ಬಾಂಗ್ಲಾದೇಶ ತಂಡ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗಾಗಿ ಭಾರತಕ್ಕೆ ಆಗಮಿಸಿದೆ. ಟೆಸ್ಟ್ ಸರಣಿಗೂ ಮುನ್ನ ಬಾಂಗ್ಲಾದೇಶದ ನಾಯಕ ನಜ್ಮುಲ್ ಹುಸೇನ್ ಶಾಂಟೊ ಅವರು ಟೀಮ್ ಇಂಡಿಯಾವನ್ನು ಎಚ್ಚರಿಸಿದ್ದಾರೆ.
ಸೆಪ್ಟೆಂಬರ್ 19 ರಿಂದ ಪ್ರಾರಂಭವಾಗುವ ಆರಂಭಿಕ ಟೆಸ್ಟ್ಗಾಗಿ ಬಾಂಗ್ಲಾದೇಶ ತಂಡ ಭಾನುವಾರ ಮಧ್ಯಾಹ್ನ ಚೆನ್ನೈ ತಲುಪಿದೆ. ಢಾಕಾದಿಂದ ಚೆನ್ನೈಗೆ ಹಾರುವ ಮೊದಲು, ನಾಯಕ ಶಾಂಟೊ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ರೋಹಿತ್ ಶರ್ಮಾ ಪಡೆಗೆ ಎಚ್ಚರಿಕೆ ಕೊಟ್ಟಿದ್ದಾರೆ.

'ಇದು ಖಂಡಿತವಾಗಿಯೂ ನಮಗೆ ಅತ್ಯಂತ ಸವಾಲಿನ ಸರಣಿಯಾಗಿದೆ. ಪಾಕಿಸ್ತಾನ ವಿರುದ್ಧದ ಸರಣಿಯ ನಂತರ ತಂಡ ಮತ್ತು ದೇಶದ ಜನರ ಆತ್ಮವಿಶ್ವಾಸ ಖಂಡಿತವಾಗಿಯೂ ಹೆಚ್ಚಿದೆ. ಪ್ರತಿಯೊಂದು ಸರಣಿಯೂ ಒಂದು ಅವಕಾಶ. ಹೀಗಾಗಿ ಭಾರತದ ಎದುರು ಎರಡೂ ಪಂದ್ಯಗಳನ್ನು ಗೆಲ್ಲಲು ಆಡುತ್ತೇವೆ' ಎಂದು ತಮ್ಮ ಉದ್ದೇಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
ಭಾರತ ಪ್ರವಾಸಕ್ಕೆ ಕೈಗೊಂಡಿರುವ ಬಾಂಗ್ಲಾದೇಶ ತಂಡಕ್ಕೆ ಸೂಕ್ತ ಭದ್ರತೆ ಒದಗಿಸಲಾಗುತ್ತಿದೆ. ಅಂತರಾಷ್ಟ್ರೀಯ ತಂಡಗಳ ಭದ್ರತಾ ಪ್ರೋಟೋಕಾಲ್ ಬಾಂಗ್ಲಾದೇಶ ತಂಡಕ್ಕೆ ಜಾರಿಯಲ್ಲಿತ್ತು. ಎರಡು ಪೊಲೀಸ್ ವ್ಯಾನ್ಗಳು ಟೀಮ್ ಬಸ್ನೊಂದಿಗೆ ಹೋಟೆಲ್ವರೆಗೆ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಹೋಟೆಲ್ ತಲುಪಿದ ಆಟಗಾರರನ್ನು ಆತ್ಮೀಯವಾಗಿ ಸ್ವಾಗತಿಸಲಾಯಿತು. ಸಿಬ್ಬಂದಿ ಗುಲಾಬಿ ಹೂಗಳನ್ನು ಆಟಗಾರರ ಮೇಲೆ ಹಾಕುವ ಮೂಲಕ ಸ್ವಾಗತ ಕೋರಿದರು.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯೂಟಿಸಿ) ಪಟ್ಟಿಯಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ. ಆದರೆ ಪಂದ್ಯದ ಪ್ರದರ್ಶನವು ಶ್ರೇಯಾಂಕದ ಮೇಲೆ ಅವಲಂಬಿತವಾಗಿಲ್ಲ. ಐದು ದಿನಗಳಲ್ಲಿ ಟೀಮ್ ಇಂಡಿಯಾ ಹೇಗೆ ಆಡುತ್ತದೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂದು ಬಾಂಗ್ಲಾದೇಶದ ನಾಯಕ ತಿಳಿಸಿದ್ದಾರೆ. 'ಅವರ ತಂಡವು ಶ್ರೇಯಾಂಕದಲ್ಲಿ ನಮಗಿಂತ ಹೆಚ್ಚು ಮುಂದಿದೆ. ಆದರೆ ನಾವು ಇತ್ತೀಚೆಗೆ ಉತ್ತಮ ಪ್ರದರ್ಶನ ನೀಡಿದ್ದೇವೆ. ಐದು ದಿನವೂ ಚೆನ್ನಾಗಿ ಆಡುವುದು ನಮ್ಮ ಗುರಿ' ಎಂದಿದ್ದಾರೆ.
ಇತ್ತ ತವರಿನಲ್ಲಿ ಬಾಂಗ್ಲಾದೇಶ ತಂಡಕ್ಕೆ ಖೆಡ್ಡಾ ತೋಡಲು ರೋಹಿತ್ ಶರ್ಮಾ ಪಡೆ ರಣತಂತ್ರ ರೂಪಿಸಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಟೀಮ್ ಇಂಡಿಯಾ ಸೇರಿರುವುದು ತಂಡಕ್ಕೆ ಮತ್ತಷ್ಟು ಬಲ ತಂದಿದೆ. ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಕೂಡ ಅದ್ಭುತ ಫಾರ್ಮ್ನಲ್ಲಿದ್ದು, ಕಮಾಲ್ ಮಾಡಲು ರೆಡಿಯಾಗಿದ್ದಾರೆ.