ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಏಕದಿನ ಪಂದ್ಯ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಎರಡೂ ಪಂದ್ಯಗಳನ್ನು ಗೆದ್ದಿರುವ ಟೀಮ್ ಇಂಡಿಯಾ, ಸರಣಿಯನ್ನು ವಶಕ್ಕೆ ಪಡೆದಿದೆ. ಈಗ ಮೂರನೇ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಸಾಧನೆ ಮಾಡುವ ಕನಸು ಹೊಂದಿದೆ. ಈ ಪಂದ್ಯಕ್ಕಾಗಿ ಭರದ ಸಿದ್ಧತೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ನಡೆಸಲು ಏರ್ಪಾಡಿಸಲಾಗಿದೆ.
ಟೀಮ್ ಇಂಡಿಯಾ ತವರಿನಲ್ಲಿ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ರೋಹಿತ್ ಶರ್ಮಾ ಲಯಕ್ಕೆ ಮರಳಿದ್ದಾರೆ. ಸ್ಟಾರ್ ಆಟಗಾರರು ತಂಡಕ್ಕೆ ನೆರವಾಗುತ್ತಿದ್ದಾರೆ. ಇನ್ನು ಟೀಮ್ ಇಂಡಿಯಾ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಲಯಕ್ಕೆ ಮರಳ ಬೇಕಿದೆ. ಇವರು ಮೋದಿ ಸ್ಟೇಡಿಯಂನಲ್ಲಿ ಲಯಕ್ಕೆ ಮರಳುವ ವಿಶ್ವಾಸ ಹೊಂದಿದ್ದಾರೆ. ಇನ್ನು ವಿರಾಟ್ ಅವರ ರುದ್ರಾವತಾರವನ್ನು ನೋಡಲು ಅಭಿಮಾನಿಗಳು ಸಹ ರೆಡಿಯಾಗಿದ್ದಾರೆ. ಆದರೆ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಐಸಿಸಿ ಚೇರೆಮನ್ ಜಯ್ ಶಾ ದೊಡ್ಡ ಅಪ್ಡೇಟ್ ನೀಡಿದ್ದಾರೆ.

ಫೆ.12 ರಂದು ನಡೆಯಲಿರುವ ಪಂದ್ಯಕ್ಕೂ ಮುನ್ನ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಜೈ ಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ವೇಳೆ ಅಂಗಾಂಗ ದಾನ, ಜೀವಗಳನ್ನು ಉಳಿಸಿ ಎಂಬ ಜಾಗೃತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. "ಅಂಗಗಳನ್ನು ದಾನ ಮಾಡಿ, ಜೀವಗಳನ್ನು ಉಳಿಸಿ" ಎಂಬ ಧ್ಯೇಯ ವಾಕ್ಯದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ ಅವರು ನಾವು ಪ್ರತಿಯೊಬ್ಬರೂ ಜೀವನದ ಅತ್ಯಂತ ಶ್ರೇಷ್ಠ ಕೊಡುಗೆಯನ್ನು ನೀಡುವತ್ತ ಚಿತ್ತ ನೆಡಬೇಕು. ನಾವು ಕೈಗೊಳ್ಳುವ ಆ ಒಂದು ಭರವಸೆ, ನಾವು ಕೈಗೊಳ್ಳುವ ಒಂದು ನಿರ್ಧಾರ, ಹಲವು ಜೀವಗಳನ್ನು ರಕ್ಷಿಸಬಹುದು. ಈ ನಿಟ್ಟಿನಲ್ಲಿ ನಾವೆಲ್ಲರು ಒಟ್ಟಾಗಿ ಬದಲಾವಣೆ ತರೋಣ ಎಂದು ಜಯ್ ಶಾ ಬರೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಈಗಾಗಲೇ ಸರಣಿಯನ್ನು ವಶಕ್ಕೆ ಮಾಡಿಕೊಂಡಿದ್ದರಿಂದ ಮೂರನೇ ಪಂದ್ಯದಲ್ಲಿ ಬದಲಾವಣೆಗಳನ್ನು ನೋಡಬಹುದಾಗಿದೆ. ಚಾಂಪಿಯನ್ಸ್ ಟ್ರೋಫಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಬೆಂಚ್ ಕಾಯುತ್ತಿರುವ ಆಟಗಾರರಿಗೂ ಆಡುವ ಅವಕಾಶ ಕಲ್ಪಿಸಬೇಕಿದೆ. ಈ ನಿಟ್ಟಿನಲ್ಲಿ ಅರ್ಷದೀಪ್ ಸಿಂಗ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದರೆ ಉತ್ತಮ. ಇವರು ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದು, ಇವರು ಮೈದಾನಕ್ಕೆ ಇಳಿದು ಬೌಲಿಂಗ್ ನಡೆಸಿದಲ್ಲಿ ಇವರಿಗೂ ಸಹ ಮ್ಯಾಚ್ ಪ್ರ್ಯಾಕ್ಟಿಸ್ ಆಗುತ್ತದೆ.
ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರಿಗೆ ಮೂರನೇ ಪಂದ್ಯದಲ್ಲಿ ಅವಕಾಶ ನೀಡಬೇಕು. ಇವರು ಸಹ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅಲ್ಲದೆ ಟೀಮ್ ಇಂಡಿಯಾದ ಹಾಲಿ ವಿಕೆಟ್ ಕೀಪರ್ ಕೆಎಲ್ ರಾಹುಲ್ ರನ್ ವೈಫಲ್ಯ ಅನುಭವಿಸುತ್ತಿದ್ದಾರೆ. ಇವರ ಬದಲಿಗೆ ಪಂತ್ ಅವರಿಗೆ ಅವಕಾಶ ನೀಡಿದರೆ ಒಳ್ಳೆಯದು ಎಂಬ ಮಾತುಗಳು ಕೇಳಿ ಬರುತ್ತಿವೆ.