ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆಗಾರರು ತಂಡದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಿದ್ದಾರೆ. ಅವರು ಕೆಲವು ಅಚ್ಚರಿಯ ನಿರ್ಧಾರಗಳನ್ನೂ ತೆಗೆದುಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಟಿ20 ಸರಣಿ ಮೂಲಕ 3 ವರ್ಷಗಳ ನಂತರ ಸ್ಪಿನ್ನರ್ ವರುಣ್ ಚಕ್ರವರ್ತಿ ಭಾರತ ತಂಡಕ್ಕೆ ಮರಳಿದ್ದಾರೆ. ಐಪಿಎಲ್ನಲ್ಲಿ ವೇಗದ ಬೌಲಿಂಗ್ನಿಂದ ಸಂಚಲನ ಮೂಡಿಸಿದ್ದ ಮಯಾಂಕ್ ಯಾದವ್ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ್ದಾರೆ. ಈ ಸರಣಿಯಲ್ಲಿ ಅನುಭವಿ ಸ್ಪಿನ್ನರ್ ಕುಲದೀಪ್ ಯಾದವ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಯುಜ್ವೇಂದ್ರ ಚಹಾಲ್ ಕೂಡ ಆಯ್ಕೆಯಾಗಿಲ್ಲ.

ಮತ್ತೊಂದೆಡೆ ಆರಂಭಿಕ ಬ್ಯಾಟರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್ ಗಿಲ್ ಅವರನ್ನು ತಂಡವನ್ನು ಕೈ ಬಿಡಲಾಗಿದೆ. ಕೆಲಸದ ಹೊರೆ ನಿರ್ವಹಣೆಯನ್ನು ಕಡಿಮೆ ಮಾಡಲು ಬಾಂಗ್ಲಾದೇಶ ಟಿ20 ಸರಣಿಯಿಂದ ಇಬ್ಬರಿಗೂ ವಿಶ್ರಾಂತಿ ನೀಡಲಾಗಿದೆ. ಜೈಸ್ವಾಲ್ ಮತ್ತು ಗಿಲ್ ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ದೇಶೀಯ ಟೂರ್ನಿಯಲ್ಲಿ ಅಬ್ಬರಿಸಿದ ಯುವ ಬ್ಯಾಟರ್ನನ್ನು ತಂಡಕ್ಕೆ ಆಯ್ಕೆ ಮಾಡಿಲ್ಲ.
ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಬಾಂಗ್ಲಾದೇಶ ಟಿ20 ಸರಣಿಗೆ ಮುಂಬೈ ಇಂಡಿಯನ್ಸ್ ತಂಡದ ಸ್ಫೋಟಕ ಬ್ಯಾಟರ್ ಇಶಾನ್ ಕಿಶನ್ ಅವರನ್ನು ಆಯ್ಕೆ ಮಾಡಿಲ್ಲ. ಕಿಶನ್ ಇತ್ತೀಚೆಗೆ ಬುಚ್ಚಿ ಬಾಬು ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕವನ್ನೂ ಗಳಿಸಿದ್ದರು. ಇದಾದ ನಂತರ ಅವರು ದುಲೀಪ್ ಟ್ರೋಫಿಯಲ್ಲೂ ತಮ್ಮ ಬ್ಯಾಟಿಂಗ್ ಖದರ್ ತೋರಿದ್ದರು. ಭಾರತ ಬಿ ವಿರುದ್ಧದ ಪಂದ್ಯದಲ್ಲಿ ಭಾರತ ಸಿ ಪರ ಶತಕವನ್ನು ಬಾರಿಸಿದ್ದರು. ಈ ಎರಡು ಪ್ರದರ್ಶನದ ಬಳಿಕ ಕಿಶನ್ ಟೀಮ್ ಇಂಡಿಯಾಕ್ಕೆ ಮರಳುತ್ತಾರೆ ಎಂಬ ನಿರೀಕ್ಷಿಯಿತ್ತು. ಆದರೆ ಸತತ ಎರಡ ಶತಕಗಳನ್ನು ಹೊಡೆದರು, ಇಶಾನ್ಗೆ ಸ್ಥಾನ ಸಿಗಲಿಲ್ಲ. ಸಂಜು ಸ್ಯಾಮ್ಸನ್ ಜೊತೆಗೆ ಎರಡನೇ ವಿಕೆಟ್ ಕೀಪರ್ ಆಗಿ ಆಯ್ಕೆಯಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಇಶಾನ್ ಕಿಶನ್ ಇರಾನಿ ಕಪ್ಗೆ ಆಯ್ಕೆಯಾಗಿದ್ದಾರೆ. ಈ ಪಂದ್ಯ ಲಕ್ನೋದಲ್ಲಿ ಅಕ್ಟೋಬರ್ 1 ರಿಂದ 5 ರವರೆಗೆ ನಡೆಯಲಿದೆ. ಇರಾನಿ ಕಪ್ನಲ್ಲಿ, ಹಾಲಿ ರಣಜಿ ಟ್ರೋಫಿ ಚಾಂಪಿಯನ್ ರೆಸ್ಟ್ ಆಫ್ ಇಂಡಿಯಾ ತಂಡವನ್ನು ಎದುರಿಸಲಿದೆ. ಈ ಬಾರಿ ಅಜಿಂಕ್ಯ ರಹಾನೆ ಸಾರಥ್ಯದ ಮುಂಬೈ ತಂಡವ ಋತುರಾಜ್ ಗಾಯಕ್ವಾಡ್ ನಾಯಕತ್ವದ ರೆಸ್ಟ್ ಆಫ್ ಇಂಡಿಯಾ ತಂಡದ ವಿರುದ್ಧ ಆಡಲಿದೆ. ಈ ಟೂರ್ನಿಯಲ್ಲಿ ಇಶಾನ್ ಕಿಶನ್ ಕೂಡ ಸೇರಿಕೊಂಡಿದ್ದಾರೆ. ಕಿಶನ್ ಆಡುತ್ತಿರುವ ಪಂದ್ಯ ಅಕ್ಟೋಬರ್ 5 ರವರೆಗೆ ನಡೆಯಲಿದ್ದು, ಮರುದಿನ ಬಾಂಗ್ಲಾದೇಶ ವಿರುದ್ಧ ಸರಣಿ ಆರಂಭವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಇಶಾನ್ ಟಿ20 ಸರಣಿಯಲ್ಲಿ ಭಾಗವಹಿಸುವುದು ಕಷ್ಟ. ಆಯ್ಕೆಗಾರರು ಅವರನ್ನು ಎರಡನೇ ಮತ್ತು ಮೂರನೇ ಟಿ20 ಪಂದ್ಯಗಳಿಗೆ ಆಯ್ಕೆ ಮಾಡಬಹುದಿತ್ತು, ಆದರೆ ಅವರು ಹಾಗೆ ಮಾಡಿಲ್ಲ.
ಈಗಾಗಲೇ ಸತತವಾಗಿ ದೇಶೀಯ ಟೂರ್ನಿಗಳಲ್ಲಿ ಇಶಾನ್ ಆಡುತ್ತಿದ್ದಾರೆ. ದುಲೀಪ್ ಟ್ರೋಫಿ ನಂತರ ಆಯ್ಕೆಗಾರರು ಇರಾನಿ ಕಪ್ಗೆ ಅವರನ್ನು ಆಯ್ಕೆ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಭಾರತ ಟೆಸ್ಟ್ ತಂಡಕ್ಕೆ ಮರಳುವ ಸನಿಹದಲ್ಲಿದ್ದಾರೆ ಎನ್ನಲಾಗುತ್ತಿದೆ. ಬಾಂಗ್ಲಾದೇಶ ವಿರುದ್ದದ ನಂತರ ಭಾರತ ತಂಡವು ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಎದುರಿಸಲಿದೆ. ಈ ಎರಡು ತಂಡಗಳ ವಿರುದ್ಧ ಟೆಸ್ಟ್ ಸರಣಿಗೆ ಇಶಾನ್ ಟೀಮ್ ಇಂಡಿಯಾಗೆ ಆಯ್ಕೆಯಾಗುವ ಸಾಧ್ಯತೆಯಿದೆ. ನ್ಯೂಜಿಲೆಂಡ್ ವಿರುದ್ಧದ ತವರಿನ ಟೆಸ್ಟ್ ಸರಣಿಗೆ ಸ್ಥಾನ ಪಡೆಯುವಲ್ಲಿ ವಿಫಲವಾದರೆ, ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆಯಾಗಬಹುದು. ಆಸ್ಟ್ರೇಲಿಯಾದ ಬೌನ್ಸಿ ಪಿಚ್ನಲ್ಲಿ ಅವರ ಬ್ಯಾಟಿಂಗ್ ಭಾರತ ತಂಡಕ್ಕೆ ಉಪಯುಕ್ತವಾಗಬಹುದು.
ಒಂದು ವೇಳೆ ಕಾರಣಾಂತರಗಳಿಂದ ರಿಷಭ್ ಪಂತ್ ಯಾವುದೇ ಪಂದ್ಯವನ್ನು ಆಡಲು ಸಾಧ್ಯವಾಗದಿದ್ದರೆ, ಅವರ ಸ್ಥಾನವನ್ನು ಇಶಾನ್ ತುಂಬಲಿದ್ದಾರೆ. ಏಕೆಂದರೆ ಯುವ ಆಟಗಾರ ಧ್ರುವ್ ಜುರೆಲ್ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಹೀಗಾಗಿ ಇಶಾನ್ ಕಿಶನ್ ಎರಡನೇ ವಿಕೆಟ್ ಕೀಪರ್ ಆಗಿ ಭಾರತ ತಂಡದಲ್ಲಿ ಸ್ಥಾನ ಗಳಿಸಬಹುದು.