ಭಾರತ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ಮುಕ್ತಾಯವಾಗಿದೆ. ಮೊದಲ ದಿನ ಟೀಮ್ ಇಂಡಿಯಾ ಸಂಪೂರ್ಣವಾಗಿ ಮೇಲುಗೈ ಸಾಧಿಸಿದ್ದು ಬಾಂಗ್ಲಾದೇಶ ತಂಡವನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದೆ. ಆದರೆ ಮೊದಲ ದಿನದ ಯಶಸ್ಸಿನ ಹೊರತಾಗಿಯೂ ಟೀಮ್ ಇಂಡಿಯಾದ ಒಂದು ನಿರ್ಧಾರ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದ ಕುಲ್ದೀಪ್ ಯಾದವ್ ಅವರನ್ನು ಎರಡನೇ ಪಂದ್ಯದಿಂದ ಹೊರಗಿಡಲಾಗಿದೆ. ಇದು ಭಾರೀ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಟೀಮ್ ಇಂಡಿಯಾದ ವೇಗಿ ಉಮೇಶ್ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ. ಕುಲ್ದೀಪ್ ಯಾದವ್ ಅವರನ್ನು ಹೊರಗಿಡುವ ನಿರ್ಧಾರ ತಂಡದ ನಿರ್ಧಾರ ಎಂದಿದ್ದಾರೆ. "ಇದು ತಂಡದ ನಿರ್ಧಾರ ಹಾಗೂ ಮ್ಯಾನೇಜ್ಮೆಂಟ್ನ ನಿರ್ಧಾರವಾಗಿದೆ. ಯಾಕೆಂದರೆ ಕೆಲವೊಂದು ಸಂದರ್ಭಗಳಲ್ಲಿ ತಂಡದ ಅಗತ್ಯಕ್ಕೆ ತಕ್ಕಂತಾ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿನ ಪಿಚ್ ನೋಡಿದ ಬಳಿಕ ಮ್ಯಾನೇಜ್ಮೆಂಟ್ ಈ ನಿರ್ಧಾರವನ್ನು ತೆಗೆದಿಕೊಂಡಿತು" ಎಂದಿದ್ದಾರೆ ಉಮೇಶ್ ಯಾದವ್
ನಾನು ಆಡಿದ ಅತ್ಯಂತ ಕಠಿಣವಾದ ಪಿಚ್ ಅದು: ಗ್ಯಾಬಾ ಬಗ್ಗೆ ಸ್ಟೀವ್ ಸ್ಮಿತ್ ಪ್ರತಿಕ್ರಿಯೆ
ಸುನಿಲ್ ಗವಾಸ್ಕರ್ ಟೀಕೆ: ಸುನಿಲ್ ಗವಾಸ್ಕರ್ ಈ ಬಗ್ಗೆ ಮಾತನಾಡುತ್ತಾ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಅವರನ್ನು ಹೊರಗಿಡುವ ನಿರ್ಧಾರವನ್ನು ತೆಗೆದುಕೊಳ್ಳಬಾರದಿತ್ತು ಎಂದಿದ್ದಾರೆ. "ಪಂದ್ಯಶ್ರೇಷ್ಠ ಪ್ರಶಸ್ತಿ ಪಡದವರನ್ನೇ ಹೊರಗಿಡುವುದು ಊಹಿಸಲೂ ಅಸಾಧ್ಯ. ಇದೊಂದೇ ಶಬ್ದವನ್ನು ನಾನು ಬಳಸಲು ಸಾಧ್ಯ ಮತ್ತು ಇದು ಗೌರವಯುತವಾದ ಶಬ್ದ. ಇಲ್ಲಿ ನಾನು ಬಹಳ ಕಠಿಣವಾದ ಶಬ್ದಗಳನ್ನು ಬಳಸಬೇಕೆಂದು ಬಯಸಿದ್ದೆ, ಆದರೆ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರನನ್ನೇ ಹೊರಗಿಡುವುದು ನಂಬಲು ಅಸಾಧ್ಯವಾಗಿದೆ. ಕಳೆದ ಪಂದ್ಯದಲ್ಲಿ 20 ವಿಕೆಟ್ಗಳ ಪೈಕಿ 8 ವಿಕೆಟ್ಗಳನ್ನು ಆತನೇ ಪಡೆದಿದ್ದ" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಸುನಿಲ್ ಗವಾಸ್ಕರ್.
"ನಿಮ್ಮಲ್ಲಿ ಮತ್ತಿಬ್ಬರು ಸ್ಪಿನ್ನರ್ಗಳು ಇದ್ದರು. ಅವರಲಿ ಒಬ್ಬರನ್ನು ನೀವು ತಂಡದಿಂದ ಕೈಬಿಡಬಹುದಾಗಿತ್ತು. ಆದರೆ ಕುಲ್ದೀಪ್ ಯಾದವ್ ಖಂಡಿತವಾಗಿಯೂ ಈ ಪಂದ್ಯದಲ್ಲಿ ಆಡಬೇಕಾಗಿತ್ತು. ಪಿಚ್ನ ಪರಿಸ್ಥಿರಿ ಹೇಗಿದ್ದರೂ ಆತನಿಗೆ ಅವಕಾಶ ದೊರೆಯಲೇಬೇಕಾಗಿತ್ತು" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್. ಸರಣಿಯ ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದಿದ್ದ ಕುಲ್ದೀಪ್ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಸಂಪಾದಿಸಿದ್ದರು.
ಟೀಮ್ ಇಂಡಿಯಾ: ಕೆಎಲ್ ರಾಹುಲ್(ನಾಯಕ), ಶುಬ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ರಿಷಬ್ ಪಂತ್(ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ಜಯದೇವ್ ಉನದ್ಕತ್, ಉಮೇಶ್ ಯಾದವ್, ಮೊಹಮ್ಮದ್ ಸಿರಾಜ್
ಬಾಂಗ್ಲಾದೇಶ: ನಜ್ಮುಲ್ ಹೊಸೈನ್ ಶಾಂಟೊ, ಜಾಕಿರ್ ಹಸನ್, ಮೊಮಿನುಲ್ ಹಕ್, ಲಿಟ್ಟನ್ ದಾಸ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್(ನಾಯಕ), ನೂರುಲ್ ಹಸನ್(ವಿಕೆಟ್ ಕೀಪರ್), ಮೆಹಿದಿ ಹಸನ್ ಮಿರಾಜ್, ತೈಜುಲ್ ಇಸ್ಲಾಂ, ಖಲೀದ್ ಅಹ್ಮದ್, ತಸ್ಕಿನ್ ಅಹ್ಮದ್