ಬಾಂಗ್ಲಾದೇಶ ವಿರುದ್ದದ ತವರಿನ ಟೆಸ್ಟ್ ಸರಣಿಗೆ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. 16 ಆಟಗಾರರನ್ನು ಒಳಗೊಂಡಿರುವ ಟೀಮ್ ಇಂಡಿಯಾದಲ್ಲಿ ಯಾರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಬೇಕು ಎಂಬುವುದೇ ದೊಡ್ಡ ಸವಾಲಾಗಿದೆ.
ಟೀಮ್ ಇಂಡಿಯಾದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ರೋಹಿತ್ ಶರ್ಮಾ ಅವರ ಪ್ಲೇಯಿಂಗ್-11 ಹೇಗಿರಲಿದೆ ಎಂಬುದು ಕುತೂಹಲ ಹೆಚ್ಚಿಸಿದೆ. ಈ ಇಬ್ಬರು ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಏಕೆಂದರೆ ರಿಷಬ್ ಪಂತ್ ನಂತರ 6ನೇ ಕ್ರಮಾಂಕದಲ್ಲಿ ಯಾರು ಆಡಲಿದ್ದಾರೆ? ಎಂಬುದು ಪ್ರಶ್ನೆಯಾಗಿದೆ.

ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಮರಳಿರುವುದು ಟೀಮ್ ಇಂಡಿಯಾಗೆ ಆನೆ ಬಲ ಬಂದಂತಾಗಿದೆ. ಆದರೆ, ಭಾರತ ತಂಡದ ಉಪನಾಯಕ ಯಾರು ಎಂಬ ದೊಡ್ಡ ಪ್ರಶ್ನೆ ಎದ್ದಿದೆ. ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಸರಣಿಯಲ್ಲಿ ಬುಮ್ರಾ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿತ್ತು. ಆದರೆ ಈ ಬಾರಿ ತಂಡದಲ್ಲಿ ಉಪನಾಯಕ ಸ್ಥಾನಕ್ಕೆ ಯಾರನ್ನೂ ಹೆಸರಿಸಿಲ್ಲ.
ಅನುಭವಿ ಆಟಗಾರರಾದ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ತಂಡದಲ್ಲಿದ್ದು, ಉಪನಾಯಕನ ಪಾತ್ರವನ್ನು ಯಾರಿಗೂ ಇನ್ನೂ ವಹಿಸಿಲ್ಲ. ಇದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚ ಅಚ್ಚರಿ ಮೂಡಿಸಿದೆ.
ರಿಷಬ್ ಪಂತ್ ದೀರ್ಘ ಕಾಲದವರೆಗೆ ಕ್ರಿಕೆಟ್ ಮೈದಾನದಿಂದ ದೂರವಿದ್ದರು. ಅವರು ಈ ವರ್ಷ ಐಪಿಎಲ್ನಿಂದ ಮೈದಾನಕ್ಕೆ ಮರಳಿದ್ದರು. ಅವರು ಟಿ20 ವಿಶ್ವಕಪ್ ಟೂರ್ನಿ ವೇಳೇ ಟೀಮ್ ಇಂಡಿಯಾಗೆ ಆಯ್ಕೆಯಾಗಿ ಮಿಂಚಿದ್ದರು. ಆ ಬಳಿಕ ಶ್ರೀಲಂಕಾದಲ್ಲಿ ನಡೆದ ಏಕದಿನ ಸರಣಿಯ ಭಾಗವೂ ಆಗಿದ್ದರು. ಇದೀಗ ಅವರು ಟೆಸ್ಟ್ಗೆ ಮರಳಿದ್ದು, ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗುತ್ತಿದೆ.
ವೇಗದ ಬೌಲರ್ ಮೊಹಮ್ಮದ್ ಶಮಿ ಇನ್ನೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗಿಲ್ಲ. ಶಮಿ ಅನುಪಸ್ಥಿತಿಯಲ್ಲಿ ಆರ್ಸಿಬಿ ವೇಗದ ಬೌಲರ್ ಯಶ್ ದಯಾಳ್ ಚೊಚ್ಚಲ ಬಾರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ, ಪ್ಲೇಯಿಂಗ್-11ರಲ್ಲಿ ಸ್ಥಾನ ಪಡೆಯುವ ಸಾಧ್ಯತೆ ತೀರಾ ಕಡಿಮೆ. ಮತ್ತೊಂದೆಡೆ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ಕಮ್ ಬ್ಯಾಕ್ ಮಾಡಿದ್ದಾರೆ. ಎರಡನೇ ಮಗುವಿನ ಜನನದ ಕಾರಣ ಅವರು ಇಂಗ್ಲೆಂಡ್ ವಿರುದ್ಧದ ಕೊನೆಯ ಸರಣಿಯನ್ನು ಆಡಿರಲಿಲ್ಲ.
ಈ ಹಿಂದೆ ಹಲವು ಬಾರಿ ಭಾರತ ಟೆಸ್ಟ್ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಿದ್ದು, ಭವಿಷ್ಯದಲ್ಲಿ ನಾಯಕರಾಗುವ ಅವಕಾಶವನ್ನು ಹೊಂದಿದ್ದರು. ಆದರೆ ಈಗ ಸಮಯ ಬದಲಾಗಿದೆ. ಇಂದು ರಾಹುಲ್ ಉತ್ತಮ ಪ್ರದರ್ಶನದ ಆಧಾರದ ಮೇಲೆ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡುತ್ತಿದ್ದಾರೆ. ಅವರು ವಿಕೆಟ್ ಕೀಪರ್ ಜೊತೆಗೆ ಯಾವುದೇ ಕ್ರಮಾಂಕದಲ್ಲಾದರೂ ಆಡುವ ಸಾಮರ್ಥ್ಯವಿದೆ.
ಮತ್ತೊಂದೆಡೆ, ಬಲಗೈ ಯುವ ಬ್ಯಾಟರ್ ಸರ್ಫರಾಜ್ ಖಾನ್ ಕೂಡ ಈ ಸ್ಥಾನಕ್ಕೆ ಆರ್ಹರಾಗಿದ್ದಾರೆ. ಅವರ ನೇರ ಪೈಪೋಟಿ ರಾಹುಲ್ ಜೊತೆಗಿದೆ. ಆದರೆ ಸರ್ಫರಾಜ್ ಅವರನ್ನು ಪ್ಲೇಯಿಂಗ್ -11 ರಲ್ಲಿ ಕಾಣುವ ಸಾಧ್ಯತೆ ತುಂಬಾ ಕಡಿಮೆ
ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರಿಷಬ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್.