ಚಾಂಪಿಯನ್ಸ್ ಟ್ರೋಫಿಯಲ್ಲಿ ಗುರುವಾರ ಭಾರತ ಹಾಗೂ ಬಾಂಗ್ಲಾದೇಶ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಉಭಯ ತಂಡಗಳು ಮೈದಾನದಲ್ಲಿ ಕಸರತ್ತು ಆರಂಭಿಸಿವೆ. ಈ ಪಂದ್ಯವನ್ನು ಗೆದ್ದು ಶುಭಾರಂಭ ಮಾಡುವ ಕನಸನ್ನು ಉಭಯ ತಂಡಗಳು ಹೊಂದಿವೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಬಲಿಷ್ಠವಾಗಿದೆ. ಸ್ಟಾರ್ ಆಟಗಾರರನ್ನು ಹೊಂದಿರುವ ಭಾರತ ತಂಡ ಅಬ್ಬರಿಸುವ ಪ್ಲ್ಯಾನ್ ಮಾಡಿಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಗಂಣದಲ್ಲಿ ನಡೆಯಲಿರುವ ಪಂದ್ಯ ಎಲ್ಲರ ಚಿತ್ತ ಕದ್ದಿದೆ. ಭಾರತ ಹಾಗೂ ಬಾಂಗ್ಲಾ ತಂಡಗಳು ಮೈದಾನಕ್ಕೆ ಇಳಿಯುತ್ತವೇ ಎಂದರೆ ಅಲ್ಲಿ ಕುತೂಹಲ ಇದ್ದೇ ಇರುತ್ತದೆ. ಉಭಯ ದೇಶಗಳ ನಡುವೆ ಈಗಾಗಲೇ ಹಲವು ಬಾರಿ ಮುಖಾಮುಖಿ ಸಂಭವಿಸಿದ್ದು, ವಿವಾದಗಳು ಸಹ ಈ ಪಂದ್ಯಗಳತ್ತ ಸುತ್ತ ಸುತ್ತಿಕೊಂಡಿವೆ.

ನಾಗಿನಿ ಡ್ಯಾನ್ಸ್.. ಈ ಡ್ಯಾನ್ಸ್ ಹೆಸರು ಕೇಳಿದ್ರೆ ಸಾಕು ಬಾಂಗ್ಲಾದೇಶ ತಂಡದ ಹೆಸರು ನೆನಪಾಗುತ್ತದೆ. 2018 ರ ಏಷ್ಯಾಕಪ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ಪಂದ್ಯದ ವೇಳೆ ಈ ಡ್ಯಾನ್ಸ್ ಕಂಡು ಬಂದಿತು. ಶಿಖರ್ ಧವನ್ ಔಟ್ ಆಗುತ್ತಿದ್ದಂತೆ, ಬಾಂಗ್ಲಾ ಆಟಗಾರರು ನಾಗಿನಿ ಡ್ಯಾನ್ಸ್ ಮಾಡಲು ಆರಂಭಿಸಿದರು. ಈ ಪಂದ್ಯವನ್ನು ಭಾರತ ಗೆದಿತು. ಆದರೆ ಪಂದ್ಯದ ಬಳಿಕ ಭಾರತೀಯ ಅಭಿಮಾನಿಗಳು, ಬಾಂಗ್ಲಾ ಆಟಗಾರರನ್ನು ಬಹುವಾಗಿ ಕೆಣಕಿದರು. ಈ ಪಂದ್ಯದ ಬಳಿಕ ಉಭಯ ದೇಶಗಳ ನಡುವೆ ಜಿದ್ದಾಜಿದ್ದು ಕಂಡು ಬಂದಿದೆ.
2023 ರ ಉದಯೋನ್ಮುಖ ಏಷ್ಯಾ ಕಪ್ನ ಸೆಮಿಫೈನಲ್ ಪಂದ್ಯ ಭಾರತ ಮತ್ತು ಬಾಂಗ್ಲಾದೇಶ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಭಾರತದ ಹರ್ಷಿತ್ ರಾಣಾ ಹಾಗೂ ಸೌಮ್ಯಾ ಸರ್ಕಾರ ನಡುವೆ ಮಾತಿನ ಚಕಮಕಿ ಕಂಡು ಬಂದಿತು. ಭಾರತದ ಬ್ಯಾಟರ್ ಔಟ್ ಆದಾಗ ಸೌಮ್ಯಾ ಸರ್ಕಾರ ಸಡಗರದಿಂದ ಸಂಭ್ರಮಿಸಿದರು. ಸೌಮ್ಯಾ ಸರ್ಕಾರ ಔಟ್ ಆದಾಗಲೂ, ಹರ್ಷಿತ್ ರಾಣಾ ಇದೇ ರೀತಿ ಮಾಡಿದರು. ಆಗ ವಾಗ್ವಾದ ನಡೆಯಿತು.

