನೀಡಿದ್ದ ರಾಹುಲ್ ಎರಡನೇ ಪಂದ್ಯದಲ್ಲಿ ರೋಹಿತ್ ಗಾಯಗೊಂಡ ಬಳಿಕ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದರು. ಅಂತಿಮ ಏಕದಿನ ಪಂದ್ಯದಲ್ಲಿ ಸಂಪೂರ್ಣವಾಗಿ ಅವರೇ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಇದೀಗ ಎರಡು ಪಂದ್ಯಗಳ ಟೆಸ್ಟ್ ಸರಣಿಗೂ ರಾಹುಲ್ ಪೂರ್ಣ ಪ್ರಮಾಣದಲ್ಲಿ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಿದೆ.

ರೋಹಿತ್ಗೆ ಬದಲಿ ಆಟಗಾರ ಯಾರು?
ಇನ್ನು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರೋಹಿತ್ ಶರ್ಮಾ ಭಾಗಿಯಾಗದಿದ್ದಲ್ಲಿ ಬದಲಿ ಆಟಗಾರನಾಗಿ ಯಾರಿಗೆ ಅವಕಾಶ ದೊರೆಯಬಹುದು ಎಂಬುದಕ್ಕೆ ಅಧಿಕೃತ ಉತ್ತರ ದೊರೆತಿಲ್ಲ. ಸದ್ಯ ಬಾಂಗ್ಲಾದೇಶದಲ್ಲಿಯೇ ಇದ್ದು ಭಾರತ ಎ ತಂಡವನ್ನು ಮುನ್ನಡೆಸುತ್ತಿರುವ ಅಭಿಮನ್ಯು ಈಶ್ವರನ್ ಅವರನ್ನು ರೋಹಿತ್ಗೆ ಬದಲಿಯಾಗಿ ತಂಡಕ್ಕೆ ಸೇರ್ಪಡೆಗೊಳಿಸುವ ಸಾಧ್ಯತೆ ಹೆಚ್ಚಿದೆ. ಅಭಿಮನ್ಯು ಈಶ್ವರನ್ ಬಾಂಗ್ಲಾದೇಶ ಎ ವಿರುದ್ಧದ ಅನಧಿಕೃತ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ.

ಗಾಯದ ಬಗ್ಗೆ ಮಾಹಿತಿ ಹಂಚಿಕೊಂಡ ರೋಹಿತ್
ಇನ್ನು ಎರಡನೇ ಏಕದಿನ ಪಂದ್ಯದ ಆರಂಭದಲ್ಲಿಯೇ ಬೆರಳಿನ ಗಾಯಕ್ಕೊಳಗಾಗಿದ್ದ ರೋಹಿತ್ ಶರ್ಮಾ ಮೈದಾನವನ್ನು ತೊರೆದು ಚಿಕಿತ್ಸೆ ಪಡೆದುಕೊಂಡಿದ್ದರು. ಬಳಿಕ ಅಂತಿಮ ಹಂತದಲ್ಲಿ ಬ್ಯಾಟಿಂಗ್ ನಡೆಸಿ ಅಬ್ಬರದ ಪ್ರದರ್ಶನ ನೀಡಿದರಾದರೂ ಭಾರತದ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದ ಬಳಿಕ ತಮ್ಮ ಗಾಯದ ಬಗ್ಗೆ ರೋಹಿತ್ ಶರ್ಮಾ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲಿ ಅವರು ಬೆರಳಿನ ಮೂಳೆ ಸಣ್ಣ ಪ್ರಮಾಣದ ಸ್ಥಾಳಾಂತರವಾಗಿದೆ, ಆದರೆ ಮೂಳೆ ಮುರಿತಕ್ಕೊಳಗಾಗಿಲ್ಲ, ಗಾಯಕ್ಕೆ ಕೆಲ ಸ್ಟಿಚ್ಗಳನ್ನು ಹಾಕಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂತಿಮ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಸವಾಲು
ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾದ ಮೂವರು ಆಟಗಾರರು ಅಲಭ್ಯವಾಗುವುದು ಖಚಿತವಾಗಿದೆ. ಕೋಚ್ ರಾಹುಲ್ ದ್ರಾವಿಡ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು ನಾಯಕ ರೋಹಿತ್ ಶರ್ಮಾ ಜೊತೆಗೆ ವೇಗಿಗಳಾದ ದೀಪಕ್ ಚಹರ್ ಹಾಗೂ ಕುಲ್ದೀಪ್ ಸೇನ್ ಗಾಯದ ಕಾರಣದಿಂದಾಗಿ ಅಂತಿಮ ಪಂದ್ಯದಿಂದ ಹೊರಗುಳಿಯಲಿದ್ದಾರೆ ಎಂದಿದ್ದಾರೆ. ವೇಗಿ ದೀಪಕ್ ಚಹರ್ ಬೌಲಿಂಗ್ ಸಂದರ್ಭದಲ್ಲಿ ಗಾಯಗೊಂಡಿದ್ದು ಕೇವಲ 3 ಓವರ್ಗಳ ಬೌಲಿಂಗ್ ಮಾತ್ರವೇ ನಡೆಸಿದ್ದರು. ಇನ್ನು ಕುಲ್ದೀಪ್ ಸೇನ್ ಮೊದಲ ಪಂದ್ಯದಲ್ಲಿ ಗಾಯಗೊಂಡಿರುವ ಕಾರಣದಿಂದಾಗಿ 2ನೇ ಪಂದ್ಯದಲ್ಲಿಯೂ ಆಡಿರಲಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications