ಗುರುವಾರ, ಫೆಬ್ರವರಿ 15ರಂದು ರಾಜ್ಕೋಟ್ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (ಎಸ್ಸಿಎ) ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಹಣಾಹಣಿ ನಡೆಸಲಿವೆ.
ಇನ್ನು ಆತಿಥೇಯ ಭಾರತ ತಂಡವು ರಾಜ್ಕೋಟ್ನಲ್ಲಿ ತಮ್ಮ ಮೂರನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದ್ದಂತೆ, ಟೀಮ್ ಇಂಡಿಯಾ ಸರ್ಫರಾಜ್ ಖಾನ್ ಬದಲಾಗಿ ದೇವದತ್ ಪಡಿಕ್ಕಲ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಹಾಗೂ ಕಾಮೆಂಟೇಟರ್ ಬ್ರಾಡ್ ಹಾಗ್ ಹೇಳಿದ್ದಾರೆ.

ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿರುದ್ಧದ ಗೆಲುವು ಮತ್ತು ಐದು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದ ಆತ್ಮವಿಶ್ವಾಸದೊಂದಿಗೆ, ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮೂರನೇ ಟೆಸ್ಟ್ನಲ್ಲಿ ಗೆಲುವಿನೊಂದಿಗೆ ಮುನ್ನಡೆ ಸಾಧಿಸಲು ಪ್ರಯತ್ನಿಸಲಿದೆ.
ಆದರೆ, ಭಾರತ ತಂಡವು ಸರಣಿಯ ಆರಂಭದಿಂದಲೂ ಗಾಯ ಮತ್ತು ಸ್ಟಾರ್ ಆಟಗಾರರ ಅನುಪಸ್ಥಿತಿಯ ಸಮಸ್ಯೆಗಳಿಂದ ಬಳಲುತ್ತಿದೆ.
ವೈಯಕ್ತಿಕ ಕಾರಣಗಳಿಂದ ವಿರಾಟ್ ಕೊಹ್ಲಿ ಎಲ್ಲಾ ಐದು ಪಂದ್ಯಗಳಿಂದ ಹಿಂದೆ ಸರಿದಿದ್ದರೆ, ಕೆಎಲ್ ರಾಹುಲ್ ಫಿಟ್ನೆಸ್ ಸಮಸ್ಯೆಗಳಿಂದ ಎರಡು ಮತ್ತು ಮೂರನೇ ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಇದು ಆತಿಥೇಯ ತಂಡದ ಬ್ಯಾಟಿಂಗ್ ಲೈನ್ಅಪ್ನಲ್ಲಿ ಗಮನಾರ್ಹ ಹಿನ್ನಡೆಯಾಗಿದೆ.

ಇನ್ನು ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾರತೀಯ ತಂಡದ ಭಾಗವಾಗಿದ್ದ ಮತ್ತೊಬ್ಬ ಪ್ರಮುಖ ಭಾರತೀಯ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಸರಣಿಯ ಉಳಿದ ಮೂರು ಪಂದ್ಯಗಳಿಗೆ ಬಿಸಿಸಿಐ ಪ್ರಕಟಿಸಿದ ತಂಡದಿಂದ ಹೊರಬಿದ್ದಿದ್ದಾರೆ.
ಮೊದಲ ಎರಡು ಟೆಸ್ಟ್ ಪಂದ್ಯಗಳಲ್ಲಿಯೂ ಭಾರತ ತಂಡದಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಈ ಹಿಂದೆ ಸರಣಿಯಲ್ಲಿ 26 ವರ್ಷದ ಸರ್ಫರಾಜ್ ಖಾನ್ ಮತ್ತು 30 ವರ್ಷದ ರಜತ್ ಪಾಟಿದಾರ್ ಅವರನ್ನು ಕ್ರಮವಾಗಿ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಬದಲಿಗೆ ದೇಶೀಯ ಕ್ರಿಕೆಟ್ನಲ್ಲಿ ಅವರ ಪ್ರಭಾವಿ ಪ್ರದರ್ಶನದಿಂದಾಗಿ ಆಯ್ಕೆ ಮಾಡಲಾಗಿತ್ತು.
ಇದೀಗ ಅದೇ ರೀತಿ ರಾಜ್ಕೋಟ್ ಟೆಸ್ಟ್ ಪಂದ್ಯಕ್ಕಾಗಿ ವೇಗಿ ಆಕಾಶ್ ದೀಪ್ ಮತ್ತು ದೇವದತ್ ಪಡಿಕ್ಕಲ್ ತಂಡಕ್ಕೆ ಸೇರ್ಪಡೆಗೊಂಡಿದ್ದು, ತಂಡದ ಆಯ್ಕೆಯ ಬಗ್ಗೆ ಹೊಸ ಅನುಮಾನಗಳಿಗೆ ಕಾರಣವಾಗಿದೆ.
ಆಸ್ಟ್ರೇಲಿಯಾ ಮಾಜಿ ಸ್ಪಿನ್ನರ್ ಬ್ರಾಡ್ ಹಾಗ್ ಅವರು ಇತ್ತೀಚಿಗೆ ತಮ್ಮ ಯೂಟ್ಯೂಬ್ ವಿಡಿಯೋದಲ್ಲಿ, ದೇವತ್ ಪಡ್ಡಿಕಲ್ ದೇಶೀಯ ಕ್ರಿಕೆಟ್ನಲ್ಲಿ ತೋರಿದ ಬ್ಯಾಟಿಂಗ್ ಹಿಡಿತದಿಂದಾಗಿ ಸರ್ಫರಾಜ್ ಖಾನ್ಗೂ ಮೊದಲು ಹೇಗೆ ಮೇಲುಗೈ ಸಾಧಿಸಿದ್ದಾರೆ ಎಂಬುದನ್ನು ವಿವರಿಸಿದರು.
"ಟೀಮ್ ಇಂಡಿಯಾ ಸರ್ಫರಾಜ್ ಖಾನ್ಗೂ ಮುನ್ನ ದೇವದತ್ ಪಡಿಕ್ಕಲ್ ಜೊತೆ ಹೋಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಎಡಗೈ ಬ್ಯಾಟರ್ ರಣಜಿಯಲ್ಲಿ ತಮಿಳುನಾಡು ವಿರುದ್ಧ ಉತ್ತಮ ಶತಕ ಗಳಿಸಿದ್ದಾರೆ, ಇದು ಅದ್ಭುತ ಇನ್ನಿಂಗ್ಸ್ ಆಗಿದೆ," ಎಂದರು.
ಕೋಚ್ ರಾಹುಲ್ ದ್ರಾವಿಡ್ ಅಗ್ರ ಕ್ರಮಾಂಕದ ಬ್ಯಾಟರ್ಗಳ ದೊಡ್ಡ ಅಭಿಮಾನಿ. ನೀವು ಒಂದಕ್ಕಿಂತ ಹೆಚ್ಚು ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡಲು ಶಕ್ತರಾಗಿರಬೇಕು ಮತ್ತು ದೇವದತ್ ಪಡಿಕ್ಕಲ್ ಅದನ್ನು ಮಾಡುತ್ತಾರೆ,'' ಎಂದು ಬ್ರಾಡ್ ಹಾಗ್ ತಿಳಿಸಿದರು.
ಸರ್ಫರಾಜ್ ಖಾನ್ನ ಸಾಮರ್ಥ್ಯಗಳನ್ನು ಒಪ್ಪಿಕೊಂಡರೂ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (ಐಪಿಎಲ್) ತನ್ನ ಕೊನೆಯ ಕೆಲವು ಇನ್ನಿಂಗ್ಸ್ಗಳಲ್ಲಿ ವೇಗದ ಬೌಲಿಂಗ್ ದಾಳಿಯನ್ನು ಎದುರಿಸಲು ಯುವ ಆಟಗಾರನ ಅಸಮರ್ಥತೆಯನ್ನು ಬ್ರಾಡ್ ಹಾಗ್ ಎತ್ತಿ ತೋರಿಸಿದರು.
"ಐಪಿಎಲ್ನಲ್ಲಿ ಸರ್ಫರಾಜ್ ಖಾನ್ಗೆ ವೇಗದ ದಾಳಿ ವಿರುದ್ಧ ಸ್ವಲ್ಪ ತೊಂದರೆ ಪಡುವುದನ್ನು ನಾವು ನೋಡಿದ್ದೇವೆ. ಆದರೆ ಅವರು ಅದರಲ್ಲಿ ಕೆಲಸ ಮಾಡುತ್ತಿದ್ದರೆ, ನಾನು ಸರ್ಫರಾಜ್ ಖಾನ್ ಜೊತೆ ಹೋಗುತ್ತೇನೆ. ಆದರೆ ನಾನು ಸದ್ಯ ದೇವದತ್ ಪಡಿಕ್ಕಲ್ ಜೊತೆ ಹೋಗುತ್ತೇನೆ. ಭಾರತಕ್ಕೆ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಆಟಗಾರ ಕೊಡುಗೆ ನೀಡುವುದನ್ನು ನಾನು ಇಷ್ಟಪಡುತ್ತೇನೆ," ಎಂದು ಬ್ರಾಡ್ ಹಾಗ್ ಅಭಿಪ್ರಾಯಪಟ್ಟರು.
ಅನೇಕ ಅನುಭವಿ ಆಟಗಾರರು ತಂಡದಿಂದ ಕಾಣೆಯಾಗಿರುವುದರಿಂದ, ಟೀಮ್ ಇಂಡಿಯಾ ಆಯ್ಕೆಗಾರರು ರಾಷ್ಟ್ರೀಯ ತಂಡಕ್ಕೆ ಕಿರಿಯ ಆಟಗಾರರೊಂದಿಗೆ ಹೋಗುವ ಲಕ್ಷಣಗಳನ್ನು ಹೆಚ್ಚಾಗಿ ತೋರಿಸಿದ್ದಾರೆ. ಇದು ರಾಜ್ಕೋಟ್ ಟೆಸ್ಟ್ ಪಂದ್ಯದಲ್ಲಿ ಪ್ರಮುಖ ಅಂಶವಾಗಿರಬಹುದು. ಈ ವೇಳೆ ದೇವದತ್ ಪಡಿಕ್ಕಲ್ ಅಥವಾ ಸರ್ಫರಾಜ್ ಖಾನ್ ಭಾರತ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡುವುದನ್ನು ನೋಡಬಹುದು.