2016ರ ಟಿ20 ವಿಶ್ವಕಪ್ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ರೋಚಕ ಪಂದ್ಯ ನೆನಪಿರಬಹದು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಅಮೋಘ ಜಯ ಸಾಧಿಸಿತು. ಬಾಂಗ್ಲಾ ಗೆಲ್ಲುವ ಪಂದ್ಯವನ್ನು ಕೈ ಚೆಲ್ಲಿತು. ಈ ಪಂದ್ಯದ ವೇಳೆ ಮುಷ್ಫೀಕರ್ ರಹೀಮ್, ಪಾಂಡ್ಯ ಎದುರು ಸಂಭ್ರಮಿಸಿದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಬಾಂಗ್ಲಾದೇಶದ ಡ್ರೆಸ್ಸಿಂಗ್ ರೂಮ್ ಹೊರಗಡೆ ವಿಜಯೋತ್ಸವ ಆಚರಿಸುವುದಾಗಿ ತಿಳಿಸಿದ್ದರು.

ಭಾರತ ಹಾಗೂ ಬಾಂಗ್ಲಾದೇಶ ನಡುವಣ ಪಂದ್ಯ 2015ರಲ್ಲಿ ಮೀರ್ಪುರ್ದಲ್ಲಿ ನಡೆದಿತ್ತು. ಈ ವೇಳೆ ಭಾರತ ತಂಡದ ಕಟ್ಟಾ ಅಭಿಮಾನಿ ಸುಧೀರ್ ಕುಮಾರ್ ಚೌಧರಿ, ಮೈದಾನದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾಗ ಬಾಂಗ್ಲಾದೇಶ ಅಭಿಮಾನಿಗಳು ಕೆಣಕಿದರು. ಅಲ್ಲದೆ ಭಾರತದ ವಿರುದ್ಧ ಘೋಷಣೆ ಕೂಗಿದರು. ಅಲ್ಲದೆ ಸುಧೀರ್ ಕುಮಾರ್ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದರು. ಈ ಘರ್ಷಣೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಇನ್ನು ವಿವಾದ ಪುಟಗಳಲ್ಲಿ 2020ರ ಅಂಡರ್19 ವಿಶ್ವಕಪ್ ಸಹ ಸೇರಿದೆ. ಈ ಟೂರ್ನಿಯಲ್ಲಿ ಭಾರತ ಹಾಗೂ ಬಾಂಗ್ಲಾದೇಶಗಳು ಕಾದಾಟ ನಡೆಸಿದವು. ಫೈನಲ್ ಪಂದ್ಯ ಗೆದ್ದ ಬಳಿಕ ಬಾಂಗ್ಲಾ ಆಟಗಾರರು ಭಾರತೀಯ ಆಟಗಾರರನ್ನು ನಿಂದಿಸಿದರು. ಇದು ಉಭಯ ದೇಶಗಳ ನಡುವೆ ಘರ್ಷಣೆಗೆ ಕಾರಣವಾಯಿತು.