ಗುರುವಾರ, ಮಾರ್ಚ್ 7ರಂದು ಧರ್ಮಶಾಲಾದ ಸುಂದರ ಎಚ್ಪಿಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರಂಭವಾಗಲಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್ ತಂಡಗಳು ಸೆಣಸಾಡಲಿವೆ.
ಈಗಾಗಲೇ ಐದು ಪಂದ್ಯಗಳ ಸರಣಿಯಲ್ಲಿ 3-1 ಅಂತರದ ಮುನ್ನಡೆ ಸಾಧಿಸಿರುವ ರೋಹಿತ್ ಶರ್ಮಾ ಪಡೆ ಸರಣಿ ವಶಪಡಿಸಿಕೊಂಡಿದೆ. ಕೊನೆಯ ಪಂದ್ಯವನ್ನು ಗೆದ್ದು ಸರಣಿ ಮುಗಿಸಲು ಉಭಯ ತಂಡಗಳು ಎದುರು ನೋಡುತ್ತಿವೆ.

ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಕೊನೆಯ ಟೆಸ್ಟ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಯಲ್ಲಿ ಮಾತನಾಡಿ, ಅಂತಿಮ ಪಂದ್ಯಕ್ಕೆ ತಂಡದ ಸಿದ್ಧತೆ ಬಗ್ಗೆ ವಿವರಿಸಿದರು.
ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ಗೆ ಯಾವುದೇ ಪ್ರಶಂಸೆ ಸಾಕಾಗುವುದಿಲ್ಲ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಹೇಳಿದ್ದಾರೆ. ತಮ್ಮ 100 ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ ಹಿರಿಯ ಆಫ್-ಸ್ಪಿನ್ನರ್ ಅಶ್ವಿನ್ ಅವರನ್ನು ಶ್ಲಾಘಿಸಿದರು. ಅವರನ್ನು ತಂಡದ ಯಶಸ್ಸಿಗೆ ಸತತವಾಗಿ ಕೊಡುಗೆ ನೀಡಿದ "ಅಪರೂಪದ' ಪ್ರತಿಭೆ ಎಂದು ಕರೆದರು.
ಗುರುವಾರ ಧರ್ಮಶಾಲಾದಲ್ಲಿ ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಸರಣಿಯ ಅಂತಿಮ ಫಲಿತಾಂಶಕ್ಕೆ ಅಪ್ರಸ್ತುತವೆನಿಸಿದೆ.

ಆದರೆ, ಭಾರತ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಇಂಗ್ಲೆಂಡ್ ಬ್ಯಾಟರ್ ಜಾನಿ ಬೈರ್ಸ್ಟೋವ್ ಅವರು ಸಾಧಿಸಲಿರುವ 100ನೇ ಟೆಸ್ಟ್ ಮೈಲಿಗಲ್ಲಿನಿಂದಾಗಿ ಇದು ಗಮನಾರ್ಹವಾಗಿದೆ.
"ಯಾವುದೇ ಆಟಗಾರನಿಗೆ 100 ಟೆಸ್ಟ್ ಆಡುವುದು ದೊಡ್ಡ ಸಾಧನೆ, ಇದು ದೊಡ್ಡ ಮೈಲಿಗಲ್ಲು. ಅಶ್ವಿನ್ ನಮಗೆ ಮ್ಯಾಚ್ ವಿನ್ನರ್ ಆಗಿದ್ದಾರೆ. ಅವರು ನಮಗಾಗಿ ಏನು ಮಾಡಿದ್ದಾರೆಯೋ, ಅದು ಯಾವುದೇ ಹೊಗಳಿಕೆ ಮಾತ್ರ ಸಾಕಾಗುವುದಿಲ್ಲ," ಎಂದು ರೋಹಿತ್ ಶರ್ಮಾ ಹೇಳಿದರು.
"ಕಳೆದ ಐದು-ಏಳು ವರ್ಷಗಳಲ್ಲಿ ಅವರ ಪ್ರದರ್ಶನಗಳು, ಅವರು ಕೊಡುಗೆ ನೀಡಿದ ಪ್ರತಿ ಸರಣಿಗಳು ಅದ್ಭುತವಾಗಿವೆ. ಅವರಂತಹ ಆಟಗಾರರನ್ನು ಹೊಂದಿರುವುದು ಅಪರೂಪ," ಎಂದು ಭಾರತ ತಂಡದ ನಾಯಕ ತಿಳಿಸಿದರು.
