ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಇಂದು ಸಂಜೆ 7 ಗಂಟೆಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಹೀನಾಯವಾಗಿ ಸೋಲಿಸಿದ ಆತಿಥೇಯ ಭಾರತ ತಂಡ ಉತ್ಸಾಹದಲ್ಲಿದೆ. ಆದರೆ, ಎರಡನೇ ಟಿ20 ಪಂದ್ಯಕ್ಕೆ ಕೆಲವೇ ಗಂಟೆಗಳ ಮುನ್ನ ಭಾರತ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಮೊದಲ ಟಿ20 ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್ ಮೂಲಕ ಸದ್ದು ಮಾಡಿದ್ದ ಟೀಮ್ ಇಂಡಿಯಾದ ಸ್ಫೋಟಕ ಬ್ಯಾಟರ್ ಗಾಯಗೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಎರಡನೇ ಪಂದ್ಯಕ್ಕೂ ಮುನ್ನ ಭಾರತದ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಗಾಯಗೊಂಡಿದ್ದಾರೆ. ಟೀಮ್ ಇಂಡಿಯಾದ ಅಭ್ಯಾಸದ ಸಮಯದಲ್ಲಿ ಅವರು ಕ್ಯಾಚಿಂಗ್ ಡ್ರಿಲ್ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ಗಾಯಗೊಂಡಿದ್ದಾರೆ. ಇದಾದ ನಂತರ ಅಭಿಷೇಕ್ ಮೈದಾನದಲ್ಲಿ ಕುಳಿತು ನೋವಿನಿಂದ ನರಳುತ್ತಿರುವುದು ಕಂಡುಬಂದಿತು.

ಅಭಿಷೇಕ್ ಶರ್ಮಾ ಗಾಯದ ಬಗ್ಗೆ ಟೀಮ್ ಇಂಡಿಯಾ ಫಿಸಿಯೋಥೆರಪಿಸ್ಟ್ ಪರೀಕ್ಷಿಸಿದ್ದಾರೆ. ಬಳಿಕ ವಿಶ್ರಾಂತಿಗಾಗಿ ಪೆವಿಲಿಯನ್ಗೆ ಕರೆದೊಯ್ದಿದ್ದಾರೆ. ಘಟನೆ ಬಳಿಕ ನೆಟ್ಸ್ನಲ್ಲಿ ಬ್ಯಾಟಿಂಗ್ ಮಾಡಲು ಅಭಿಷೇಕ್ ಮೈದಾನಕ್ಕೆ ಬಂದಿಲ್ಲ. ಅವರ ಗಾಯ ಎಷ್ಟು ಗಂಭೀರವಾಗಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಅವರ ಗಾಯದ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಗಾಯದ ನಂತರ, ಅವರು ಪೆವಿಲಿಯನ್ಗೆ ಹೋಗುವಾಗ ಸ್ವಲ್ಪ ಕುಂಟುತ್ತಿರುವುದು ಕಂಡುಬಂದಿದೆ. ಹೀಗಾಗಿ ಸ್ಪೋಟಕ ಬ್ಯಾಟರ್ ಎರಡನೇ ಟಿ20 ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಅಭಿಷೇಕ್ ಎರಡನೇ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದರೆ, ಮೊಹಮ್ಮದ್ ಶಮಿ ಅವರ ಬದಲಿಗೆ ಪ್ಲೇಯಿಂಗ್ -11 ಗೆ ಮರಳಬಹುದು. ಅಲ್ಲದೆ, ಟೀಮ್ ಇಂಡಿಯಾ ಪರ ಸಂಜು ಸ್ಯಾಮ್ಸನ್ ಜೊತೆಗೆ ಸೂರ್ಯಕುಮಾರ್ ಅಥವಾ ತಿಲಕ್ ವರ್ಮ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯಿದೆ. ಮೊಹಮ್ಮದ್ ಶಮಿ ಅವರಿಗೆ ಮೊದಲ ಟಿ20 ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ನಾಯಕ ಸೂರ್ಯಕುಮಾರ್ ಯಾದವ್ ಏಕೈಕ ವೇಗದ ಬೌಲರ್ ಆಗಿ ಅರ್ಷದೀಪ್ ಸಿಂಗ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಿದ್ದರು.
ಟೀಮ್ ಇಂಡಿಯಾ ಸಂಭಾವ್ಯ ಪ್ಲೇಯಿಂಗ್-11: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್ (ಉಪನಾಯಕ), ಅರ್ಷದೀಪ್ ಸಿಂಗ್, ನಿತೀಶ್ ಕುಮಾರ್ ರೆಡ್ಡಿ, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ಮತ್ತು ಮಹಮ್ಮದ್ ಶಮಿ.