ರವಿಚಂದ್ರನ್ ಅಶ್ವಿನ್ 507 ಟೆಸ್ಟ್ ವಿಕೆಟ್ಗಳನ್ನು ಹೊಂದಿದ್ದಾರೆ. ಮಾಜಿ ದಿಗ್ಗಜ ಅನಿಲ್ ಕುಂಬ್ಳೆ ನಂತರ, ಅಶ್ವಿನ್ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಆಗಿದ್ದಾರೆ.
ಇದೇ ವೇಳೆ ಭಾರತ ತಂಡದ ನಾಯಕನ ಬೆಂಬಲ ಪಡೆದ ಮತ್ತೊಬ್ಬ ಆಟಗಾರ ರಜತ್ ಪಾಟಿದಾರ್. ಇಂಗ್ಲೆಂಡ್ ವಿರುದ್ಧದ ಈ ಸರಣಿಯಲ್ಲಿ ಚೊಚ್ಚಲ ಅವಕಾಶ ಪಡೆದ ರಜತ್ ಪಾಟಿದಾರ್ ಛಾಪು ಮೂಡಿಸಲು ಸಾಧ್ಯವಾಗಲಿಲ್ಲ.
"ರಜತ್ ಪಾಟಿದಾರ್ ಉತ್ತಮ ಸಾಮರ್ಥ್ಯ ಹೊಂದಿದ್ದಾನೆ, ನಾನು ಅವರನ್ನು ಇಷ್ಟಪಡುತ್ತೇನೆ. ನಾನು ಅವರನ್ನು ಪ್ರತಿಭಾವಂತ ಆಟಗಾರನಾಗಿ ನೋಡುತ್ತೇನೆ. ನಾವು ಅವರಿಗೆ ಸ್ವಲ್ಪ ಸಮಯ ನೀಡಬೇಕಾಗಿದೆ," ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ರೋಹಿತ್ ಶರ್ಮಾ ಅವರು ರಜತ್ ಪಾಟಿದಾರ್ ಬೆಂಬಲಕ್ಕೆ ನಿಂತಿದ್ದರಿಂದ, ಚೊಚ್ಚಲ ಟೆಸ್ಟ್ ಪಂದ್ಯವಾಡುವ ಕನಸು ಕಾಣುತ್ತಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ ಅವರಿಗೆ ನಿರಾಸೆ ಮೂಡಿಸಲಿದೆ. ತಮ್ಮ ಪದಾರ್ಪಣೆ ಪಂದ್ಯಕ್ಕೆ ಇನ್ನೂ ಕಾಯಬೇಕಾದ ಸಾಧ್ಯತೆ ಇದೆ.
ಸಾಮಾನ್ಯವಾಗಿ ಸರಣಿಯ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, ಕಠಿಣ ಪರಿಸ್ಥಿತಿಗಳಿಂದ ಪುಟಿದೇಳುವ ಭಾರತೀಯ ತಂಡದ ಸಾಮರ್ಥ್ಯವು ತಂಡದ ಪ್ರದರ್ಶನದ ಅಸಾಧಾರಣ ಅಂಶವಾಗಿದೆ ಎಂದು ತಿಳಿಸಿದರು.
"ನಮಗೆ ಇದು ಪುನರಾಗಮನದ ಸರಣಿಯಾಗಿದೆ. ನಾವು ಒತ್ತಡಕ್ಕೆ ಒಳಗಾದಾಗಲೆಲ್ಲಾ ಎದುರಾಳಿ ತಂಡದ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು. ಅದು ನನಗೆ ಸಂತಸ ತಂದಿದೆ," ಎಂದು ಹೇಳಿದರು.
ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ, ಧರ್ಮಶಾಲಾ ಟ್ರ್ಯಾಕ್ ಉತ್ತಮವಾಗಿರುತ್ತದೆ ಎಂದ ರೋಹಿತ್ ಶರ್ಮಾ, "ಭಾರತೀಯ ಪಿಚ್ನಂತೆ ಕಾಣುತ್ತದೆ. ತಾಪಮಾನ ಕಡಿಮೆಯಾದಾಗ ಸ್ವಲ್ಪ ಚಲನೆ ಇರುತ್ತದೆ. ಆದರೆ ಉತ್ತಮ ಪಿಚ್ನಂತೆ ಕಾಣುತ್ತದೆ," ಎಂದು ಅಭಿಪ್ರಾಯಪಟ್ಟರು.